ಸೈದಾಪುರ: ಪಟ್ಟಣದ ರೈಲು ನಿಲ್ದಾಣದಲ್ಲಿ ಮೂಲ ಸೌಲಭ್ಯಗಳು ಇಲ್ಲದೇ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಕೂಡಲೇ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಗುರುಮಠಕಲ್ ಬಿಜೆಪಿ ಯುವ ಮುಖಂಡ ಪ್ರಕಾಶಗೌಡ ಮಾಲಿ ಪಾಟೀಲ್ ಅವರ ನೇತೃತ್ವದಲ್ಲಿ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಲಾಯಿತು.
ಕಡೇಚೂರು–ಬಾಡಿಯಾಳ ಕೈಗಾರಿಕಾ ಪ್ರದೇಶದ ರೈಲು ಬೋಗಿ ಕಾರ್ಖಾನೆ ವಿಕ್ಷಣೆಗೆ ಆಗಮಿಸಿದ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ವಿಶೇಷ ಸನ್ಮಾನ ಮಾಡಿ ಮಾತನಾಡಿದರು.
ಗುರುಮಠಕಲ್ ಮತಕ್ಷೇತ್ರದ ಏಕೈಕ ರೈಲು ನಿಲ್ದಾಣವಾದ ಸೈದಾಪುರ ನಿಲ್ದಾಣದಿಂದ ನಿತ್ಯ ಸಾವಿರಾರೂ ಜನ ಪ್ರಯಾಣಿಕರು ಬಂದು ಹೋಗುತ್ತಾರೆ. ಆದರಿಂದ ಹೆಚ್ಚಿನ ಮೂಲ ಸೌಕರ್ಯ ಒದಗಿಸಬೇಕು. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಭಾಗದಲ್ಲಿ ಕೈಗಾರಿಕಾ ಪ್ರದೇಶವಿರುವುದರಿಂದ ಉತ್ತರ ಭಾರತ ಸೇರಿದಂತೆ ರಾಜ್ಯದ ಸುತ್ತಮುತ್ತಲಿನ ರಾಜ್ಯದ ಕಾರ್ಮಿಕರು ಆಗಮಿಸುತ್ತಿದ್ದಾರೆ. ನಮ್ಮ ಭಾಗದ ಜನರು ದಿನನಿತ್ಯ ಬೆಂಗಳೂರು, ಮುಂಬೈ, ಹೈದ್ರಾಬಾದ ಮತ್ತು ಚೆನೈನಂತಹ ಅನೇಕ ಮಹಾನಗರಗಳಿಗೆ ತೆರಳುತ್ತಿದ್ದಾರೆ. ಆದರಿಂದ ಸಮರ್ಪಕವಾದ ರೈಲುಗಳ ನಿಲುಗಡೆ ಮಾಡಬೇಕು ಹಾಗೂ ಬಡ ಕಾರ್ಮಿಕರಿಗೆ ಅನುಕೂಲವಾದ ರಾಯಚೂರು–ವಿಜಯಪುರ ಇಂಟರ್ಸಿಟಿ ಪ್ಯಾಸೆಂಜರ್ ರೈಲು ಪುನರಾರಂಭಿಸಬೇಕು. ನಿಲ್ದಾಣದಲ್ಲಿ ಶೌಚಾಲಯ, ಕುಡಿಯುವ ನೀರು, ವಿಶ್ರಾಂತಿ ಕೋಣೆಗಳ ಸಮಸ್ಯೆ ಇದ್ದು ದುರಸ್ತಿ ಮಾಡಬೇಕು. ಇದಲ್ಲದೆ ರೈಲು ಗೇಟ್ ಹತ್ತಿರ ಹಳಿ ದಾಟಲು ನಿತ್ಯ ಹತ್ತಾರು ಗ್ರಾಮಗಳ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ವಾಹನಗಳು ಸುಲಭವಾಗಿ ತೆರಳಲು ಮೇಲು ಸೇತುವೆ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಹಿರಿಯ ಮುಖಂಡ ಶ್ರೀಧರ ಗಂಟಿ, ಬಸವರಾಜಪ್ಪಗೌಡ ಬಾಲಛೇಡ್, ಶ್ರೀದೇವಿ ಶೆಟ್ಟಿಹಳ್ಳಿ, ಗ್ರಾಪಂ ಸದಸ್ಯ ಸಿದ್ಧಲಿಂಗರೆಡ್ಡಿ ದೇಶಮುಖ, ಮಾಳಪ್ಪ, ಆನಂದ ಮಿರಿಯಾಲ ಸೇರಿದಂತೆ ಇತರೆ ಕಾರ್ಯಕರ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.