ADVERTISEMENT

ಶಹಾಪುರ: ಹತ್ತಿ ಮಾರಾಟಕ್ಕೆ ಪ್ರಚಾರದ ಕೊರತೆ ಪರದಾಟ

ಟಿ.ನಾಗೇಂದ್ರ
Published 27 ಅಕ್ಟೋಬರ್ 2025, 5:25 IST
Last Updated 27 ಅಕ್ಟೋಬರ್ 2025, 5:25 IST
21ಎಸ್ಎಚ್ಪಿ 1: ಶಹಾಪುರ ತಾಲ್ಲೂಕಿನ ಮುಡಬೂಳ ಗ್ರಾಮದಲ್ಲಿ ಹತ್ತಿ ಕೀಳಲು ಬಂದಿದೆ
21ಎಸ್ಎಚ್ಪಿ 1: ಶಹಾಪುರ ತಾಲ್ಲೂಕಿನ ಮುಡಬೂಳ ಗ್ರಾಮದಲ್ಲಿ ಹತ್ತಿ ಕೀಳಲು ಬಂದಿದೆ   

ಶಹಾಪುರ: 2025-26ನೇ ಸಾಲಿನಲ್ಲಿ ಹತ್ತಿ ಬೆಳೆಗಾರರಿಂದ ಭಾರತೀಯ ಹತ್ತಿ ನಿಗಮ (ಸಿಸಿಐ) ಬೆಂಬಲ ಯೋಜನೆ ಅಡಿಯಲ್ಲಿ (ಕಪಾಸ್ ಕಿಸಾನ್) ಮೂಲಕ ಹತ್ತಿ ಖರೀದಿಗೆ ಮುಂದಾಗಿದೆ. ಹತ್ತಿ ನಿಗಮವು ವ್ಯಾಪಕ ಪ್ರಚಾರ ಮಾಡದಿರುವುದು, ರೈತರಲ್ಲಿ ಜಾಗೃತಿ ಕೊರತೆಯಿಂದ ರೈತರು ಹತ್ತಿ ಮಾರಾಟ ಮಾಡಬೇಕು ಎಂದರೆ ಮತ್ತೊಂದು ಹೋರಾಟಕ್ಕೆ ಸಿದ್ದಗೊಳುವಂತೆ ಮಾಡಿದೆ ಎಂಬ ಕೂಗು ಹತ್ತಿ ಬೆಳೆದ ರೈತರಿಂದ ಕೇಳಿ ಬರುತ್ತಲಿದೆ.

ಕೇಂದ್ರ ಸರ್ಕಾರ ಹತ್ತಿ ಖರೀದಿಯಲ್ಲಿನ ನ್ಯೂನ್ಯತೆಯನ್ನು ಸರಿಪಡಿಸಿ ನಿಜವಾಗಿ ಹತ್ತಿ ಬೆಳೆದ ರೈತರಿಗೆ ಮಾತ್ರ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಕಳೆದ ಸೆಪ್ಟಂಬರ್‌ ಒಂದರಿಂದ ನೋಂದಣಿ ಆರಂಭಿಸಿದೆ. ಅಗತ್ಯ ದಾಖಲೆಗಳನ್ನು ಅಪಲೋಡ್ ಮಾಡಿ ಅರ್ಜಿ ಸಲ್ಲಿಸಬೇಕು.

ಮಧ್ಯಮ ಎಳೆ ಪ್ರತಿ ಕ್ವಿಂಟಾಲ್ ಗೆ ₹ 7,710 ಹಾಗೂ ಉದ್ದನೆಯ ಎಳೆ ₹ 8,110 ನಿಗದಿಪಡಿಸಿದೆ. ಸದ್ಯ ತಾಲ್ಲೂಕಿನಲ್ಲಿ 39 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ವಿವಿಧ ತಳಿಯ ಹತ್ತಿ ಬಿತ್ತನೆ ಮಾಡಿದ್ದಾರೆ ಎಂದು ಸಹಾಯಕ ಕೃಷಿ ನಿರ್ದೇಶಕ ಸುನಿಲಕುಮಾರ ಯರಗೋಳ ಮಾಹಿತಿ ನೀಡಿದರು.

