ADVERTISEMENT

ಯಾದಗಿರಿ | ಬಸವಸಾಗರ ಜಲಾಶಯ: ಜೀವನದಿಯ ಡ್ಯಾಂಗೆ ಬೇಕು ‘ಜೀವಕಳೆ’

6.22 ಲಕ್ಷ ಹೆಕ್ಟೇರ್ ಕೃಷಿ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಜಲಮೂಲ

ಬಿ.ಜಿ.ಪ್ರವೀಣಕುಮಾರ
Published 29 ಜುಲೈ 2024, 4:19 IST
Last Updated 29 ಜುಲೈ 2024, 4:19 IST
ನಾರಾಯಣಪುರ ಬಸವಸಾಗರ ಜಲಾಶಯದ ಹಿನ್ನೀರು ನೋಟ
ನಾರಾಯಣಪುರ ಬಸವಸಾಗರ ಜಲಾಶಯದ ಹಿನ್ನೀರು ನೋಟ   

ಯಾದಗಿರಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಜೀವನದಿಯಾದ ಕೃಷ್ಣಾ ನದಿಯ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಜೀವಕಳೆ ಬೇಕಾಗಿದೆ.

ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಪುರದಲ್ಲಿ ಬೃಹತ್ ನೀರಾವರಿ ಯೋಜನೆ ಉದ್ದೇಶಕ್ಕಾಗಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬಸವಸಾಗರವು ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಜಲಾಶಯವಾಗಿದೆ. ರಾಜ್ಯದಲ್ಲಿ ಅತ್ಯಂತ ಹೆಚ್ಚು ನೀರಾವರಿ ಕ್ಷೇತ್ರವನ್ನು ಹೊಂದಿರುವ ನಾರಾಯಣಪುರ ಬಸವಸಾಗರ ಜಲಾಶಯವು ಜಿಲ್ಲೆಯ ಇನ್ನೂ ಸಾಕಷ್ಟು ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ಸಾಧ್ಯವಾಗಿಲ್ಲ. ಕಾಲುವೆ ಅಂಚಿನ ಭಾಗದ ರೈತರಿಗೆ ಇನ್ನೂ ನೀರು ತಲುಪಿಲ್ಲ ಎಂಬ ಮಾತುಗಳು ರೈತ ವಲಯದಲ್ಲಿ ಕೇಳಿ ಬರುತ್ತದೆ.

ನಾರಾಯಣಪುರ ಎಡದಂಡೆ ಕಾಲುವೆಯ ಮೂಲಕ 76 ಕಿಮೀ ಉದ್ದವಿರುವ ಕಾಲುವೆಯಲ್ಲಿ ನಿತ್ಯವೂ ಗರಿಷ್ಠ 10,000 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ.

ADVERTISEMENT

ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಫಲಾನುಭವಿ ಜಿಲ್ಲೆಗಳಾದ ಯಾದಗಿರಿ, ರಾಯಚೂರು, ವಿಜಯಪುರ, ಕಲಬುರಗಿ ಜಿಲ್ಲೆಯ ಅಂದಾಜು 6.22 ಲಕ್ಷ ಹೆಕ್ಟೇರ್ ಕೃಷಿ ಜಮೀನುಗಳಿಗೆ ನೀರಾವರಿ ಸೌಲಭ್ಯವನ್ನು ಒದಗಿಸುತ್ತದೆ. ಪ್ರಮುಖವಾಗಿ ಎಡ ಹಾಗೂ ಬಲದಂಡೆ ಮುಖ್ಯ ಕಾಲುವೆಗಳು ಹಾಗೂ ಇತರೆ ಏತ ನೀರಾವರಿ ಯೋಜನೆಗಳ ಕಾಲುವೆ ಜಾಲಗಳ ಮೂಲಕ ನೀರಾವರಿ ಸೌಲಭ್ಯ ಒದಗಿಸುತ್ತದೆ. ಜಲಾಶಯದ ಹಿನ್ನೀರು ವ್ಯಾಪ್ತಿಯಲ್ಲಿ ಮುಂಭಾಗದ ಕೃಷ್ಣಾ ನದಿ ತೀರದಲ್ಲಿನ ನಗರ, ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆಗೆ ಪ್ರಮುಖ ಜಲಮೂಲವಾಗಿದೆ.

ಜಲಾಶಯ ಲೋಕಾರ್ಪಣೆ:

ವಿವಿಧ ಉದ್ದೇಶಗಳಿಗೆ ಕೃಷ್ಣಾ ನದಿ ನೀರು ಸದ್ಬಳಕೆಯಾಗಲಿ ಎಂದು ಆಗಿನ ಕೇಂದ್ರ ಸಚಿವರಾಗಿದ್ದ ಲಾಲ್ ಬಹೂದ್ದೂರ್‌ ಶಾಸ್ತ್ರಿ ಅವರು ಮತ್ತು ಅಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರು 1964ರ ಮೇ 22ರಂದು ಜಲಾಶಯಕ್ಕೆ ಅಡಿಗಲ್ಲು ಹಾಕಿದರು.

1982ರ ಸೆಪ್ಟೆಂಬರ್ 22ರಂದು ಕರ್ನಾಟಕದ ಆಗಿನ ಮುಖ್ಯಮಂತ್ರಿ ಆರ್.ಗುಂಡೂರಾವ್ ಅವರು ಜಲಸಂಪನ್ಮೂಲ ಸಚಿವ ಬಿ.ಬಿ. ಚಿಮ್ಮನಕಟ್ಟಿ ಅವರ ಅಧ್ಯಕ್ಷತೆಯಲ್ಲಿ ಜಲಾಶಯವನ್ನು ಲೋಕಾರ್ಪಣೆ ಮಾಡಿದ್ದರು.

ಜಲಾಶಯವು ಒಟ್ಟು 10 ಕಿ.ಮೀ ಉದ್ದವಿದ್ದು, 30 ಮುಖ್ಯ ಕ್ರಸ್ಟ್‌ಗೇಟ್‌ಗಳನ್ನು ಹೊಂದಿದೆ. ಗರಿಷ್ಠ 492.25 ಮೀಟರ್‌ ಎತ್ತರದಲ್ಲಿ 33.313 ಟಿಎಂಸಿ ಅಡಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ.

ನೀರು ಹರಿಸಿದ ಮೇಲೆ ಕಾಮಗಾರಿ!:

‘ಕಾಲುವೆ ಕೊನೆ ಭಾಗದ ರೈತರ ಬೇಡಿಕೆ ಇಟ್ಟುಕೊಂಡು ಹಲವು ಬಾರಿ ಹೋರಾಟ ಮಾಡಲಾಗಿದೆ. ಕೆಲ ದಿನಗಳ ಹಿಂದೆ ನಾರಾಯಣಪುರದಲ್ಲಿ ಹೋರಾಟ ಮಾಡಲಾಗಿತ್ತು. ಆಗ ಅಧಿಕಾರಿಗಳು ನಿರ್ವಹಣೆ ಕಾಮಗಾರಿಗೆ ಅನುದಾನ ಬಂದಿದೆ ಟೆಂಡರ್ ಕರೆದಿದ್ದೇವೆ ಎಂದು ಹೇಳಿದ್ದರು’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಸುರಪುರ ತಾಲ್ಲೂಕು ಸಮಿತಿ ಅಧ್ಯಕ್ಷ ಹಣಮಂತ್ರಾಯ ಮಾಡಿವಾಳ ತಿಳಿಸಿದ್ದಾರೆ.

