ADVERTISEMENT

ವಿಜಯಪುರದಲ್ಲಿ ಬೆಳಗಿದ ಜಿಲ್ಲೆಯ ಕೀರ್ತಿ

624 ಅಂಕ ಗಳಿಸಿದ ವಿರೇಶ ಸಾಸನೂರ

​ಪ್ರಜಾವಾಣಿ ವಾರ್ತೆ
Published 20 ಮೇ 2022, 4:30 IST
Last Updated 20 ಮೇ 2022, 4:30 IST
ಹುಣಸಗಿ ತಾಲ್ಲೂಕಿನ ಅರಕೇರಾ (ಜೆ) ಗ್ರಾಮದ ಪ್ರಮುಖರು ವಿದ್ಯಾರ್ಥಿ ವಿರೇಶ ಸಾಸನೂರಗೆ ಸನ್ಮಾನಿಸಿ ಸಿಹಿ ವಿತರಿಸಿದರು
ಹುಣಸಗಿ ತಾಲ್ಲೂಕಿನ ಅರಕೇರಾ (ಜೆ) ಗ್ರಾಮದ ಪ್ರಮುಖರು ವಿದ್ಯಾರ್ಥಿ ವಿರೇಶ ಸಾಸನೂರಗೆ ಸನ್ಮಾನಿಸಿ ಸಿಹಿ ವಿತರಿಸಿದರು   

ಹುಣಸಗಿ: ಎಸ್ಸೆಸ್ಸೆಲ್ಸಿ ಪರಿಕ್ಷೆ ಫಲಿತಾಂಶದಲ್ಲಿ ತಾಲ್ಲೂಕಿನ ಅರಕೇರಾ (ಜೆ) ಗ್ರಾಮದ ವಿದ್ಯಾರ್ಥಿ ವಿರೇಶ ಮಲ್ಲಿಕಾರ್ಜುನ ಸಾಸನೂರ 625ಕ್ಕೆ 624 ಅಂಕ ಗಳಿಸುವ ಮೂಲಕ ಸಾಧನೆ ಮಾಡಿ ವಿಜಯಪುರ ಜಿಲ್ಲೆಯಲ್ಲಿ ಯಾದಗಿರಿಯಜಿಲ್ಲೆಯ ಕೀರ್ತಿ ಬೆಳಗುವಂತೆ ಮಾಡಿದ್ದಾರೆ.

ಕೃಷಿ ಕುಟುಂಬದ ವಿರೇಶ ಪ್ರಾಥಮಿಕ ಶಿಕ್ಷಣವನ್ನು ಅರಕೇರಾ(ಜೆ)ಯಲ್ಲಿರುವ ಬಸವೇಶ್ವರ ಪ್ರಾಥಮಿಕ ಶಾಲೆಯಲ್ಲಿ ಕಲಿತಿದ್ದು, ಎಸ್ಸೆಸ್ಸೆಲ್ಸಿ ಜಿಲ್ಲೆಯ ಗಡಿ ಭಾಗದಲ್ಲಿರುವ ತಾಳಿಕೋಟಿ ಬಳಿಯ ಮೈಲೇಶ್ವರ ಬ್ರಿಲಿಯಂಟ್ ಶಾಲೆಯಲ್ಲಿ ಪ್ರವೇಶ ಪಡೆದು ಸಾಧನೆ ಮಾಡಿದ್ದಾನೆ. ಇಂಗ್ಲೀಷ್ 1 ಅಂಕ ಹೊರತು ಪಡಿಸಿ ಉಳಿದ ಎಲ್ಲ ವಿಷಯದಲ್ಲಿಯೂ ಶೇ 100 ಅಂಕ ಗಳಿಸಿದ್ದಾನೆ.

ನನ್ನ ಮಗ ಇಷ್ಟು ಅಂಕ ಗಳಿಸುತ್ತಾನೆ ಎಂದು ಕನಸಿನಲ್ಲಿಯೂ ಕಂಡಿರಲಿಲ್ಲ ಎಂದು ತಂದೆ ಮಲ್ಲಿಕಾರ್ಜುನ ಸಾಸನೂರ ಹಾಗೂ ತಾಯಿ ನಿರ್ಮಲಾ ಸಂತಸ ವ್ಯಕ್ತಪಡಿಸಿದರು.

ADVERTISEMENT

ನಾನು ದಿನಕ್ಕೆ ಕೇವಲ 4 ತಾಸು ಮಾತ್ರ ಅಭ್ಯಾಸ ಮಾಡುತ್ತಿದ್ದೆ ಆದರೆ ಶಾಲೆಯಲ್ಲಿ ಶಿಕ್ಷಕರು ತಿಳಿಸುವ ವಿಷಯದ ಕುರಿತು ಹೆಚ್ಚು ಗಮನ ಹರಿಸುತ್ತಿದ್ದೆ. ಹಾಸ್ಟೆಲ್‌ನಲ್ಲಿದ್ದಾಗ ಸಂಸ್ಥೆಯ ಉಪಾಧ್ಯಕ್ಷ ರಾಜ್ ಸರ್ ಹಾಗೂ ಮುಖ್ಯ ಶಿಕ್ಷಕ ಅಡಿವೆಯ್ಯ ಹಿರೇಮಠ ನನಗೆ ಉತ್ತಮ ಮಾರ್ಗದರ್ಶನ ನೀಡುತ್ತಿದ್ದರು ಎಂದು ತಿಳಿಸಿದರು.

ವಿಜ್ಞಾನ ವಿಭಾಗವನ್ನು ಆಯ್ದುಕೊಂಡು ಡಾಕ್ಟರ್ ಆಗಿ ಸೇವೆ ಸಲ್ಲಿಸಬೇಕು ಎಂಬ ಉದ್ದೇಶ ನನ್ನದಾಗಿದೆ ಎಂದು ತನ್ನ ಗುರಿಯ ಕುರಿತು ವಿರೇಶ ವಿವರಿಸಿದರು.

ವಿರೇಶ ಸಾಧನೆ ನಮ್ಮೂರಿನ ಇತರ ಮಕ್ಕಳಿಗೂ ಪ್ರೇರಣೆ ನೀಡಿದಂತಾಗಿದ್ದು, ಗ್ರಾಮದ ಹೆಮ್ಮೆಯ ವಿದ್ಯಾರ್ಥಿಯಾಗಿದ್ದಾನೆ ಎಂದು ಗೋಪಾಲ ದೊರೆ ಅಮಲಿಹಾಳ ಹಾಗೂ ಗ್ರಾ.ಪಂ ಮೌನೇಶ ಬಳೂರಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.