ADVERTISEMENT

ಮಲ್ಹಾರ | ರಸ್ತೆ, ಚರಂಡಿ ಸಮಸ್ಯೆ: ಬೇಸತ್ತ ಗ್ರಾಮಸ್ಥರು

ಮಲ್ಹಾರ: ಮುಖ್ಯ ರಸ್ತೆಯೇ ಕೆಸರುಮಯ, ಚರಂಡಿಯಲ್ಲಿ ಕುಡಿಯುವ ನೀರಿನ ಪೈಪ್‌

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2024, 5:29 IST
Last Updated 11 ಆಗಸ್ಟ್ 2024, 5:29 IST
ಸೈದಾಪುರ ಸಮೀಪದ ಮಲ್ಹಾರ ಗ್ರಾಮದಿಂದ ನಾಗರಬಂಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ದುಸ್ಥಿತಿ
ಸೈದಾಪುರ ಸಮೀಪದ ಮಲ್ಹಾರ ಗ್ರಾಮದಿಂದ ನಾಗರಬಂಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ದುಸ್ಥಿತಿ   

ಸೈದಾಪುರ: ಸಮೀಪದ ಮಲ್ಹಾರ ಗ್ರಾಮದ ಪರಿಶಿಷ್ಟ ಜಾತಿ ಓಣಿ ಸೇರಿ ಗ್ರಾಮದ ಬಹುತೇಕ ಚರಂಡಿಗಳಲ್ಲಿ ತ್ಯಾಜ್ಯ ತುಂಬಿಕೊಂಡಿದೆ. ರಸ್ತೆ ಸರಿಯಾಗಿಲ್ಲ, ಬೀದಿ ದೀಪಗಳ ವ್ಯವಸ್ಥೆ ಸಮರ್ಪಕವಾಗಿಲ್ಲ. ಗ್ರಾಮಸ್ಥರು ಸಮಸ್ಯೆಯಲ್ಲೇ ದಿನದೂಡುತ್ತಿದ್ದಾರೆ. 

ಚರಂಡಿಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸದ ಪರಿಣಾಮ ಮಳೆ ನೀರು, ಮನೆ ಬಳಕೆ ನೀರು ರಸ್ತೆ ಮೇಲೆ ಹರಿದು ಕೆಸರು ಗದ್ದೆಯಂತಾಗಿವೆ. ನಮಗೆ ಅಡ್ಡಾಡಲು ಸಾಧ್ಯವಾಗುತ್ತಿಲ್ಲ ಎಂದು ಪರಿಶಿಷ್ಟ ಜಾತಿ ಓಣಿ ನಿವಾಸಿಗಳ ಅಳಲು.

ಗ್ರಾಮಪಂಚಾಯಿತಿಯ ಐವರು ಸದಸ್ಯರಿದ್ದಾರೆ. 

ADVERTISEMENT

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆಯ ಮನೆ ಇರುವ ಪ್ರದೇಶದಿಂದ ಶರಣಮ್ಮ ದೊಡ್ಡಮನಿ ಅವರ ಮನೆಯಿಂದ ಮಹಾದೇವಪ್ಪ ಮಡಿಕಲ್‌ ವರೆಗಿನ ಸುಮಾರು 1 ಕಿ.ಮೀ ರಸ್ತೆ ಸಂಪೂರ್ಣ ಹಾಳಾಗಿದೆ. ಇದೇ ರಸ್ತೆ ಬಳಿಚಕ್ರ, ನಾಗರಬಂಡಿ, ಮೈಲಾಪುರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ.

ಸಾಂಕ್ರಾಮಿಕ ರೋಗಗಳ ಭೀತಿ: ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾಗಿದ್ದರೂ ಹಲವು ಕಡೆ ಚರಂಡಿಗಳಲ್ಲಿ ಹೂಳು ತುಂಬಿದ್ದರಿಂದ ಕೊಳಚೆ ನೀರು ಸರಾಗವಾಗಿ ಹರಿಯುತ್ತಿಲ್ಲ. ಇದರಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುವ ಲಕ್ಷಣಗಳು ಹೆಚ್ಚಾಗಿವೆ. ದುರ್ವಾಸನೆಯೂ ಹೆಚ್ಚಾಗಿದೆ. 

ಜೋರು ಮಳೆಯಾದಾಗಲಂತೂ ಚರಂಡಿ ನೀರು ರಸ್ತೆ ಮೇಲೆಯೇ ಹರಿಯುತ್ತದೆ. ಇದರಿಂದ ರಸ್ತೆಗಳು ಹಾಳಾಗಿ ತಗ್ಗು ಗುಂಡಿಗಳು ಬಿದ್ದಿವೆ. ಮಕ್ಕಳು, ವೃದ್ಧರು, ಮಹಿಳೆಯರು ಅಡ್ಡಾಡಲೂ ಭಯಪಡುವಂತ ಸ್ಥಿತಿ ಇದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೀದಿ ದೀಪಗಳ ಅಳವಡಿಕೆ ಮರೆತ ಪಂಚಾಯಿತಿ: ಗ್ರಾಮದಲ್ಲಿ ಬಹುತೇಕ ವಿದ್ಯುತ್ ಕಂಬಗಳಿಗೆ ಬೀದಿ ದೀಪಗಳಿಲ್ಲ. ರಾತ್ರಿ ಸಮಯದಲ್ಲಿ ಒಬ್ಬಂಟಿಯಾಗಿ ಸಂಚರಿಸಲು ಹಿಂದೇಟು ಹಾಕುವಂತಾಗಿದೆ. ಮಳೆಗಾಲವಾಗಿರುವುದರಿಂದ ಕೆಸರು, ವಿಷಜಂತುಗಳ ಭಯದಲ್ಲಿ ಕಾಲ ಕಳೆಯುವಂತಾಗಿದೆ.