‘ಒಂದೆಡೆ ಟೆಂಡರ್ ಕರೆದು ಇನ್ನೊಂದೆಡೆ ನೀರು ಹರಿಸಿದ್ದೀರಿ ಹೇಗೆ? ಎಂದು ಪ್ರಶ್ನಿಸಿದಾಗ ಅತಿ ಅವಶ್ಯವಿರುವ ಸ್ಥಳಗಳಲ್ಲಿ ರೈತರ ಒಪ್ಪಿಗೆ ಪಡೆದು ನೀರು ಸ್ಥಗಿತಗೊಳಿಸಿ ನಿರ್ವಹಣೆ ಕಾಮಗಾರಿ ಮಾಡಲು ಸೂಚಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೂರಕ ವರದಿ: ಅಶೋಕ ಸಾಲವಾಡಗಿ, ಭೀಮಶೇನರಾವ ಕುಲಕರ್ಣಿ, ಶಾಂತಿನಾಥ ಪಿ ವನಕುದರಿ, ನಾಮದೇವ ವಾಟ್ಕರ್‌.

ನಾರಾಯಣಪುರ ಬಸವಸಾಗರದ ಮುಖ್ಯ ಕ್ರಸ್ಟ್ ಗೇಟ್‌ಗಳಿಂದ ನೀರುಹರಿಯುತ್ತಿರುವುದು
ಬಸವಸಾಗರವು ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಜಲಾಶಯ ದಶಕಗಳ ಬೇಡಿಕೆಯಂತೆ ಉದ್ಯಾನವನ ನಿರ್ಮಾಣಕ್ಕೆ ಸರ್ಕಾರ ಮುಂದಾಗಲಿ
ಬಸವಸಾಗರ ಜಲಾಶಯವು ಕೃಷ್ಣಾ ಅಚ್ಚುಕಟ್ಟು ಭಾಗದ ರೈತರ ಜೀವನಾಡಿಯಾಗಿದೆ. ಸಮಗ್ರ ನೀರಾವರಿಗೆ ಒತ್ತು ನೀಡಬೇಕು. ಕಾಲುವೆಯ ಕೊನೆ ಭಾಗದ ರೈತರಿಗೆ ನೀರು ತಲುಪಿದರೆ ರೈತ ಬಾಳು ಹಸನಾಗುತ್ತದೆ
ಎಂ.ಆರ್ ಖಾಜಿ ಕೃಷ್ಣಾ ಕಾಡಾ ನೀರು ಬಳಕೆದಾರರ ಸಂಘದ ಮುಖಂಡ
ನಾರಾಯಣಪುರ ಜಲಾಶಯದ ಮುಂಭಾಗದಲ್ಲಿ ಸುಂದರ ಉದ್ಯಾನವನ ನಿರ್ಮಿಸಿದರೆ ಸಾಕಷ್ಟು ಪ್ರವಾಸಿಗರು ಬರುತ್ತಾರೆ
ವಿರೇಶ ಹಿರೇಮಠ ನಾರಾಯಣಪುರ ನಿವಾಸಿ
ಅಧಿಕಾರಿಗಳು ಜಲಾಶಯದಲ್ಲಿ ಸಾಕಷ್ಟು ನೀರು ಇದ್ದರೂ ಕಾಲುವೆಗೆ ಹರಿಸಲಿಲ್ಲ. ಈಗ ಏಕಾಏಕಿ ಕಾಲುವೆಯ ಜೊತೆಗೆ ನದಿಗೂ ಬಿಡುತ್ತಿರುವುದು ಪ್ರಶ್ನಾರ್ಹವಾಗಿದೆ
ಹಣಮಂತರಾಯ ಮಡಿವಾಳ ರೈತ ಮುಖಂಡ
ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯತನದಿಂದ ರೈತರು ಸಂಕಷ್ಟ ಎದುರಿಸುವಂತಾಗಿದೆ. ಅತಿದೊಡ್ಡ ಜಲಾಶಯ ಹೊಂದಿದರೂ ಸಮರ್ಪಕ ಬಳಕೆ ಆಗದಿರುವುದು ಚಿಂತನೀಯ
