
ಯಾದಗಿರಿ: ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ವೈವಿದ್ಯಮಯವಾದ ಜನಪದ ಮತ್ತು ಜಾನಪದ ಕಲೆಗಳ ಅನಾವರಣದ ಎರಡು ದಿನಗಳ ರಾಜ್ಯಮಟ್ಟದ ಯುವಜನೋತ್ಸವ ಗುರುವಾರ ಸಂಪನ್ನಗೊಂಡಿತು. ