ADVERTISEMENT

ಯಾದಗಿರಿ: ಅತಿಥಿ ಉಪನ್ಯಾಸಕರ ಸಮಸ್ಯೆ ಬಗೆಹರಿಸಲು ಆಗ್ರಹ

ಎಬಿವಿಪಿಯಿಂದ ಬೃಹತ್‌ ಪ್ರತಿಭಟನೆ, ಮಾನವ ಸರಪಳಿ ನಿರ್ಮಿಸಿ ಹೋರಾಟ

​ಪ್ರಜಾವಾಣಿ ವಾರ್ತೆ
Published 5 ಜನವರಿ 2022, 2:07 IST
Last Updated 5 ಜನವರಿ 2022, 2:07 IST
ಯಾದಗಿರಿಯ ಸುಭಾಷ ವೃತ್ತದಲ್ಲಿ ಎಬಿವಿಪಿಯಿಂದ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು
ಯಾದಗಿರಿಯ ಸುಭಾಷ ವೃತ್ತದಲ್ಲಿ ಎಬಿವಿಪಿಯಿಂದ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು   

ಯಾದಗಿರಿ: ಹಲವು ದಿನಗಳಿಂದ ಕಾಲೇಜುಗಳ ಅತಿಥಿ ಉಪನ್ಯಾಸಕರು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದು, ಕೂಡಲೇ ಅತಿಥಿ ಉಪನ್ಯಾಸಕರ ಬಗೆಹರಿಸಿ ಪೂರ್ಣ ಪ್ರಮಾಣದ ತರಗತಿಗಳನ್ನು ನಡೆಸಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವತಿಯಿಂದ ಮಂಗಳವಾರ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ನಗರದ ಪದವಿ ಮಹಾವಿದ್ಯಾಲಯದಿಂದ ಸುಭಾಷ ವೃತ್ತದ ವರೆಗೆ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ರಾಜ್ಯ ಸರ್ಕಾರ ಸೂಕ್ತ ತೀರ್ಮಾನ ತೆಗೆದುಕೊಂಡು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಮುಖಂಡರು, ಪದವಿ ಕಾಲೇಜು ತರಗತಿಗಳು ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿಲ್ಲ. ಮುಂದಿನ ದಿನಗಳಲ್ಲಿ ಪರೀಕ್ಷೆಗಳಿದ್ದು, ಪಠ್ಯ ಪುಸ್ತಕ ಮುಗಿಸದೇ ಪರೀಕ್ಷೆ ಬರೆಯುವುದು ಹೇಗೆ ಎಂದು ಪ್ರಶ್ನಿಸಿದರು.

ಕಲ್ಯಾಣ ಕರ್ನಾಟಕ ಎಂಬ ಈ ಭಾಗಕ್ಕೆ ಕೇವಲ ಹೆಸರಾಗಿರದೆ ಈ ಭಾಗದ ವಿದ್ಯಾರ್ಥಿಗಳ ಮತ್ತು ಅವರ ಜ್ಞಾನಾರ್ಜನೆ ಬೇಕಾದ ಮೂಲಭೂತ ಸೌಕರ್ಯಗಳು ಮತ್ತು ಬೋಧನಾ ತಂಡ ನೀಡಬೇಕು. ಅತಿಥಿ ಉಪನ್ಯಾಸಕರು ಹೋರಾಟ ಮಾಡುವುದರಿಂದ ಪೂರ್ಣ ಪ್ರಮಾಣದ ತರಗತಿ ನಡೆಯುತ್ತಿಲ್ಲ. ಶೀಘ್ರದಲ್ಲಿ ಇದಕ್ಕೆ ಪರಿಹಾರ ಮಾಡದೇ ಹೋದರೆ ಸರ್ಕರವೇ ನೇರ ಹೊಣೆ. ತಕ್ಷಣವೇ ಸಮಸ್ಯೆಯನ್ನು ಬಗೆಹರಿಸದೇ ಹೋದರೆ ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡಮಟ್ಟದ ಹೋರಾಟ ಮಾಡುವುದಾಗಿ ಎಚ್ಚರಿಸಲಾಯಿತು.

ನಂತರ ಸುಭಾಷ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರಕ್ಕೆ ತಕ್ಷಣವೇ ಪೂರ್ಣ ಪ್ರಮಾಣದ ತರಗತಿಗಳನ್ನು ನಡೆಸಬೇಕೆಂದು ಹೋರಾಟದ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಕೆಲವೊತ್ತು ಟ್ರಾಫಿಕ್‌ ಜಾಂ ಉಂಟಾಗಿ ಪ್ರಯಾಣಿಕರು ಪರದಾಡಿದರು. ಎಲ್ಲ ಕಡೆಯ ರಸ್ತೆಗಳಲ್ಲಿ ವಾಹನಗಳು ನಿಂತು ಸಮಸ್ಯೆ ಅನುಭವಿಸಿದರು.

ADVERTISEMENT

ಈ ವೇಳೆ ವಿಭಾಗ ಸಂಘಟನಾ ಕಾರ್ಯದರ್ಶಿ ಧನಂಜಯ, ವಿಭಾಗೀಯ ಪ್ರಮುಖ ರಾಜಶೇಖರ ಭಾವಿಮನಿ, ನಗರಾಧ್ಯಕ್ಷ ಡಾ.ಕೃಷ್ಣಮೂರ್ತಿ ಕುಲಕರ್ಣಿ, ಜಿಲ್ಲಾ ಸಹ ಸಂಚಾಲಕ ಅಶೋಕ ಗುತ್ತೇದಾರ, ನಗರ ಕಾರ್ಯದರ್ಶಿ ಬಸವರಾಜ ಎಸ್.ನಕ್ಕಲ್, ತಾಲ್ಲೂಕು ಸಂಚಾಲಕ, ಗವಿಲಿಂಗ ಹೊನಗೇರಾ, ವೀರೇಶ, ಸನ್ನಿ ಮುಂಡ್ರಗಿ, ಮೌನೇಶ ಎಸ್. ಗಿರೀಶ, ವಿಶ್ವ, ಲಕ್ಷ್ಮಣ, ಚನ್ನು, ಮಶೆಮ್ಮ ಎಂ. ಗೀತಾ, ಎಸ್.ಮೌನೇಶ, ಎಚ್.ಭಾಗ್ಯಶ್ರೀ, ಎಚ್.ಶಾರದಾ, ಎಸ್. ಗೀತಾ, ಮಾಯಾ, ರಾಜೇಶ್ವರಿ, ಲಕ್ಷ್ಮೀ, ಭೀಮಾಶಂಕರ, ವಿದ್ಯಾರ್ಥಿಗಳು ಭಾಗವಹಿಸಿದ್ದರು.

***

ಅತಿಥಿ ಉಪನ್ಯಾಸಕರು ತಮ್ಮ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಪಾಠ–ಬೋಧನೆ ಇಲ್ಲದೆ ಸಮಸ್ಯೆಯಾಗಿದೆ
ಅಶೋಕ ಗುತ್ತೇದಾರ, ಎಬಿವಿಪಿ ಜಿಲ್ಲಾ ಸಂಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.