ADVERTISEMENT

ಯಾದಗಿರಿ: ಬೈಕ್‌ಗೆ ಸಾರಿಗೆ ಬಸ್ ಡಿಕ್ಕಿಯಾಗಿ ಒಂದೇ ಕುಟುಂಬದ ಐವರ ಸಾವು

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2025, 12:25 IST
Last Updated 5 ಫೆಬ್ರುವರಿ 2025, 12:25 IST
   

ಯಾದಗಿರಿ: ಸುರಪುರದಿಂದ ತಿಂಥಣಿ ಕಡೆಗೆ ಹೊರಟಿದ್ದ ಬೈಕ್ ಗೆ ಸಾರಿಗೆ ಬಸ್ ಡಿಕ್ಕಿಯಾಗಿ ಐವರು ಸಾವನ್ನಪ್ಪಿರುವ ದುರ್ಘಟನೆ ಜಿಲ್ಲೆಯ ಸುರಪುರ ತಾಲ್ಲೂಕಿನ ತಿಂಥಣಿ ಬಳಿ ಬುಧವಾರ ನಡೆದಿದೆ.

ಒಂದೇ ಕುಟುಂಬದ ಇಬ್ಬರು ಮಕ್ಕಳು ಸೇರಿ ಐವರು ಸಾವನ್ನಪ್ಪಿದ್ದಾರೆ‌.

ಹನುಮಂತ ಆಂಜನೇಯ (35),‌ ಗಂಗಮ್ಮ (28), ಹಣಮಂತ (1), ಹನುಮಂತನ ಸಹೋದರನ ಮಕ್ಕಳಾದ ಪವಿತ್ರಾ (5) ಹಾಗೂ ರಾಯಪ್ಪ (3) ಸಾವನ್ನಪ್ಪಿದವರು.

ADVERTISEMENT

ಸಾರಿಗೆ ಬಸ್ ಗುದ್ದಿದ ರಭಸಕ್ಕೆ ಸ್ಥಳದಲ್ಲಿ ಮೂವರು ಸಾವನ್ನಪ್ಪಿದ್ದು, ಉಳಿದ ಇಬ್ಬರು ಸುರಪುರ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.

ಮೃತರೆಲ್ಲರು ಶಹಾಪುರ‌ದ ಹಳಿಸಗರ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ. ಒಂದೇ ಬೈಕ್‌ನಲ್ಲಿ ಐದು ಜನ ಸಂಚರಿಸುತ್ತಿದ್ದರು.

ದೇವರ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು...

ತಿಂಥಣಿ ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರು ಶುಕ್ರವಾರ ನಡೆಯಲಿದ್ದ ಹುಲಿಗೆಮ್ಮ ದೇವಿ ಕಾರ್ಯಕ್ಕೆಂದು ತೆರಳುತ್ತಿದ್ದರು‌.

ಜಿಲ್ಲೆಯ ಶಹಾಪುರ ತಾಲ್ಲೂಕಿನ ಹಳಿಸಗರದಲ್ಲಿ ವಾಸ ಮಾಡುತ್ತಿದ್ದ ಒಂದೇ ಕುಟುಂಬದವರು ದೇವರ ಕಾರ್ಯಕ್ರಮಕ್ಕೆಂದು ರಾಯಚೂರು ಜಿಲ್ಲೆಯ ಲಿಂಗಸೂಗೂರ ತಾಲ್ಲೂಕಿನ ಗುರುಗುಂಟಾ ಗ್ರಾಮಕ್ಕೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.

ಮೃತ ಹಣಮಂತ ಅವರು ಗುರುಗುಂಟಾದಿಂದ ಹಲವಾರು ವರ್ಷಗಳಿಂದ ಶಹಾಪುರ ತಾಲ್ಲೂಕಿನ ಹಳಿಸಗರ ಗ್ರಾಮಕ್ಕೆ ಬಂದು ಗಂಗಮ್ಮರನ್ನು ವಿವಾಹವಾಗಿದ್ದರು‌.

ಬೈಕ್ ಚಾಲಕ ಲಾರಿ ಹಿಂದಿಕ್ಕಲು ಹೋಗಿ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.‌

ಘಟನಾ ಸ್ಥಳಕ್ಕೆ ಎಸ್ಪಿ, ಸುರಪುರ ಡಿವೈಎಸ್ಪಿ, ಸಿಪಿಐ, ಸುರಪುರ, ಪಿಐ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.