ADVERTISEMENT

ರೈತರು ಯಾವ ಬೆಳೆ ಬೆಳೆದಿದ್ದಾರೆ ಎಂದು ಖಾತರಿಪಡಿಸಿಕೊಳ್ಳಲು ರೈತರ ಜಮೀನುಗಳಿಗೆ ಗ್ರಾಮ ಅಡಳಿತಾಧಿಕಾರಿ (ವಿ.ಎ) ಆಗಮಿಸುವುದಿಲ್ಲ. ಅಂದಾಜಿನ ಮೇಲೆ ಬೆಳೆ ನಮೂದಿಸುತ್ತಾರೆ. ಸರಿಯಾದ ದಾಖಲೆ ಲಭ್ಯತೆಯ ಕೊರತೆಯಿಂದ ಕಂದಾಯ ಪ್ರಾಧಿಕಾರ ಪ್ರಮಾಣ ಪತ್ರ ನೀಡುವುದಿಲ್ಲ.

ರೈತರ ಜಮೀನಿನ ಮಾಲೀಕನ ಹೆಸರು ಹಾಗೂ ಆಧಾರ ಕಾರ್ಡ್ ನಲ್ಲಿ ಇರುವ ಹೆಸರು ತಾಳೆ ಆಗದಿದ್ದರೆ ನೋಂದಣಿ ತಿರಸ್ಕೃತಗೊಳ್ಳುತ್ತದೆ. ಇದರಿಂದ ರೈತರು ಬೇಸತ್ತು ಅನಿವಾರ್ಯವಾಗಿ ರಸ್ತೆ ಬದಿಯಲ್ಲಿ ಮಾರಾಟ ಮಾಡುವ ದಲ್ಲಾಳಿಯ ಬಳಿ ಮಾರಾಟಕ್ಕೆ ಮೊರೆ ಹೋಗುತ್ತಿದ್ದಾರೆ ಎನ್ನುತ್ತಾರೆ ರೈತ ಮುಖಂಡ ಯಲ್ಲಯ್ಯ ನಾಯಕ ವನದುರ್ಗ.

ಈಗಾಗಲೇ ರೈತರು ಅತಿವೃಷ್ಟಿಯಿಂದ ಕಂಗೆಟ್ಟು ಹೋಗಿದ್ದಾರೆ. ಲಭ್ಯವಿದ್ದ ಬೆಳೆಯಲ್ಲಿ ಶೇ 40ರಷ್ಟು ಇಳುವರಿ ಕುಂಠಿತವಾಗಿದೆ. ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಹತ್ತಿ ಬಿತ್ತನೆ ಪ್ರದೇಶ ಶಹಾಪುರ ತಾಲ್ಲೂಕಿನದ್ದು ಆಗಿದೆ. ರೈತರ ಸಂಕಷ್ಟದ ಜತೆ ಚೆಲ್ಲಾಟ ಆಡದೆ ಭಾರತೀಯ ಹತ್ತಿ ನಿಗಮವು ನೇರವಾಗಿ ರೈತರ ಬಳಿಗೆ ಬಂದು ಹತ್ತಿ ಖರೀದಿಸಲು ಮುಂದಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ.

21ಎಸ್ಎಚ್ಪಿ 1(2): ಡಾ.ಸುನೀಲಕುಮಾರ ಯರಗೋಳ
21ಎಸ್ಎಚ್ಪಿ 1(3): ಯಲ್ಲಯ್ಯ ನಾಯಕ ವನದುರ್ಗ

Highlights - ತಾಲ್ಲೂಕಿನಲ್ಲಿ 39 ಸಾವಿರ ಹೆಕ್ಟೆರ್ ಹತ್ತಿ ಬಿತ್ತನೆ ಪಹಣಿಯಲ್ಲಿ ಬೆಳೆ ನಮೂದು ತಾಪತ್ರೆ ಕೇವಲ 500 ರೈತರಿಂದ ಮಾತ್ರ ನೋಂದಣಿ

Quote - ಪ್ರಸಕ್ತ ವರ್ಷದಿಂದ ಹತ್ತಿ ಮಾರಾಟ ಮಾಡಬೇಕೆಂದರೆ ಮುಂಚಿತವಾಗಿ ಕಪಾಸ್ ಕಿಸಾನ್ ಮೊಬೈಲ್ ಅರ್ಜಿಯ ಮೂಲಕ ಆನ್‌ಲೈನ್‌ ನೋಂದಣಿ ಮಾಡಿಕೊಳ್ಳಬೇಕು. ಈಗಾಗಲೇ 500 ರೈತರು ನೋಂದಣಿ ಮಾಡಿಸಿದ್ದಾರೆ. ರೈತರು ನೇರವಾಗಿ ಹತ್ತಿ ಖರೀದಿ ಕೇಂದ್ರದ ಮೂಲಕ ಮಾರಾಟ ಮಾಡಿ. ಸುನಿಲಕುಮಾರ ಯರಗೋಳ ಸಹಾಯಕ ಕೃಷಿ ನಿರ್ದೇಶಕ

Quote - ಸಿಸಿಐ ಕೇಂದ್ರವು ರೈತರ ಸಮಸ್ಯೆಯನ್ನು ಅರಿತುಕೊಂಡು ಮಾರಾಟದ ವ್ಯವಸ್ಥೆಯನ್ನು ಸರಳೀಕರಿಸಬೇಕು. ಇದರಿಂದ ದಲ್ಲಾಳಿಗಳಿಗೆ ಮಾರಾಟ ಮಾಡಲು ಅಪರೋಕ್ಷವಾಗಿ ನೆರವು ನೀಡಿದಂತೆ ಆಗುತ್ತದೆ. ಯಲ್ಲಯ್ಯ ನಾಯಕ ವನದುರ್ಗ ರೈತ ಮುಖಂಡ

Cut-off box - ಹತ್ತಿ ಖರೀದಿ ಮಾರುಕಟ್ಟೆ ಸ್ಥಾಪಿಸಿ ಶಹಾಪುರ: ತಾಲ್ಲೂಕಿನಲ್ಲಿ 21 ಹತ್ತಿ ಕಾರ್ಖಾನೆಗಳು ಇವೆ. ಸಾಕಷ್ಟು ಹತ್ತಿ ವಹಿವಾಟು ಇದೆ. ರೈತರು ಹಲವಾರು ವರ್ಷದಿಂದ ತಾಲ್ಲೂಕಿನ ಎಪಿಎಂಸಿ ಪ್ರಾಂಗಣದಲ್ಲಿ ಶಾಶ್ವತವಾದ ಹತ್ತಿ ಖರೀದಿ ಮಾರುಕಟ್ಟೆ ಸ್ಥಾಪಿಸಿ ಎಂಬ ರೈತರ ಒಕ್ಕೋರಲಿನ ಬೇಡಿಕೆಯು ಅರಣ್ಯರೋಧನನವಾಗಿದೆ. ಹತ್ತಿ ಖರೀದಿ ಕೇಂದ್ರ ಬೇಡ ಮಾರುಕಟ್ಟೆ ಸ್ಥಾಪಿಸಲು ಪ್ರಾಮಾಣಿಕ ಯತ್ನ ಮಾಡಬೇಕು ಎಂದು ಸಿಪಿಐ(ಎಂ) ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಚೆನ್ನಪ್ಪ ಆನೇಗುಂದಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.