
ಸುರಪುರ: ‘ಸಂಗೀತವು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಒತ್ತಡ ಕಡಿಮೆ ಮಾಡಿ ನೆಮ್ಮದಿಯನ್ನು ನೀಡುತ್ತದೆ’ ಎಂದು ಸುಗೂರೇಶ್ವರ ದೇವಸ್ಥಾನದ ಸಂಸ್ಥಾಪಕ ವಂಶಜ ಸುನೀಲ್ ಸರಪಟ್ಟಣಶೆಟ್ಟಿ ಹೇಳಿದರು.
ಇಲ್ಲಿಯ ಸುಗೂರೇಶ್ವರ ದೇವಸ್ಥಾನದಲ್ಲಿ ಸುಗೂರೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಮಂಗಳವಾರ ಏರ್ಪಡಿಸಿದ್ದ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಸುಗೂರೇಶ್ವರ ದೇವರು ಭಕ್ತರಿಗೆ ಬೇಡಿದ್ದನ್ನು ಕೊಡುವ ಕಾಮಧೇನು ಕಲ್ಪವೃಕ್ಷವಾಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಸಂಗೀತ ಕಾರ್ಯಕ್ರಮ ನಡೆಯುತ್ತಿರುವುದು ಪ್ರಶಂಸನೀಯ’ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶರಣಬಸವ ಯಾಳವಾರ ಮಾತನಾಡಿ, ‘ಸಂಗೀತವು ಸ್ವರ, ಲಯ, ತಾಳ ನಿಯಮಕ್ಕನುಸಾರವಾಗಿ ಧ್ವನಿ ಅಥವಾ ನಾದದ ಆಕರ್ಷಕ ಮತ್ತು ಮನೋರಂಜನೆಯ ರೂಪವಾಗಿದೆ’ ಎಂದರು.
ಸಂಗೀತ ಕಲಾವಿದ ದೀಪಕ್ ಸಿಂಗ್ ಹಜೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಸಂಗೀತವು ಜೀವನದ ಅತ್ಮವಾಗಿದೆ ಮತ್ತು ನಮಗೆ ಅಪಾರ ಶಾಂತಿಯನ್ನು ನೀಡುತ್ತದೆ. ಸಂಗೀತವು ಸರಿಗಮ ರಾಗಗಳು, ತಾಳಗಳು ಇತ್ಯಾದಿಗಳನ್ನು ಒಳಗೊಂಡಿದೆ. ಪಂಡಿತ ಪ್ರಭುದೇವ ಸಾಲಿಮಠ ಗವಾಯಿಗಳವರು ಸಂಗೀತ ಸೇವೆ ಸಲ್ಲಿಸಿದ ಈ ಸ್ಥಳದಲ್ಲಿ ಸಂಗೀತ ಸೇವೆ ಸಲ್ಲಿಸುವುದು ನಮ್ಮ ಸೌಭಾಗ್ಯವಾಗಿದೆ’ ಎಂದರು.
ದೇವಸ್ಥಾನದ ಅರ್ಚಕ ಕೊಟ್ರಯ್ಯಸ್ವಾಮಿ ಬಳ್ಳುಂಡಗಿ ಸಾನ್ನಿಧ್ಯ ವಹಿಸಿದ್ದರು. ಶಿವಶರಣಯ್ಯಸ್ವಾಮಿ ಬಳ್ಳುಂಡಗಿಮಠ, ಶಂಕರಯ್ಯ ಚಿಕ್ಕಮಠ ಗೊಬ್ಬೂರ, ಪಿಎಸ್ಐ ಸಿದ್ದಣ್ಣ ಯಡ್ರಾಮಿ, ಸಿದ್ದಲಿಂಗಯ್ಯಸ್ವಾಮಿ ಕಡ್ಲಪ್ಪಮಠ ವೇದಿಕೆಯಲ್ಲಿದ್ದರು.
ಅನೇಕ ಸಂಗೀತ ಕಲಾವಿದರು ಅಹೋರಾತ್ರಿ ಜರುಗಿದ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿವಿಧ ಹಾಡುಗಳನ್ನು ಪ್ರಸ್ತುತ ಪಡಿಸಿ ಸಭಿಕರನ್ನು ರಂಜಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.