ಉಸ್ತಾದ ವಜಾಹತ್ ಹುಸೇನ್ ಜೆಡಿಎಸ್ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ
ಆಲಮಟ್ಟಿಯಂತೆ ಬೇಕು ಉದ್ಯಾನವನ
ಜಲಾಶಯದ ಮುಂಭಾಗ ವಿಸ್ತಾರ ಭೂ ಪ್ರದೇಶವಿದ್ದು ಸುಂದರವಾದ ಉದ್ಯಾನವನ ನಿರ್ಮಾಣ ಮಾಡಿದರೆ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ. ಉದ್ಯೋಗ ಸೃಷ್ಟಿಯ ಜೊತೆಗೆ ಸರ್ಕಾರಕ್ಕೂ ಆದಾಯದ ಮೂಲವಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಉದ್ಯಾನವನ ನಿರ್ಮಿಸಬೇಕು ಎಂಬುದು ಈ ಭಾಗದ ಜನರ ಹಲವು ದಶಕಗಳ ಬೇಡಿಕೆಯಾಗಿದೆ. ಜಲಾಶಯದ ಬಳಿ ಉದ್ಯಾನ ನಿರ್ಮಾಣಕ್ಕಾಗಿ ಜಾಗ ಮೀಸಲಿಟ್ಟಿದ್ದರೂ ಅದರ ಪ್ರಯೋಜನವಾಗುತ್ತಿಲ್ಲ. ಜಲಾಶಯದ ಸುತ್ತಮುತ್ತ ಪ್ರೇಕ್ಷಣೀಯ ಸ್ಥಳಗಳಿದ್ದು ಇಲ್ಲಿಗೆ ಬಂದವರು ಅಲ್ಲಿಗೂ ಭೇಟಿ ನೀಡಿದರೆ ಪ್ರವಾಸೋದ್ಯಮ ಕ್ಷೇತ್ರ ಉತ್ತೇಜನ ಆಗುತ್ತದೆ. ಪುಣ್ಯಕ್ಷೇತ್ರ ಕೃಷ್ಣಾ ನದಿ ತೀರದಲ್ಲಿ ದಕ್ಷಿಣ ಕಾಶಿ ಎಂದೇ ಪುರಾಣ ಪ್ರಸಿದ್ದ ಛಾಯಾ ಭಗವತಿ ಪುಣ್ಯಕ್ಷೇತ್ರವಿದ್ದು ವಿಶೇಷ ದಿನಗಳಲ್ಲಿ ಅಪಾರ ಸಂಖ್ಯೆಯ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ದೇವಿಯ ದರ್ಶನ ಪಡೆಯುತ್ತಾರೆ. ನದಿಗೆ ಅಪಾರ ನೀರು ಹರಿಬಿಟ್ಟ ಸಂದರ್ಭದಲ್ಲಿ ಕ್ಷೇತ್ರಕ್ಕೆ ಸಮೀಪವಿರುವ ಚಕ್ರಕಟ್ಟಾ ವಿವ್ ಪಾಂಟ್‌ಗೆ ಸಾವಿರಾರು ಸಂಖ್ಯೆಯ ಪ್ರವಾಸಿಗರು ಆಗಮಿಸಿ ವಿಸ್ತಾರವಾಗಿ ಹರಿಯುವ ಕೃಷ್ಣಾನದಿಯ ಪ್ರವಾಹವನ್ನು ನಿಸರ್ಗ ನಿರ್ಮಿತ ಕಲ್ಲು ಪೊಟರೆಗಳ ಸೀಳಿನಿಂದ ಉಂಟಾದ ಕಿರು ಜಲಪಾತಗಳಿಂದ ರಭಸದಿಂದ ದುಮ್ಮಿಕ್ಕುವ ನೀರಿನ ರಮಣೀಯ ದೃಶ್ಯವನ್ನು ಕಣ್ತುಂಬಿಕೊಂಡು ಸಂಭ್ರಮಿಸುತ್ತಾರೆ.
