ADVERTISEMENT

ಸುರಪುರ: ಬ್ಯಾಂಕ್‌ನಲ್ಲಿ ಪಾಲನೆಯಾಗದ ಕೋವಿಡ್‌ ಮಾರ್ಗಸೂಚಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2021, 4:51 IST
Last Updated 3 ಜೂನ್ 2021, 4:51 IST
ಸುರಪುರದಲ್ಲಿ ರೈತರು ಬುಧವಾರ ಹಣ ಪಡೆದುಕೊಳ್ಳಲು ಡಿಸಿಸಿ ಬ್ಯಾಂಕ್‍ ಮುಂದೆ ಅಂತರ ಕಾಯ್ದುಕೊಳ್ಳದೆ ನಿಂತಿರುವುದು
ಸುರಪುರದಲ್ಲಿ ರೈತರು ಬುಧವಾರ ಹಣ ಪಡೆದುಕೊಳ್ಳಲು ಡಿಸಿಸಿ ಬ್ಯಾಂಕ್‍ ಮುಂದೆ ಅಂತರ ಕಾಯ್ದುಕೊಳ್ಳದೆ ನಿಂತಿರುವುದು   

ಸುರಪುರ: ಪ್ರಧಾನಮಂತ್ರಿ ಕಿಸಾನ ಸಮ್ಮಾನ್ ಯೋಜನೆ ಅಡಿ ತಮ್ಮ ಖಾತೆಗೆ ಜಮೆಯಾದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೊದಲ ಕಂತಿನ ಹಣ ಪಡೆದುಕೊಳ್ಳಲು ರೈತರು ಬ್ಯಾಂಕ್‍ಗಳಿಗೆ ಪರದಾಡುತ್ತಿದ್ದಾರೆ. ನಗರದ ಕೆನರಾ, ಎಸ್‍ಬಿಐ, ಪಿಕೆಜಿಬಿ. ಮತ್ತು ಸಹಕಾರಿ ಬ್ಯಾಂಕ್‍ಗಳ ಮುಂದೆ ರೈತರ ಉದ್ದನೆಯ ಸಾಲು ನಿತ್ಯವು ಕಂಡು ಬರುತ್ತಿದೆ. ಅಂತರವಿಲ್ಲದೆ, ಮಾಸ್ಕ್ ಧರಿಸದೆ ಇರುವುರಿಂದ ಸೋಂಕು ಹರಡುವ ಭೀತಿ ಎದುರಾಗಿದೆ.

ಈಗಾಗಲೇಮಳೆಗಾಲ ಆರಂಭವಾಗಿದ್ದು, ಮುಂಗಾರು ಬಿತ್ತನೆಗೆ ರೈತರು ಜಮೀನು ಹದಗೊಳಿಸಿಕೊಂಡಿದ್ದಾರೆ. ಬಿತ್ತನೆ ಬೀಜ, ಗೊಬ್ಬರ ಕೊಂಡುಕೊಳ್ಳಲು ಹಣದ ಅವಶ್ಯಕತೆ ಇದೆ. ತಮ್ಮ ಖಾತೆಯಲ್ಲಿ ಹಣವಿದ್ದರೂ ರೈತರ ಪಾಲಿಗೆ ಲಾಕ್‍ಡೌನ್ ಇಲ್ಲದ ಸಂಕಷ್ಟ ತಂದೊಡ್ಡಿದೆ. ಹಣ ಪಡೆದುಕೊಳ್ಳಲು ಬಂದರೆ ನಗರದಲ್ಲಿ ಪೊಲೀಸರ ಕಿರಿಕಿರಿ ತಪ್ಪಿಸಿಕೊಳ್ಳಲಾಗುತ್ತಿಲ್ಲ. ಬೈಕ್ ವಶ, ದಂಡ ತಪ್ಪಿದ್ದಲ್ಲ. ಈ ಎಲ್ಲಾ ಕಾರಣಗಳಿಂದ ರೈತರು ಬ್ಯಾಂಕ್‍ಗಳಿಗೆ ಬಂದು ಹಣ ಪಡೆದು ಕೊಳ್ಳಲಾರದಂತ ಪರಸ್ಥಿತಿ ನಿರ್ಮಾಣವಾಗಿದೆ.

ಕೋವಿಡ್ ಮಾರ್ಗಸೂಚಿ ಜಾರಿಯಲ್ಲಿರುವುದರಿಂದ ಬ್ಯಾಂಕ್ ಅಧಿಕಾರಿಗಳು ರೈತರನ್ನು ಒಳಗೆ ತೆಗೆದುಕೊಳ್ಳುತ್ತಿಲ್ಲ. ಬೆಳೆ ಮತ್ತು ಜಮೀನು ಅಭಿವೃದ್ಧಿಸೇರಿದಂತೆ ಇತರೆ ಯಾವುದೇ ಸಾಲ ನೀಡುತ್ತಿಲ್ಲ. ಇರುವ ಹಣ ಕೂಡಾ ತೆಗೆದುಕೊಳ್ಳಲಾಗುತ್ತಿಲ್ಲ. ಕೋವಿಡ್ ಮಾರ್ಗಸೂಚಿಯಂತೆ ಬ್ಯಾಂಕ್ ಸಿಬ್ಬಂದಿಗಳು ಕೂಡಾ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುತ್ತಿಲ್ಲ. ಸರ್ವರ್ ಸಮಸ್ಯೆ ಬೇರೆ. ಈ ಎಲ್ಲಾ ಕಾರಣಗಳಿಂದ ಬೆಳಗಿನಿಂದ ಸಂಜೆವರೆಗೆ ಬ್ಯಾಂಕ್ ಮುಂದೆ ಸರದಿ ಸಾಲಿನಲ್ಲಿ ನಿಂತರೂ ಹಣ ಸಿಗುತ್ತದೆ ಎಂಬ ಖಚಿತತೆ ಇಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ADVERTISEMENT

‘ಕಳೆದ ಎರಡು ಮೂರು ದಿನಗಳಿಂದ ತಾಲ್ಲೂಕಿನಲ್ಲಿ ಮಳೆ ಉತ್ತಮವಾಗಿ ಬೀಳುತ್ತಿದೆ. ಬೀಜ, ಗೊಬ್ಬರ ಕೊಂಡುಕೊಳ್ಳಲು ರೈತರಿಗೆ ಹಣದ ಅವಶ್ಯಕತೆ ಇದೆ. ಆದ್ದರಿಂದ ಬೇರೆ ವಹಿವಾಟು ಸ್ಥಗತಗೊಳಿಸಿ ರೈತರಿಗೆ ಮೊದಲು ಹಣ ನೀಡುವಂತೆ ಜಿಲ್ಲಾಧಿಕಾರಿಗಳು ಬ್ಯಾಂಕ್ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು’ ಎಂದು ರೈತ ಮುಖಂಡ ಹಣಮಂತ್ರಾಯಗೌಡ ಹೆಮ್ಮಡಗಿ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.