
ಕಕ್ಕೇರಾ: ಪಟ್ಟಣದ ಆರಾಧ್ಯದೈವ ಸೌರಾಷ್ಟ್ರ ಅಧಿಪತಿ ಸೋಮನಾಥ ದೇವರ ಜಾತ್ರಾ ಅಂಗವಾಗಿ ಭಾನುವಾರ ಸಂಜೆ ಲಘು ರಥೋತ್ಸವ (ಉಚ್ಚಾಯ) ಸಾವಿರಾರು ಭಕ್ತ ಸಮೂಹ ಮತ್ತು ವಾದ್ಯಮೇಳದೊಂದಿಗೆ ಸಂಭ್ರಮದಿಂದ ಜರುಗಿತು.
ಭಕ್ತ ಸಮೂಹ ಉತ್ತತ್ತಿ ಅರ್ಪಿಸಿ, ಚಪ್ಪಾಳೆ ತಟ್ಟುವ ಮೂಲಕ ಉಚ್ಛಾಯಿ ರಥಕ್ಕೆ ಭಕ್ತಿಯನ್ನು ಸಮರ್ಪಿಸಿದರು. ತೆಂಗಿನಗರಿ, ಬಾಳೇಗೊನೆ ಹಾಗೂ ಹೂಗಳಿಂದ ಶೃಂಗಾರಗೊಂಡಿದ್ದ ರಥದ ಸುತ್ತಲೂ ದೇವರ ಪಲ್ಲಕ್ಕಿ ಪ್ರದಕ್ಷಿಣೆ ಹಾಕಿದ ನಂತರ ರಥಕ್ಕೆ ನಂದಣ್ಣಪ್ಪ ಪೂಜಾರಿ ಶ್ರೀಗಳು ವಿಶೇಷ ಪೂಜೆ ಸಲ್ಲಿಸಿ, ರಥ ಎಳೆಯುವುದಕ್ಕೆ ಚಾಲನೆ ನೀಡಿದರು.
ಈ ಮದ್ಯೆ ಭಕ್ತರು ‘ಸೋಮನಾಥ ಮಹಾರಾಜಕೀ...ಜೈ. ಕರಿಮಡ್ಡಿ ಸೋಮನಾಥ ಮಹಾರಾಜಕೀ...ಕೀ ಜೈ’ ಎಂದು ಜಯಘೋಷ ಹಾಕಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ರಥವು ಪಾದಗಟ್ಟೆಯವರೆಗೆ ಸಾಗಿತು. ಬಸವಣ್ಣನ ದೇವಸ್ಥಾನಕ್ಕೆ ಅರ್ಚಕರು ಪೂಜೆ ಸಲ್ಲಿಸಿದರು. ನಂತರ ರಥವು ಸ್ವಸ್ಥಾನ ತಲುಪಿತು. ರಥದ ಹಿಂದೆ ದೇವರ ಪಲ್ಲಕ್ಕಿ ಹಾಗೂ ಕಳಸ ಹಿಡಿದ ಮಹಿಳೆಯರು, ಹಾಗೂ ದೇವರ ಸೇವಕರು ಇದ್ದರು.
ಹಣಮಂತರಾಯಗೌಡ ಜಹಾಗೀರದಾರ, ಪುರಸಭೆ ಅಧ್ಯಕ್ಷ ಅಯ್ಯಾಳಪ್ಪ ಪೂಜಾರಿ, ರಾಜು ಹವಾಲ್ದಾರ್, ಸಿದ್ದಣ್ಣ ದೇಸಾಯಿ, ಸೋಮನಿಂಗಪ್ಪ ಬೋಯಿ, ಪರಮಣ್ಣ ಪೂಜಾರಿ, ಶರಣಪ್ಪ ಕುಂಬಾರ, ವೀರಸಂಗಪ್ಪ ಸಾಹುಕಾರ, ಶರಣು ಸೋಲಾಪುರ, ಪವಾಡೆಪ್ಪ ಮ್ಯಾಗೇರಿ, ಮಹಿಬೂಬ ಸುರಪುರ ಸೇರಿದಂತೆ ಪುರಸಭೆ ಸದಸ್ಯರುಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.