ಜಲವಿದ್ಯುತ್ ಉತ್ಪಾದನೆ
ಜಲಾಶಯದಿಂದ ಕೃಷಿ ಕುಡಿಯುವ ನೀರಿನ ಜೊತೆಗೆ ಜಲಾಶಯಕ್ಕೆ ಹೊಂದಿಕೊಂಡಿರುವ ಮುರುಡೇಶ್ವರ ಜಲವಿದ್ಯುತ್ ಸ್ಥಾವರದಿಂದ ವಿದ್ಯುತ್ ಉತ್ಪಾದನೆ ಮೂಲಕ ಕೃಷ್ಣಾ ನದಿಗೆ ನೀರು ಹರಿಸಲಾಗುತ್ತದೆ. ಮುಂದೆ ಹರಿದ ನೀರು ಬೋರುಕಾ ವಿದ್ಯುತ್ ಸ್ಥಾವರದ ಮೂಲಕವು 24 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದನೆಗೆ ಬಳಕೆಯಾಗುತ್ತದೆ.
‘ನಿಲ್ಲದ ಕಾಲುವೆ ಕೊನೆ ಭಾಗದ ರೈತರ ಗೋಳು’
ಸುರಪುರ: ತಾಲ್ಲೂಕಿನಲ್ಲಿ ಮೂರು ವಿತರಣಾ ಕಾಲುವೆಗಳಿಂದ ಜಮೀನುಗಳಿಗೆ ನೀರು ಹರಿಸುವ ವ್ಯವಸ್ಥೆ ಮಾಡಲಾಗಿದೆ. ಕಾಲುವೆ ಕೊನೆ ಭಾಗಕ್ಕೆ ನೀರು ಮರೀಚಿಕೆಯಾಗಿದ್ದು ಆ ಭಾಗದ ರೈತರು ಗೋಳು ಮುಂದುವರಿದಿದೆ. ವಿತರಣಾ ಕಾಲುವೆ 4 ಬೂದನೂರದಿಂದ ಮಾಲಗತ್ತಿವರೆಗೆ 4 ಕಿ.ಮೀ ಉದ್ದವಿದೆ. ಈ ಕಾಲುವೆಯಿಂದ 5200 ಹೆಕ್ಟೇರ್ ಜಮೀನಿಗೆ ನೀರು ಉಣಿಸಲಾಗುತ್ತಿದೆ. ವಿತರಣಾ ಕಾಲುವೆ 5 ದ್ಯಾಮನಾಳದಿಂದ ದೇವಪುರದವರೆಗೆ 40 ಕಿ.ಮೀ. ಉದ್ದವಿದೆ. ಈ ಕಾಲುವೆ ವ್ಯಾಪ್ತಿಯಲ್ಲಿ 15884 ಜಮೀನು ಬರುತ್ತದೆ. ವಿತರಣಾ ಕಾಲುವೆ 6 ವನದುರ್ಗದಿಂದ ಸುಗೂರವರೆಗೆ 36 ಕಿ.ಮೀ ಉದ್ದವಿದೆ. ಇದರ ವ್ಯಾಪ್ತಿಯಲ್ಲಿ 18400 ಹೆಕ್ಟೇರ್ ಭೂಮಿ ಒಳಪಡುತ್ತದೆ. ಕಳೆದ ಎರಡು ವರ್ಷಗಳಿಂದ ಕಾಲುವೆ ದುರಸ್ತಿ ಜಂಗಲ್ ಕಟಿಂಗ್ ಹೂಳು ತೆಗೆಯುವ ಕಾಮಗಾರಿ ಮಾಡಿಲ್ಲ. ರೈತರು ಈ ಬಗ್ಗೆ ವಿಚಾರಿಸಿದರೆ ಅನುದಾನ ಇಲ್ಲ ಎಂದು ಅಧಿಕಾರಿಗಳು ಉತ್ತರ ಹೇಳಿ ಕೈ ತೊಳೆದುಕೊಂಡಿದ್ದಾರೆ. ಈಗಾಗಲೇ ಬಸವಸಾಗರ ಜಲಾಶಯದಿಂದ ಕಾಲುವೆಗೆ ನೀರು ಹರಿಸಲಾಗುತ್ತಿದೆ. ಕಾಲುವೆಗಳ ನಿರ್ವಹಣೆ ಮಾಡದಿರುವುದರಿಂದ ಕೊನೆ ಭಾಗಕ್ಕೆ ನೀರು ತಲುಪದಿರುವ ಆತಂಕವನ್ನು ರೈತರು ಎದುರಿಸುತ್ತಿದ್ದಾರೆ.
