ಸುರಪುರ:ಬೆಂಗಳೂರಿಗೆ ದುಡಿಯಲು ಹೋಗಿದ್ದ ತಾಲ್ಲೂಕಿನ ನಾಲ್ವರು ಯುವಕರು ಜಗಳೂರು ಹತ್ತಿರ ರಸ್ತೆ ಅಪಘಾತದಲ್ಲಿ ಮೃತ ಪಟ್ಟಿರುವುದಕ್ಕೆ ಶಾಸಕ ರಾಜೂಗೌಡ ದಿಗ್ಭ್ರಮೆ ವ್ಯಕ್ತ ಪಡಿಸಿದರು.
‘ದಾವಣಗೆರೆ ಎಸ್ಪಿಯವರಿಗೆ ಮಾತನಾಡಿ ತುರ್ತು ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ. ಮೃತ ದೇಹಗಳನ್ನು ಆಂಬುಲೆನ್ಸ್ ಮೂಲಕ ಕಳುಹಿಸಿಕೊಡಲು ಸೂಚಿಸಿದ್ದೇನೆ. ಶುಕ್ರವಾರ ತಡ ರಾತ್ರಿ ವೇಳೆಗೆ ಕಳೆಬರಗಳು ತಾಲ್ಲೂಕಿಗೆ ತಲುಪಲಿವೆ’ ಎಂದು ತಿಳಿಸಿದರು. ‘ಮೂವರು ಯುವಕರು ನಮ್ಮ ತಾಲ್ಲೂಕಿನವರಾಗಿದ್ದು, ಒಂದು ಮೃತದೇಹದ ಗುರುತು ಸಿಕ್ಕಿಲ್ಲ. ವಿಜಯನಗರ ಜಿಲ್ಲೆ ಕೂಡಲಗಿ ಎನ್ನಲಾಗುತ್ತಿದ್ದು, ಈ ಬಗ್ಗೆ ಖಚಿತವಾಗಿಲ್ಲ. ಮೃತ ಯುವಕರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬದವರಿಗೆ ದುಃಖ ಸಹಿಸಿಕೊಳ್ಳುವ ಶಕ್ತಿ ದೇವರು ನೀಡಲಿ’ ಎಂದು ಪ್ರಾರ್ಥಿಸುವುದಾಗಿ ಹೇಳಿದರು.
‘ಗುಳೆ ಹೋಗುತ್ತಿರುವ ಯುವಕರು ರಸ್ತೆ ಅವಘಡಗಳಲ್ಲಿ ಸಾವನ್ನಪ್ಪುತ್ತಿರುವ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿರುವುದು ನನ್ನನ್ನು ವಿಚಲಿತನನ್ನಾಗಿ ಮಾಡಿದೆ. ಗುಳೆ ತಪ್ಪಿಸುವ ಉದ್ದೇಶದಿಂದಲೇ ಸರ್ಕಾರ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತಂದಿದೆ. ಪ್ರತಿ ದಿನದ ಕೂಲಿ ₹289 ಇದೆ. ಕಾರ್ಮಿಕರು ಗುಳೆ ಹೋಗುವುದನ್ನು ಬಿಟ್ಟು ಗ್ರಾಮದಲ್ಲಿಯೇ ಕೆಲಸ ಮಾಡಿ ಕುಟುಂಬದೊಂದಿಗೆ ಸುಖ ಸಂಸಾರ ಸಾಗಿಸಬೇಕು’ ಎಂದು ಅವರು ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.