ಯಾದಗಿರಿ: ಕೊರೊನಾ ಸೋಂಕಿನ ಭಯದಿಂದ ಬೇರೆ ಗ್ರಾಮಸ್ಥರು ತಮ್ಮ ಊರಿಗೆ ಪ್ರವೇಶ ಮಾಡಬಾರದು ಎಂದು ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಮುಳ್ಳು ಬೇಲಿ ಹಾಕಿ ದಿಗ್ಬಂಧನ ಹಾಕಿಕೊಂಡಿದ್ದಾರೆ.
ಗುರುಮಠಕಲ್ ತಾಲ್ಲೂಕಿನ ಮಿನಾಸಪುರ ಗ್ರಾಮಕ್ಕೆ ಹೊರಗಿನವರು ಬಾರದಂತೆ ರಸ್ತೆಗೆ ಕಲ್ಲು ಹಾಕಿ ರಸ್ತೆ ಮುಚ್ಚಿದ್ದಾರೆ. ಹುಣಸಗಿ ತಾಲ್ಲೂಕಿನ ಗೆದ್ದಲಮರಿ ಗ್ರಾಮದಲ್ಲಿ ಬೇರೆ ಗ್ರಾಮಸ್ಥರು ಪ್ರವೇಶಿಸದಂತೆ ಗೆದ್ದಲಮರಿ ಮುಖ್ಯ ರಸ್ತೆಗೆ ಮುಳ್ಳು ಬೇಲಿ ಹಾಕಿದ್ದಾರೆ. ಜೆಸಿಬಿ ಮೂಲಕ ಮುಳ್ಳುಕಂಟಿ ಕಡಿದು ರಸ್ತೆಗೆ ಅಡ್ಡಹಾಕಿದ್ದಾರೆ.
ರಸ್ತೆ ತೋಡಿದ ಗ್ರಾಮಸ್ಥರು
ಜಿಲ್ಲೆಯ ಯರಗೋಳ ಗ್ರಾಮದ ಜನತೆಯಲ್ಲಿ ಕೊರೊನಾ ಆತಂಕ ಹೆಚ್ಚಾಗಿದ್ದು. ಬೇರೆ ಗ್ರಾಮದ ಜನರ ಪ್ರವೇಶ ತಡೆಯಲು ಗ್ರಾಮದ ಹೊರವಲಯದಲ್ಲಿರುವ ಯಾಗಾಪುರ ರಸ್ತೆಯನ್ನು ತುಂಡರಿಸಿದ್ದಾರೆ.
ಯರಗೋಳದಿಂದ ಯಾಗಾಪುರ 8 ಕಿಮೀ ಅಂತರದಲ್ಲಿದೆ. ಹೀಗಾಗಿ ಯಾಗಾಪುರಕ್ಕೆ ತೆರಳುವ ಮಾರ್ಗದಲ್ಲಿ ರಸ್ತೆ ಅಗೆದು ಅಲ್ಲಿಯವರೂ ಇಲ್ಲಿಗೆ ಪ್ರವೇಶಿಸದಂತೆ ಮಾಡಿದ್ದಾರೆ.
ವಡಗೇರಾ ತಾಲ್ಲೂಕಿನ ಬಿಳ್ಹಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೂದಿನಾಳ ಗ್ರಾಮದಲ್ಲಿ ಮರದ ದಿಮ್ಮೆಯನ್ನು ರಸ್ತೆಗೆ ಅಡ್ಡಲಾಗಿ ಗ್ರಾಮಸ್ಥರು ಹಾಕಿದ್ದಾರೆ. ಈ ಮೂಲಕ ಗ್ರಾಮಕ್ಕೆ ಪ್ರವೇಶ ಮಾಡದಂತೆ ದಿಗ್ಬಂಧನ ಹಾಕಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.