‘30 ವರ್ಷಗಳಿಂದ ಸಿಕ್ಕಿಲ್ಲ ನೀರು’
ಹುಣಸಗಿ: ತಾಲ್ಲೂಕಿನಲ್ಲಿ ಅಂದಾಜು 50000 ಹೆಕ್ಟೇರ್‌ಗೂ ಹೆಚ್ಚು ನೀರಾವರಿ ಕ್ಷೇತ್ರ ಇದ್ದು ಇನ್ನೂ ಹೆಚ್ಚಿನ ಪ್ರದೇಶಕ್ಕೆ ನೀರು ಒದಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಕೃಷ್ಣಭಾಗ್ಯಜಲ ನಿಗಮದ ಅಧಿಕಾರಿಗಳು ಹೇಳುತ್ತಾರೆ. ‘ಕಳೆದ 30 ವರ್ಷಗಳ ಹಿಂದೆಯೇ ಕಾಲುವೆ ಜಾಲ ಇದ್ದರೂ ಸಹಿತ ದೇವತ್ಕಲ್ ಬೇನಕನಹಳ್ಳಿ ಸಿದ್ಧಾಪುರ ಭಾಗದಲ್ಲಿ ಇಂದಿಗೂ ಸಮರ್ಪಕವಾಗಿ ನೀರು ಲಭ್ಯವಾಗಿಲ್ಲ’ ಎಂದು ದೇವತ್ಕಲ್ ಹಾಗೂ ಹಾಲಬಾವಿ ಗ್ರಾಮದ ಹಿರಿಯ ಹೋರಾಟಗಾರಾದ ಅಯ್ಯಣ್ಣ ಹಾಲಬಾವಿ ಮಲ್ಲಣ್ಣ ನಾಯಕ ದಂಡಪ್ಪ ಹೇಳುತ್ತಾರೆ. ಹುಣಸಗಿ ತಾಲ್ಲೂಕಿನಲ್ಲಿ ಒಟ್ಟು 25ಕ್ಕೂ ಹೆಚ್ಚು ವಿತರಣಾ ಕಾಲುವೆಗಳು ಹಾಗೂ ಉಪಕಾಲುವೆಗಳನ್ನು ಹೊಂದಿದ್ದು ಅಂದಾಜು 288 ಕಿಮಿ ವ್ಯಾಪ್ತಿಯಲ್ಲಿ ಕಾಲುವೆಯ ಮೂಲಕ ನೀರು ಒದಗಿಸಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಕಾಲುವೆ ಜಾಲದಲ್ಲಿ ಸಿಲ್ಟ್ ಹಾಗೂ ಮುಳ್ಳು ಕಂಟಿ ತೆರವು ದುರಸ್ತಿ ಕಾರ್ಯ ನಡೆದಿಲ್ಲ ಎಂದು ರೈತರು ಹೇಳುತ್ತಾರೆ. ಅಲ್ಲದೆ ಕಾಲುವೆ ಅಡಿಯಲ್ಲಿ ಬರುವ ಬಹುತೇಕ ಸೇವಾ ರಸ್ತೆಗಳು ಹದಗೆಟ್ಟಿದ್ದರಿಂದಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿ ನೀರು ನಿರ್ವಹಣೆಯಲ್ಲಿ ಗುಣಮಟ್ಟದ ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ‘ಇಸಾಂಪುರ ಗ್ರಾಮದಿಂದ ನೀರು ಹರಿಸುವ ಡಿ 7 ವಿತರಣಾ ಕಾಲುವೆ ಎಸ್ಆರ್ ಹಾಗೂ ಐಪಿ ಸೇವಾ ರಸ್ತೆಗಳು ಸಂಪೂರ್ಣ ಹಾಳಾಗಿವೆ. ದುರಸ್ತಿಗೆ ಅಧಿಕಾರಿಗಳು ಮುಂದಾಗುತ್ತಿಲ್ಲ’ ಎಂದು ವಜ್ಜಲ ಗ್ರಾಮದ ನಿಂಗನಗೌಡ ಬಸನಗೌಡ್ರ ಹಾಗೂ ಕಲ್ಲದೇವನಹಳ್ಳಿ ಗ್ರಾಮದ ಸಿದ್ದಲಿಂಗಯ್ಯ ಹಿರೇಮಠ ತಿಳಿಸಿದ್ದಾರೆ.
ನಿರ್ವಹಣೆ ಇಲ್ಲದ ಕಾಲುವೆಗಳು
ವಡಗೇರಾ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಇರುವ ಮುಖ್ಯ ವಿತರಣಾ ಕಾಲುವೆ ಹಾಗೂ ಉಪ ಕಾಲುವೆಗಳ ಸರಿಯಾದ ನಿರ್ವಹಣೆ ಇಲ್ಲದಿರುವುದರಿಂದ ಕಾಲುವೆಗಳ ಬದಿಗಳಲ್ಲಿ ಜಾಲಿ ಗಿಡಗಳು ಹಾಗೂ ಹುಲ್ಲು ಬೆಳೆದಿದೆ ಇದರಿಂದಾಗಿ ಕಾಲುವೆಗಳ ಮುಖಾಂತರ ಜಮೀನುಗಳಿಗೆ ಸರಿಯಾಗಿ ನೀರು ಹರಿಯುವುದಿಲ್ಲ. ಇದೇ ಜುಲೈ 19ರಿಂದ ನಾರಾಯಣಪುರ ಜಲಾಶಯದಿಂದ ಕಾಲುವೆಗಳಿಗೆ ಬಿಟ್ಟ ನೀರು ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ತಡಿಬಿಡಿ ಗ್ರಾಮದ ಅನತಿ ದೂರದಲ್ಲಿ ಇರುವ ಮುಖ್ಯ ವಿತರಣಾ ಕಾಲುವೆ ಸಂಖ್ಯೆ 58 ರಲ್ಲಿ ನೀರು ತುಂಬಿ ಹರಿಯುತಿತ್ತು. ಆದರೆ ಶನಿವಾರ ಆ ನೀರೆಲ್ಲಾ ಕಾಲುವೆಯಲ್ಲಿ ಖಾಲಿಯಾಗಿತ್ತು. ಇದರಿಂದಾಗಿ ತಾಲ್ಲೂಕಿನ‌ ರೈತರ ಜಮೀನುಗಳಿಗೆ ನೀರಿಲ್ಲದಂತಾಗಿದೆ. ವಡಗೇರಾದ ಉಪ ವಿಭಾಗದ ಕೃಷ್ಣಾ ಮೇಲ್ದಂಡೆ ಯೋಜನೆಯ ಅಡಿಯಲ್ಲಿ ಸುಮಾರು 33 ಗ್ರಾಮಗಳು ಬರುತ್ತವೆ. ಇದರಲ್ಲಿ ನೀರಾವರಿ ಪ್ರದೇಶದ 21 ಗ್ರಾಮಗಳು ಇವೆ. 2800 ಹೆಕ್ಟೇರ್‌ ಭೂಮಿ ನಿರಾವರಿ ಸೌಲಭ್ಯವನ್ನು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.