ಯಾದಗಿರಿ: ಪರಿಚಯ ಪತ್ರ ನೀಡುವುದು, ಸ್ಲಂ ಘೋಷಣೆ ಮಾಡುವುದು, ಮನೆಗಳನ್ನು ಕೊಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾವಿತ್ರಿಬಾಯಿ ಫುಲೆ ಹಾಗೂ ಸ್ಲಂ ಜನಾಂದೋಲನ ನಡೆಸುತ್ತಿರುವ ಅನಿರ್ದಿಷ್ಟಾವಧಿಧರಣಿ ಭಾನುವಾರ 5ನೇ ದಿನ ಪೂರೈಸಿ ಆರನೇ ದಿನಕ್ಕೆ ಕಾಲಿಟ್ಟಿದೆ.
ಜಿಲ್ಲಾಡಳಿತ ಮೌಖಿಕ ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆಯದೇ ಧರಣಿ ಮುಂದುವರಿಸಲಾಗಿದೆ ಎಂದು ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆ ಹಾಗೂ ಸ್ಲಂ ಜನಾಂದೋಲನ ಮುಖಂಡರಾದ ರೇಣುಕಾ ಸರಡಗಿ, ಹಣಮಂತ ಶಹಾಪುರಕರ್ ತಿಳಿಸಿದ್ದಾರೆ.
ಧರಣಿಯ 4ನೇ ದಿನದ ಅಂತ್ಯಕ್ಕೆ ಜಿಲ್ಲಾಡಳಿತದ ಪರವಾಗಿ ನಡೆದ ಸಂಧಾನ ಮಾತುಕತೆ ವಿಫಲವಾಗಿದ್ದು, ಹೋರಾಟ ಮುಂದುವರೆದಿದೆ ಎಂದು ತಿಳಿಸಿದ್ದಾರೆ.
ಪರಿಚಯ ಪತ್ರ ನೀಡಲಾಗುವುದು ಮತ್ತು ಸ್ಲಂ ಘೋಷಣೆ ಮಾಡಲಾಗುವುದು ಎಂದು ಕೇವಲ ಮೌಖಿಕ ಭರವಸೆ ನೀಡಿದ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದು, ಕೇವಲ ಹಾರಿಕೆ ಉತ್ತರ ನೀಡಿದ್ದರಿಂದ ಪ್ರತಿಭಟನೆ ಮುಂದುವರೆಯಲಿದೆ ಎಂದು ತಿಳಿಸಿದರು.
ಧರಣಿಯಲ್ಲಿ ಸಂಗೀತಾ ಹಪ್ಪಳ, ಯಂಕಮ್ಮ ಮಾಳಿಕೇರಿ, ಈರಮ್ಮ ಕೌಳೂರು, ಸಂಗೀತಾ ಅರಿಕೇರಿ, ಆನಂದ ಚಟ್ಟೆರಕರ್, ನಿರ್ಮಲಾ ಸುಂಗಲ್ಕರ್, ನಿರ್ಮಲಾ ನಾಟೇಕರ್, ಬಾಬುಮಿಯಾ, ಸ್ವಾಮಿನಾಥನ್, ಗಫೂರ ಸಾಬ, ಆನಂದ, ಗೌರಮ್ಮ, ಶ್ರೀಮತಿ ರುದ್ರಯ್ಯಸ್ವಾಮಿ, ಮಹಮ್ಮದ್, ಅಕ್ಬರ್ ಸೇರಿದಂತೆ ವಿವಿಧ ಸ್ಲಂ ನಿವಾಸಿಗಳು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.