ADVERTISEMENT

ಶಹಾಪುರ: ಶಿಕ್ಷಕರನ್ನು ನೇಮಿಸಲು ವಿದ್ಯಾರ್ಥಿಗಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 7:32 IST
Last Updated 31 ಅಕ್ಟೋಬರ್ 2025, 7:32 IST
ಶಹಾಪುರ ತಾಲ್ಲೂಕಿನ ಸಗರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು
ಶಹಾಪುರ ತಾಲ್ಲೂಕಿನ ಸಗರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು   

ಶಹಾಪುರ: ತಾಲ್ಲೂಕಿನ ಸಗರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ (ಕೆಪಿಎಸ್) ವಿದ್ಯಾರ್ಥಿಗಳು ಹಿಂದಿ ಹಾಗೂ ವಿಜ್ಞಾನ ಶಿಕ್ಷಕರನ್ನು ನಿಯೋಜಸುವಂತೆ ಒತ್ತಾಯಿಸಿ ಗುರುವಾರ ವಿದ್ಯಾರ್ಥಿಗಳು ತರಗತಿಗಳನ್ನು ತೊರೆದು ಶಾಲೆ ಎದುರು ಪ್ರತಿಭಟನೆ ನಡೆಸಿದರು.

ಹಿಂದಿ ಶಿಕ್ಷಕರೊಬ್ಬರು ಒಂದು ತಿಂಗಳಿಂದ ಸತತ ಗೈರು ಹಾಜರಿ ಇದ್ದಾರೆ. 9 ಹಾಗೂ 10ನೇ ತರಗತಿ ಸೇರಿ ಒಟ್ಟು 353 ವಿದ್ಯಾರ್ಥಿಗಳು ಇದ್ದಾರೆ. ಅಲ್ಲದೆ ವಿಜ್ಞಾನ ವಿಷಯ ಬೋಧನೆಗೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡಿದೆ. ಆದರೆ ಅವರೂ ಬರುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ ಎಂದು ಶಾಲೆಯ ಪ್ರಬಾರಿ ಮುಖ್ಯಶಿಕ್ಷಕ ವಿಶ್ವನಾಥ ಯರಗೊಳ ತಿಳಿಸಿದರು.

ಶಾಲೆಗೆ ಒಟ್ಟು 16 ಹುದ್ದೆಗಳು ಇವೆ. ಅದರಲ್ಲಿ ಈಗ ಕೇವಲ ನಾಲ್ಕು ಶಿಕ್ಷಕರು ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ. ಎ ಮತ್ತು ಬಿ ವಿಭಾಗ ಮಾಡಿದ್ದು ಒಂದರಲ್ಲಿ 150 ಮತ್ತು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಹೆಚ್ಚಿನ ವಿದ್ಯಾರ್ಥಿಗಳ ಸಂಖ್ಯೆ ಇರುವುದರಿಂದ ಹಾಗೂ ವಿಜ್ಞಾನ ವಿಷಯ ತುಸು ಕಠಿಣವಾಗಿರುವುದರಿಂದ ಬೋಧನೆ ಮಾಡಲು ಅತಿಥಿ ಶಿಕ್ಷಕರು ಕೂಡ ಶಾಲೆಗೆ ಬರುತ್ತಿಲ್ಲ. ಇದು ಸಮಸ್ಯೆಗೆ ಕಾರಣವಾಗಿದೆ ಎಂದು ವಿದ್ಯಾರ್ಥಿಗಳ ಪಾಲಕರು ತಿಳಿಸಿದರು.

ADVERTISEMENT

ಹಿಂದಿ ಶಿಕ್ಷಕರು ಅನಧಿಕೃತವಾಗಿ ಗೈರು ಹಾಜರಿ ಇರುವುದರಿಂದ ಮೂರು ಬಾರಿ ಕಾರಣ ಕೇಳಿ ಶಾಲೆಯ ಮುಖ್ಯಶಿಕ್ಷಕರು ನೋಟಿಸ್‌ ನೀಡಬೇಕಾಗುತ್ತದೆ. ನಂತರ ನಮಗೆ ವರದಿ ನೀಡಿದರೆ ಅವರ ಮೇಲೆ ಶಿಸ್ತುಕ್ರಮ ತೆಗೆದುಕೊಳ್ಳುತ್ತೇವೆ. ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕೃತ ಶಿಕ್ಷಕರು ಇರುವಾಗ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಅವಕಾಶವಿಲ್ಲ ಹಾಗೂ ನಿಯೋಜನೆ ಮಾಡಲು ಬರುವುದಿಲ್ಲ. ಸಂಪೂರ್ಣ ಮಾಹಿತಿ ನೀಡುವಂತೆ ಶಾಲಾ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ ಎಂದು ಬಿಇಒ ವೈ.ಎಸ್. ಹರಗಿ ತಿಳಿಸಿದರು.

ಹಿಂದಿ ಶಿಕ್ಷಕ ಗೈರು ಹಾಜರಿ ಇದ್ದಾರೆ. ವಿಜ್ಞಾನ ಶಿಕ್ಷಕರ ಕೊರತೆಯಿಂದ ಬೋಧನೆಗೆ ತೊಂದರೆಯಾಗಿದೆ. ಅನ್ಯ ಶಿಕ್ಷಕರನ್ನು ನಿಯೋಜಿಸುವಂತೆ ವಿದ್ಯಾರ್ಥಿಗಳು ಮನವಿ ಮಾಡಿದ್ದು ಮೇಲಧಿಕಾರಿಗೆ ವರದಿ ನೀಡಿದ್ದೇನೆ.
ವಿಶ್ವನಾಥ ಯರಗೊಳ ಪ್ರಭಾರಿ ಮುಖ್ಯಶಿಕ್ಷಕ ಕರ್ನಾಟಕ ಪಬ್ಲಿಕ್ ಶಾಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.