ಚರಂಡಿಯಲ್ಲಿ ಕುಡಿಯುವ ನೀರಿನ ಪೈಪ್‌: ಗ್ರಾಮದ ಜೈಪಾಲ್ ಅವರ ಮನೆ ಹಿಂಭಾಗದಲ್ಲಿನ ಚರಂಡಿಯಲ್ಲಿ ಹಾದು ಹೋಗಿರುವ ಕುಡಿಯುವ ನೀರಿನ ಪೈಪ್ ಕಳೆದ 15 ದಿನಗಳ ಹಿಂದೆ ಒಡೆದು ಹೋಗಿತ್ತು. ಅದನ್ನು ಸರಿಯಾಗಿ ದುರಸ್ತಿಗೊಳಿಸದ್ದರಿಂದ ಮತ್ತೆ ಒಡೆದಿದೆ. ಮತ್ತೆ ಅದನ್ನು ದುರಸ್ತಿಗೊಳಿಸಲು ಸಾರ್ವಜನಿಕರು ತಿಳಿಸಿದರೂ ಗಮನ ನೀಡುತ್ತಿಲ್ಲ. ಕುಡಿಯುವ ನೀರಿನೊಂದಿಗೆ ಕಲುಷಿತ ನೀರು ಸೇರಿದ ಕಾಲರಾ, ವಾಂತಿ–ಭೇದಿ ಆವರಸಲಿದೆ ಎನ್ನುವುದು ನಿವಾಸಿಗಳ ಅಳಲು.

ಸೈದಾಪುರ ಸಮೀಪದ ಮಲ್ಹಾರ ಗ್ರಾಮದಿಂದ ನಾಗರಬಂಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಸಂಪೂರ್ಣವಾಗಿ ಕೆಸರುಮಯವಾಗಿರುವುದು
ಮಂಜುನಾಥ. ಎಸ್ ಮೇತ್ರಿ ಮಲ್ಹಾರÀ ಸ್ಥಳೀಯ ನಿವಾಸಿ
ಶರಣಮ್ಮ ದೊಡ್ಡಮನಿ ಮಲ್ಹಾರ ಸ್ಥಳೀಯ ನಿವಾಸಿ
ಗ್ರಾಮ ಪಂಚಾಯಿತಿಯಲ್ಲಿ ಈವರೆಗೆ ಮೂವರು ಅಧ್ಯಕ್ಷರು ಬದಲಾಗಿದ್ದಾರೆ. ಆದರೆ ಸಮಸ್ಯೆಗಳಿಗೆ ಮಾತ್ರ ಸೂಕ್ತ ಪರಿಹಾರ ದೊರಕಿಲ್ಲ. ಉಪಾಧ್ಯಕ್ಷೆಯವರ ಮನೆ ಇರುವ ಓಣಿಯಲ್ಲಿಯೇ ಸಮಸ್ಯೆ ಕಾಡುತ್ತಿದ್ದರೂ ಅದು ಅವರ ಕಣ್ಣಿಗೆ ಕಾಣದಿರುವುದು ವಿಪರ್ಯಾಸ
ಮಂಜುನಾಥ ಮೇತ್ರಿ ಮಲ್ಹಾರ ನಿವಾಸಿ
ಮಳೆಗಾಲದಲ್ಲಿ ಹಾಳಾದ ರಸ್ತೆಯ ಕೆಸರನಲ್ಲಿಯೇ ನಡೆದುಕೊಂಡು ಬರಬೇಕು. ಬೀದಿ ದೀಪಗಳು ಇಲ್ಲದಿರುವುದರಿಂದ ರಾತ್ರಿಯಾದರೆ ಒಬ್ಬಳೇ ಅಡ್ಡಾಡಲು ಭಯವಾಗುತ್ತದೆ
-ಶರಣಮ್ಮ ದೊಡ್ಡಮನಿ ಮಲ್ಹಾರ ನಿವಾಸಿ
ಬೀದಿ ದೀಪ ಹಾಳಾಗಿರುವುದು ನೀರಿನ ಪೈಪ್‌ ಒಡೆದಿದ್ದು ನನ್ನ ಗಮನಕ್ಕೆ ಬಂದಿಲ್ಲ. ಕೆಸರುಮಯವಾದ ರಸ್ತೆ ಮತ್ತು ಚರಂಡಿಯಲ್ಲಿನ ಹೂಳು ಸೇರಿದಂತೆ ಎಲ್ಲಾ ಸಮಸ್ಯೆಗಳ ಬಗ್ಗೆ ಪಿಡಿಒ ಜತೆ ಚರ್ಚಿಸಿ ಒಂದು ವಾರದಲ್ಲಿ ಪರಿಹಾರ ನೀಡುತ್ತೇನೆ
- ಶಿವಮ್ಮ ತಮ್ಮಯ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಹಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.