ADVERTISEMENT

ಶಾಂತಶಿವಯೋಗಿಗಳ ಅದ್ದೂರಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 8:06 IST
Last Updated 10 ಫೆಬ್ರುವರಿ 2026, 8:06 IST
ಯಾದಗಿರಿ ತಾಲ್ಲೂಕಿನ ಹೆಡಗಿಮದ್ರಾ ಗ್ರಾಮದಲ್ಲಿ ಸೋಮವಾರ ಶಾಂತಶಿವಯೋಗಿಗಳ ರಥೋತ್ಸವವು ಸಂಭ್ರಮದಿಂದ ಜರುಗಿತು  ಪ್ರಜಾವಾಣಿ ಚಿತ್ರ. ರಾಜುಕುಮಾರ ನಳ್ಳಿಕರ
ಯಾದಗಿರಿ ತಾಲ್ಲೂಕಿನ ಹೆಡಗಿಮದ್ರಾ ಗ್ರಾಮದಲ್ಲಿ ಸೋಮವಾರ ಶಾಂತಶಿವಯೋಗಿಗಳ ರಥೋತ್ಸವವು ಸಂಭ್ರಮದಿಂದ ಜರುಗಿತು  ಪ್ರಜಾವಾಣಿ ಚಿತ್ರ. ರಾಜುಕುಮಾರ ನಳ್ಳಿಕರ   

ಯಾದಗಿರಿ: ತಾಲ್ಲೂಕಿನ ಹೆಡಗಿಮದ್ರಾ ಗ್ರಾಮದ ಶಾಂತಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ರಥೋತ್ಸವವು ಸಂಭ್ರಮದಿಂದ ಜರುಗಿತು.

ಜಾತ್ರೆ ಪ್ರಯುಕ್ತ ಮಠದಲ್ಲಿನ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಮಹಾಪೂಜೆ, ಮಹಾ ನೈವೇದ್ಯ, ವಿಶೇಷ ಪೂಜಾಕೈಂಕರ್ಯಗಳು ನಡೆದವು. ಹೆಡಗಿಮದ್ರಾ ಸೇರಿದಂತೆ ಸುತ್ತಲಿನ ಠಾಣಗುಂದಿ, ಅಬ್ಬೆತುಮಕೂರು, ವಡ್ನಳ್ಳಿ, ಮುದ್ನಾಳ, ಅರಕೇರ, ಅಚ್ಚೋಲ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದು ಅಜ್ಜನ ದರ್ಶನ ಪಡೆದು ಪುನೀತರಾದರು.

ಶಾಂತ ಶಿವಯೋಗಿಗಳ ಮಠದ ಮುಂಭಾಗದ ಕಟ್ಟೆಯ ಮೇಲೆ ಭಕ್ತರು ತೆಂಗಿನ ಕಾಯಿಗಳನ್ನು ಹೊಡೆದು ಹರಕೆ ತೀರಿಸಿದರು. ಮಠದ ಪೀಠಾಧಿಪತಿ ಶಾಂತ ಮಲ್ಲಿಕಾರ್ಜುನ ಶಿವಾಚಾರ್ಯರು ಬಂದಂತಹ ಭಕ್ತರಿಗೆ ದರ್ಶನ ನೀಡಿದರು.

ADVERTISEMENT

ಸಂಜೆ ಆಗುತ್ತಿದ್ದಂತೆ ಭಕ್ತರು ಬಣ್ಣ ಬಣ್ಣದ ಹೂಗಳಿಂದ ರಥವನ್ನು ಅಲಂಕರಿಸುತ್ತಿದ್ದರೆ, ಅತ್ತ ವಾದ್ಯ ಮೇಳೆದವರು ಹಲಿಗೆ, ಬ್ಯಾಂಡ್ ಬಾಜಾ, ಹಲಗೆ ಇತರೆ ವಾದ್ಯ ಭಾರಿಸುತ್ತಾ ಜಾತ್ರೆಗೆ ಮೆರಗು ತಂದರು. ರಥದ ಅಲಂಕಾರ ಮುಗಿಯುತ್ತಿದ್ದಂತೆ ಆಕಾಶದಲ್ಲಿನ ಸಿಡಿಮದ್ದುಗಳ ಬಣ್ಣ ಬಣ್ಣದ ಚಿತ್ತಾರ ನೇರಿದಿದ್ದ ಸಾವಿರಾರು ಭಕ್ತರನ್ನು ಸೆಳೆಯಿತು.

ಕುಂಭ, ಕಳಸ, ಶಾಂತ ಶಿವಯೋಗಿಗಳ ಭಾವಚಿತ್ರದೊಂದಿಗೆ ಶಾಂತ ಮಲ್ಲಿಕಾರ್ಜುನ ಶಿವಾಚಾರ್ಯರು ರಥದ ಸುತ್ತು ಐದು ಸುತ್ತುಗಳನ್ನು ಹಾಕಿದರು. ಬಳಿಕ ರಥವನ್ನು ಏರಿ ತೇರು ಎಳೆಯಲು ಆದೇಶ ಕೊಡುತ್ತಿದ್ದಂತೆ ಸಾವಿರಾರು ಭಕ್ತ ಸಮೂಹ ಶಾಂತ ಶಿವಯೋಗಿಮಹಾರಾಜಕೀ ಜೈ ಎಂಬ ಘೋಷಣೆಗಳನ್ನು ಹಾಕಿದರು. ಹಗ್ಗವನ್ನು ಬಲವಾಗಿ ಹಿಡಿದು ಎಳೆದರು. ಸುತ್ತಲೂ ನಿಂತಿದ್ದ ಸಾವಿರಾರು ಭಕ್ತರು ರಥದ ಮೇಲೆ ಉತ್ತತ್ತಿ, ಬಾಳೆಹಣ್ಣು ಎಸೆದು ಕೈಮುಗಿದರು.

ಮುಗುಳುನಾಗಾವಿ ಕಟ್ಟಿಮನಿ ಹಿರೇಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯರು, ಚವದಾಪುರಿ ಹಿರೇಮಠದ ರಾಜಶೇಖರ ಶಿವಾಚಾರ್ಯರು, ದೇವಪುರದ ಶಿವಮೂರ್ತಿ ಶಿವಾಚಾರ್ಯರು, ಓಂಕಾರ ಬೇನೂರಿನ ಸಿದ್ಧರೇಣುಕ ಶಿವಾಚಾರ್ಯರು, ಬೆಳಗುಂಪಾದ ಅಭಿನವ ಪರ್ವತೇಶ್ವರ ಶಿವಾಚಾರ್ಯರು, ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ಬಿಜೆಪಿ ಮುಖಂಡರಾದ ರಾಚನಗೌಡ ಮುದ್ನಾಳ, ಮಹೇಶರೆಡ್ಡಿ ಮುದ್ನಾಳ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.