ADVERTISEMENT

ಯಾದಗಿರಿ | ಶಾಲೆಗಳ ಆವರಣದಲ್ಲಿ ಟಿಸಿ, ವಿದ್ಯುತ್ ತಂತಿ: ಜೀವ ಭಯದಲ್ಲಿ ಮಕ್ಕಳು

ಮಲ್ಲಿಕಾರ್ಜುನ ನಾಲವಾರ
Published 22 ಡಿಸೆಂಬರ್ 2025, 7:25 IST
Last Updated 22 ಡಿಸೆಂಬರ್ 2025, 7:25 IST
ಯಾದಗಿರಿ ತಾಲ್ಲೂಕಿನ ವರ್ಕನಳ್ಳಿ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿ  ಪ್ರಜಾವಾಣಿ ಚಿತ್ರ: ರಾಜಕುಮಾರ ನಳ್ಳಿಕರ 
ಯಾದಗಿರಿ ತಾಲ್ಲೂಕಿನ ವರ್ಕನಳ್ಳಿ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿ  ಪ್ರಜಾವಾಣಿ ಚಿತ್ರ: ರಾಜಕುಮಾರ ನಳ್ಳಿಕರ    

ಯಾದಗಿರಿ: ಜಿಲ್ಲೆಯ 72 ಶಾಲೆಗಳ ಮೇಲೆ ವಿದ್ಯುತ್ ತಂತಿ ಹಾದು ಹೋಗಿದ್ದು, 40 ಶಾಲೆಗಳ ಆವರಣದಲ್ಲಿ ವಿದ್ಯುತ್ ಪರಿವರ್ತಕಗಳು (ಟಿಸಿ) ಅಳವಡಿಕೆಯಾಗಿವೆ. ಶಾಲೆಗೆ ಬರುವ ಮಕ್ಕಳು, ಶಿಕ್ಷಕರಿಗೆ ವಿದ್ಯುತ್ ತಂತಿ ಮತ್ತು ಟಿಸಿಗಳು ಅಪಾಯಕ್ಕೆ ಆಹ್ವಾನಿಸುವಂತಿವೆ.

ಸತತ ಮಳೆಯ ಸಂದರ್ಭದಲ್ಲಿ ಮುಂಜಾಗ್ರತ ಕ್ರಮವಾಗಿ ಶಾಲೆಗಳ ಕಟ್ಟಡಗಳ ನೈಜ ಸ್ಥಿತಿಯನ್ನು ಅರಿಯಲು ಶಿಕ್ಷಣ ಇಲಾಖೆಯು ಜಿಲ್ಲೆಯ ಎಲ್ಲ ಶಾಲೆಗಳ ಮೂಲಸೌಕರ್ಯಗಳ ಮಾಹಿತಿಯನ್ನು ಕಲೆ ಹಾಕಿತ್ತು. ಆ ವೇಳೆ ಶಾಲಾ ಆವರಣ, ಕಟ್ಟಡಗಳ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿ ಹಾಗೂ ಆವರಣದಲ್ಲಿ ಅಳವಡಿಸಿರುವ ಟಿಸಿಗಳ ಮಾಹಿತಿಯನ್ನು ಸಂಗ್ರಹಿಸಿದೆ. ಬಹುತೇಕ ಕಡೆಗಳಲ್ಲಿ ವಿದ್ಯುತ್ ತಂತಿ ಹಾಗೂ ಟಿಸಿಗಳು ತೂಗುಗತ್ತಿಯಾಗಿ ಉಳಿದುಕೊಂಡಿವೆ.

ಯಾದಗಿರಿ ಕ್ಷೇತ್ರ ಶಿಕ್ಷಣಾಧಿಕಾರಿ ವ್ಯಾಪ್ತಿಯ 17, ಶಹಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ವ್ಯಾಪ್ತಿಯ 22 ಹಾಗೂ ಸುರಪುರ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರದೇಶದಲ್ಲಿನ 33 ಶಾಲೆಗಳ ಮೇಲಿಂದ ಅಪಾಯಕಾರಿ ವಿದ್ಯುತ್ ತಂತಿ ಹಾದು ಹೋಗಿದೆ.

