
ಸಂಕ್ಲಾಪುರ(ಸೈದಾಪುರ): ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ನಮ್ಮ ಜಾನಪದ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರಡ್ಡಿ ಅನಪೂರ ಹೇಳಿದರು.
ಸಮೀಪದ ಸಂಕ್ಲಾಪುರ ಗ್ರಾಮದಲ್ಲಿ ವಂಕಸಂಬ್ರ ಗ್ರಾಮದ ಶ್ರೀನಿವಾಸ ರಂಗಭೂಮಿ ಸಂಗೀತ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ಸಂಸ್ಥೆ ವತಿಯಿಂದ ಗ್ರಾಮದೇವತೆ ತಾಯಮ್ಮ ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಗಿರಿಜಾ ಕಲ್ಯಾಣ ಬಯಲಾಟ ಪ್ರದರ್ಶನ ಕಾಯಕ್ರಮದಲ್ಲಿ ಅವರು ಮಾತನಾಡಿದರು.
‘ಗ್ರಾಮೀಣ ಭಾಗದ ಗಂಡುಮೆಟ್ಟಿನ ಕಲೆ ಬಯಲಾಟ. ಚಲನಚಿತ್ರ, ದೂರದರ್ಶನ ಮಾಧ್ಯಮ, ಆಧುನಿಕ ತಂತ್ರಜ್ಞಾನದಿಂದಾಗಿ ಈ ಕಲೆಯು ಮರೀಚಿಕೆಯತ್ತ ಸರಿಯುತ್ತಿದೆ. ಹಿಂದಿನ ಕಾಲದಲ್ಲಿ ಮನರಂಜನೆ ಹಾಗೂ ಕಲಾಭಿವ್ಯಕ್ತಿಗೆ ಇದ್ದ ಮಾರ್ಗಗಳಲ್ಲಿ ಬಯಲಾಟವೂ ಒಂದಾಗಿತ್ತು. ಪ್ರತಿ ಗ್ರಾಮಗಳಲ್ಲಿ ಈ ಕಲೆ ಪ್ರದರ್ಶನ ಇರುತ್ತಿತ್ತು. ಎಲ್ಲರೂ ಕಲೆ, ಹಾಡು, ನೃತ್ಯ, ನಾಟಕ ಬಲ್ಲವರಾಗಿರುತ್ತಿದ್ದರು’ ಎಂದರು.
‘ಇಂದಿನ ಯುವ ಸಮೂಹಕ್ಕೆ ಗ್ರಾಮೀಣ ಸೊಗಡಿನ ಕಲೆಗಳ ಬಗ್ಗೆ ಅರಿವು ಇಲ್ಲದಂತಾಗಿದೆ. ಆದ್ದರಿಂದ ಪೋಷಕರು ಮಕ್ಕಳಿಗೆ ಇಂತಹ ಕಲೆ, ಸಾಹಿತ್ಯದ ಬಗ್ಗೆ ತಿಳಿಸಿಕೊಟ್ಟು ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ನಿರ್ವಹಿಸಬೇಕು’ ಎಂದು ಹೇಳಿದರು.
ಜೈಗ್ರಾಮ್ ಗ್ರಾ.ಪಂ ಅಧ್ಯಕ್ಷ ಬಿ.ವಿನಾಯಕರಡ್ಡಿ, ಅನಂತರಡ್ಡಿ ಕೊಂಕಲ್, ಸಂಜೀವರಡ್ಡಿ, ಓವಯ್ಯ ಸಂಕ್ಲಾಪುರ, ತಿಪ್ಪಣ್ಣ ಸಂಕ್ಲಾಪುರ, ರಂಗಭೂಮಿ ಸಂಗೀತ ಸಾಹಿತ್ಯ, ಸಾಂಸ್ಕೃತಿಕ ಕಲಾ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ, ಭೀಮಯ್ಯ ವಂಕಸಂಬ್ರ, ಸಂಸ್ಥೆಯ ಅಧ್ಯಕ್ಷ ಹಾಗೂ ಬಯಲಾಟ ಶಿಕ್ಷಕ ಹಣಮಂತ ಸೇರಿದಂತೆ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.