ADVERTISEMENT

ಶಹಾಪುರ: ಹಸಿವಿನಿಂದ ಬಳಲಿದ ಶ್ವಾನಗಳಿಗೆ ಊಟ

​ಪ್ರಜಾವಾಣಿ ವಾರ್ತೆ
Published 3 ಜೂನ್ 2021, 5:03 IST
Last Updated 3 ಜೂನ್ 2021, 5:03 IST
ಶಹಾಪುರ ನಗರದ ಹಳೆ ಬಸ್ ನಿಲ್ದಾಣದಲ್ಲಿ ಬುಧವಾರ ಚೆನ್ನಯ್ಯ ಸ್ಥಾವರಮಠ ಅವರು ಶ್ವಾನಗಳಿಗೆ ಆಹಾರ ನೀಡಿದರು
ಶಹಾಪುರ ನಗರದ ಹಳೆ ಬಸ್ ನಿಲ್ದಾಣದಲ್ಲಿ ಬುಧವಾರ ಚೆನ್ನಯ್ಯ ಸ್ಥಾವರಮಠ ಅವರು ಶ್ವಾನಗಳಿಗೆ ಆಹಾರ ನೀಡಿದರು   

ಶಹಾಪುರ: ಲಾಕ್‌ಡೌನ್‌ ಆರಂಭ ಗೊಳ್ಳುತ್ತಿದ್ದಂತೆ ಹೊಟೇಲ್, ಖಾನಾವಳಿ ಎಲ್ಲವೂ ಬಂದ್ ಆಗಿದ್ದರಿಂದ ಬೀದಿ ನಾಯಿಗಳಿಗೆ ತುತ್ತು ಆಹಾರವೂ ಸಿಗದೆ ಸಂಕಷ್ಟಕ್ಕೀಡಾಗಿವೆ. ನಗರದ ಮೂವರು ಗೆಳೆಯರು ಸೇರಿಕೊಂಡು ಶ್ವಾನಗಳಿಗೆ ಊಟ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಲಾಕ್‌ಡೌನ್ ಆರಂಭವಾದ ದಿನದಿಂದಲೂ ಜಗದೀಶ ಆನೇಗುಂದಿ, ಚೆನ್ನಯ್ಯ ಸ್ಥಾವರಮಠ ಹಾಗೂ ಪವನ ಜೈನ್ ನಿತ್ಯ ಆಹಾರ ತಯಾರಿಸಿ, ಬೀದಿ ನಾಯಿಗಳಿಗೆ ಊಟ ನೀಡುತ್ತಿದ್ದಾರೆ.

ಖಾನಾವಳಿ, ಹೊಟೇಲ್, ದಾಬಾ, ರೆಸ್ಟೊರೆಂಟ್ ಮುಂತಾದ ಕಡೆ ಉಳಿದ ಆಹಾರವನ್ನು ಬೀಸಾಕಿದಾಗ ಶ್ವಾನ ಹಾಗೂ ಇನ್ನಿತರ ಪ್ರಾಣಿಗಳು ತಿಂದು ಜೀವಿಸುತ್ತಿದ್ದವು. ಲಾಕ್‌ಡೌನ್ ಸಂಪೂರ್ಣವಾಗಿ ಅಂಗಡಿ ಮುಂಗಟ್ಟು ಬಂದ ಆಗಿವೆ. ಕುಡಿಯುವ ನೀರು ಸೇರಿದಂತೆ ಆಹಾರವಿಲ್ಲದೆ ಪರದಾಡುತ್ತಲಿವೆ. ಕೆಲ ಸಮಾಜಮುಖಿ ಸಂಘಟನೆಗಳು ಬಡವರಿಗೆ ಆಹಾರ ಧಾನ್ಯ ವಿತರಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಪ್ರಾಣಿಗಳಿಗೂ ಸಹ ಅನ್ನ ಸಿಗದ ಪರಿಸ್ಥಿತಿಯಿದೆ. ಗೆಳೆಯರೊಂದಿಗೆ ಈ ಕುರಿತು ಚರ್ಚಿಸಿ ಶ್ವಾನಗಳಿಗೆ ಊಟ ನೀಡುವ ಕಾರ್ಯ ಹಮ್ಮಿಕೊಂಡೆವು ಎನ್ನುತ್ತಾರೆ ಜಗದೀಶ ಆನೇಗುಂದಿ.

ADVERTISEMENT

ಗೆಳೆಯರು ಕೂಡಿಕೊಂಡು ನಗರದ ಹಳೆ ಬಸ್ ನಿಲ್ದಾಣ, ಸಿ.ಬಿ.ಕಮಾನ, ಬಸವೇಶ್ವರ ವೃತ್ತ, ವಾಲ್ಮೀಕಿ ವೃತ್ತ, ಗಾಂಧಿಚೌಕ್, ಮೊಚಿಗಡ್ಡೆ ಮುಂತಾದ ಜನವಸತಿ ಪ್ರದೇಶದಲ್ಲಿ ರಟ್ಟಿನ ತಟ್ಟೆಯ ಮೇಲೆ ಅನ್ನವನ್ನು ಹಾಕುತ್ತೇವೆ. ನೇರವಾಗಿ ನಾಯಿಗಳು ಆಗಮಿಸಿ ಸೇವಿಸುತ್ತಲಿವೆ. ಪ್ರತಿದಿನ 7ರಿಂದ 10 ಕೆ.ಜಿ ಅನ್ನವನ್ನು ನಮ್ಮ ಸ್ವಂತ ವಾಹನದ ಮೇಲೆ ಇಟ್ಟುಕೊಂಡು ವಿತರಿಸಿ ಬರುತ್ತೇವೆ ಎನ್ನುತ್ತಾರೆ ಚೆನ್ನಯ್ಯ ಸ್ಥಾವರಮಠ, ಪವನ ಜೈನ್.

ನಗರದ ಹಲವು ಕಡೆ ನಿರ್ಗಗತಿಕ ಹಾಗೂ ಬುದ್ದಿಮಾಂದ್ಯ ಜನತೆಯು ಊಟಕ್ಕಾಗಿ ಪರದಾಡುತ್ತಿದ್ದಾರೆ. ನಿರ್ಗಗತಿಕರಿಗೆ ಲಾಕ್ ಡೌನ್ ಸಮಯದಲ್ಲಿ ಪ್ರಮುಖ ಸ್ಥಳಗಳಲ್ಲಿ ಊಟದ ವ್ಯವಸ್ಥೆ ಮಾಡಿ ಹಸಿವಿನಿಂದ ಬಳಲುತ್ತಿರುವ ಜನತೆಯನ್ನು ರಕ್ಷಿಸಬೇಕು ಎಂದು ನಗರ ಆಶ್ರಯ ಸಮಿತಿ ಅಧ್ಯಕ್ಷ ವಸಂತ ಸುರಪುರಕರ್ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.