ADVERTISEMENT

ಯಾದಗಿರಿ ವ್ಯಾಪ್ತಿಯಲ್ಲಿ 10, ಶಹಾಪುರ ವ್ಯಾಪ್ತಿಯಲ್ಲಿ 12 ಹಾಗೂ ಸುರಪುರ ಪ್ರದೇಶದಲ್ಲಿ 18 ಶಾಲೆಗಳ ಆವರಣದಲ್ಲಿ ಟಿಸಿಗಳನ್ನು ಅಳವಡಿಕೆ ಮಾಡಲಾಗಿದೆ. ಹೈವೋಲ್ಟೇಜ್ ವಿದ್ಯುತ್ ಪ್ರಸರಣ ಮಾರ್ಗಗಳನ್ನು ಹಾಗೂ ಟಿಸಿಗಳನ್ನು ಪರ್ಯಾಯವಾಗಿ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ಪೋಷಕರು, ಶಾಲಾ ಶಿಕ್ಷಕರು ನಿರಂತರವಾಗಿ ಮನವಿ ಮಾಡಿಕೊಂಡು ಬರುತ್ತಿದ್ದಾರೆ.

‘ತಾಲ್ಲೂಕಿನ ವರ್ಕನಳ್ಳಿ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮೇಲಿಂದ ವಿದ್ಯುತ್ ತಂತಿ ಹಾದು ಹೋಗಿದೆ. ಒಂದು ದಿನ ಏಕಾಏಕಿ ವಿದ್ಯುತ್ ತಂತಿ ಕಡಿದು ಬಿದ್ದಿತ್ತು. ಅದೃಷ್ಟವಶಾತ್ ಆ ದಿನ ಶಾಲೆಗೆ ರಜೆ ಇದ್ದಿದ್ದರಿಂದ ಯಾವುದೇ ಅವಘಡವಾಗಲಿಲ್ಲ. ಈಗಲೂ ಆ ತಂತಿ ಹಾಗೆಯೇ ಉಳಿದುಕೊಂಡಿದೆ. ಗ್ರಾಮಸ್ಥರು ಹಾಗೂ ಮಕ್ಕಳ ಪೋಷಕರು ವಿದ್ಯುತ್ ತಂತಿ ಸ್ಥಳಾಂತರ ಮಾಡುವಂತೆ ಕೋರಿದ್ದರೂ ಸ್ಪಂದನೆ ಸಿಕ್ಕಿಲ್ಲ’ ಎನ್ನುತ್ತಾರೆ ಶಾಲೆಯ ಮುಖ್ಯಶಿಕ್ಷಕ ಕಹಿಂ ಪಾಶಾ.

ಕೊಡೆಕಲ್‌ನ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿನ ವಿದ್ಯುತ್ ಪರಿವರ್ತಕ

‘ಶಾಲಾ ಆವರಣದಲ್ಲಿ ಅಳವಡಿಕೆಯಾಗಿರುವ ಟಿಸಿ ಸ್ಥಳಾಂತರಕ್ಕೆ ಮುತುವರ್ಜಿ ವಹಿಸಿ ಇಲಾಖೆಗೆ ಮಾಹಿತಿ ನೀಡಿ ಪತ್ರವೂ ಬರೆಯಲಾಗಿದೆ. ಟಿಸಿ ಸುತ್ತಲೂ ತಂತಿ ಬೇಲಿಯೂ ಅಳವಡಿಸಿರಲಿಲ್ಲ. ಇಡೀ ಆವರಣವನ್ನು ಸ್ವಚ್ಛ ಮಾಡಿದರೂ ಟಿಸಿ ಸುತ್ತಲಿನ ಮುಳ್ಳು ಕಂಟಿಗಳನ್ನು ಹಾಗೆಯೇ ಬಿಟ್ಟು, ಮುಳ್ಳಿನ ಗಿಡಗಳನ್ನು ಬೇಲಿಯಂತೆ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಟಿಸಿ ಸಮೀಪ ಹೋಗದಂತೆ ಸದಾ ಜಾಗೃತಿ ವಹಿಸಲಾಗುತ್ತಿದೆ’ ಎನ್ನುತ್ತಾರೆ ಕೊಡೆಕಲ್ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಕೊಟ್ರೇಶ್ ಕೋಳೂರು.

ಆದ್ಯತೆಯ ಮೇಲೆ ತೆರವು: ನಮ್ಮ ಗಮನಕ್ಕೆ ಬಂದಿರುವ ಶಾಲೆಗಳ ಮೇಲಿನ ವಿದ್ಯುತ್ ತಂತಿ ಮಾರ್ಗಗಳ ಬದಲಾವಣೆ ಹಾಗೂ ಟಿಸಿಗಳನ್ನು ಆದ್ಯತೆಯ ಮೇಲೆ ಸ್ಥಳಾಂತರ ಮಾಡುತ್ತಿದ್ದೇವೆ. ಶಿಕ್ಷಣ ಇಲಾಖೆಯು ಶಾಲೆಗಳ ಮಾಹಿತಿಯ ಪಟ್ಟಿಯನ್ನು ನೀಡಿದ್ದಲ್ಲಿ ತ್ವರಿತವಾಗಿ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ ಜೆಸ್ಕಾಂನ ಯಾದಗಿರಿ ವಿಭಾಗದ ಇಇ.

‘ಒಂದು ತಿಂಗಳಲ್ಲಿ ಸ್ಥಳಾಂತರ’

‘ಶಾಲಾ ಕಟ್ಟಡಗಳ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿ ಟಿಸಿ ಕಂಬಗಳನ್ನು ಸ್ಥಳಾಂತರ ಮಾಡುವಂತೆ ಈಗಾಗಲೇ ನಿರ್ದೇಶನ ಕೊಡಲಾಗಿದೆ. ಯಾವೆಲ್ಲ ಶಾಲೆಗಳಲ್ಲಿ ಬದಲಾವಣೆ ಮಾಡಬೇಕಿದೆ ಎಂಬುದನ್ನು ಮಾಹಿತಿ ಪಡೆದು ಪರಿಶೀಲಿಸಿ ನಿರ್ದೇಶನ ಕೊಡಲಾಗುವುದು. ಒಂದು ತಿಂಗಳಲ್ಲಿ ವಿದ್ಯುತ್ ಕಂಬ ವಿದ್ಯುತ್ ತಂತಿ ಟಿಸಿಗಳನ್ನು ಸ್ಥಳಾಂತರ ಮಾಡಲಾಗುವುದು’ ಎಂದು ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ‘ಪ್ರಜಾವಾಣಿ’ಗೆ ತಿಳಿಸಿದರು.

₹ 2.50 ಕೋಟಿಗೆ ಬೇಡಿಕೆ ಸಲ್ಲಿಕೆ’

‘ಸುರಪುರ ವಿಭಾಗದ ವ್ಯಾಪ್ತಿಯಲ್ಲಿ ಅಪಾಯಕಾರಿ ಮಾರ್ಗವೆಂದು ಗುರುತಿಸಿ ಅವುಗಳ ಸ್ಥಳಾಂತರಕ್ಕೆ ಅಂದಾಜು ಪಟ್ಟಿ ಸಿದ್ಧಪಡಿಸಿ ₹ 2.50 ಕೋಟಿಗೆ ಬೇಡಿಕೆ ಸಲ್ಲಿಸಲಾಗಿದೆ’ ಎಂದು ಜೆಸ್ಕಾಂ ಸುರಪುರ ವಿಭಾಗದ ಇಇ ರಾಜಶೇಖರ ‘ಪ್ರಜಾವಾಣಿ’ಗೆ ತಿಳಿಸಿದರು. ‘ಶಾಲೆ ಸೇರಿದಂತೆ ಜನವಸತಿ ಪ್ರದೇಶದಲ್ಲಿನ ಹಳೇ ಮಾರ್ಗ ಟಿಸಿಗಳನ್ನು ಸ್ಥಳಾಂತರ ಮಾಡಿದ್ದೇವೆ. ಇನ್ನಷ್ಟು ಮಾಡಬೇಕಿದ್ದು ಅನುದಾನ ಬರುವುದರಲ್ಲಿ ತಡವಾಗಿದೆ. ಅನುದಾನ ಬಂದ ತಕ್ಷಣವೇ ಎಲ್ಲವನ್ನೂ ಬೇರೆಡೆ ವರ್ಗಾಯಿಸುತ್ತೇವೆ’ ಎಂದರು. ‘ಶಾಲೆಗಳು ನಿರ್ಮಾಣ ಆಗುವ ಮೊದಲೇ ಲೈನ್‌ಗಳು ಹಾದು ಹೋಗಿದ್ದವು. ಕೆಲವೆಡೆ ಕಾಂಪೌಂಡ್ ನಿರ್ಮಾಣವಾದ ಬಳಿಕ ಟಿಸಿಗಳು ಶಾಲಾ ಆವರಣದಲ್ಲಿ ಸೇರ್ಪಡೆಯಾದವು. ಹೊಸದಾಗಿ ಯಾವುದೇ ಶಾಲೆಗಳ ಮೇಲೆ ವಿದ್ಯುತ್ ತಂತಿ ಹಾದು ಹೋಗುವಂತೆ ಸಂಪರ್ಕ ಕಲ್ಪಿಸಿಲ್ಲ’ ಎಂದು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.