ADVERTISEMENT

ಯಾದಗಿರಿ: ಜಿಲ್ಲೆಯಾದ್ಯಂತ ತಟ್ಟದ ಮುಷ್ಕರದ ಬಿಸಿ

ಎಂದಿನಂತೆ ಸಾಗಿದ ಜನ ಜೀವನ, ಸಾರಿಗೆ, ಆಟೊ ಅಡಚಣೆ ಇಲ್ಲ

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 10:25 IST
Last Updated 9 ಜನವರಿ 2020, 10:25 IST
ಯಾದಗಿರಿಯಲ್ಲಿ ಮುಷ್ಕರ ಹಿನ್ನೆಲೆಯಲ್ಲಿ ಬಸ್‌ಗಳು ಎಂದಿಂತೆ ಕಾರ್ಯವಹಿಸಿದವು
ಯಾದಗಿರಿಯಲ್ಲಿ ಮುಷ್ಕರ ಹಿನ್ನೆಲೆಯಲ್ಲಿ ಬಸ್‌ಗಳು ಎಂದಿಂತೆ ಕಾರ್ಯವಹಿಸಿದವು   

ಯಾದಗಿರಿ: ಜಿಲ್ಲೆಯಲ್ಲಿ ಬುಧವಾರ ಜನಜೀವನ ಎಂದಿನಂತಿತ್ತು. ಕೇಂದ್ರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಮುಷ್ಕರದ ಬಿಸಿ ಜನರಿಗೆ ತಟ್ಟಲಿಲ್ಲ.

ಶಾಲಾ–ಕಾಲೇಜು, ಸಾರಿಗೆ, ಆಟೊ, ಆಸ್ಪತ್ರೆ, ಸ್ಕ್ಯಾನಿಂಗ್‌ ಕೇಂದ್ರ, ಅಂಗಡಿ ಮುಂಗಟ್ಟುಗಳಿಗೆ ಮುಷ್ಕರದ ಬಿಸಿ ತಟ್ಟಿಲ್ಲ. ಎಂದಿನಂತೆ ವ್ಯಾಪಾರ ವಹಿವಾಟು ನಡೆಯಿತು.

ಶಾಲಾ–ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳು ಬಸ್‌ ನಿಲ್ದಾಣದಲ್ಲಿ ಜಮಾಯಿಸಿದ್ದರು. ಎನ್‌ಈಕೆಆರ್‌ಟಿಸಿ ಸ್ಟಾಫ್‌ ಆ್ಯಂಡ್‌ ವರ್ಕರ್ ಯೂನಿಯನ್ ಮುಷ್ಕರಕ್ಕೆ ಬೆಂಬಲಿಸಿದ್ದರೂ ಸಮಸ್ಯೆಯಾಗಲಿಲ್ಲ.ಮಧ್ಯಾಹ್ನದ ಮೇಲೆ ಬಹುತೇಕ ಪ್ರತಿಭಟನೆಗಳು ಆರಂಭಗೊಂಡಿದ್ದರಿಂದ ಬೆಳಗಿನ ಕೆಲಸಗಳಿಗೆ ಯಾವುದೇ ತೊಂದರೆಯಾಗಲಿಲ್ಲ.

ADVERTISEMENT

ಎಸ್‌ಐಬಿ ಬ್ಯಾಂಕ್‌ ಹೊರತು ಪಡಿಸಿ ಉಳಿದ ಬ್ಯಾಂಕ್‌ಗಳು ಮುಷ್ಕರದಲ್ಲಿ ಪರೋಕ್ಷವಾಗಿ ಭಾಗಿಯಾಗಿದ್ದವು. ಎಸ್‌ಬಿಐ ಬ್ಯಾಂಕ್‌ ಸಿಬ್ಬಂದಿ ಮುಷ್ಕರಕ್ಕೆ ಬಾಹ್ಯ ಬೆಂಬಲ ವ್ಯಕ್ತಪಡಿಸಿದ್ದರು. ಸರ್ಕಾರಿ ಕಚೇರಿಗಳಲ್ಲಿಯೂ ಹಾಜರಾತಿಇತ್ತು. ಜಿಲ್ಲೆಯ ಶಹಾಪುರ, ಸುರಪುರ ನಗರಗಳಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.

ನಂತರ ತಹಶೀಲ್ದಾರ್, ಜಿಲ್ಲಾಧಿಕಾರಿ ಮೂಲಕ ಪ್ರಧಾನಿ, ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ನಗರದಲ್ಲಿ ಬುಧವಾರ ಬೆಳಿಗ್ಗೆ 11 ಗಂಟೆಯಿಂದ ಶುರುವಾದ ಪ್ರತಿಭಟನೆಗಳು ಮಧ್ಯಾಹ್ನ 2 ಗಂಟೆಗೆ ಮುಕ್ತಾಯವಾಯಿತು. ಮುಷ್ಕರದಿಂದ ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.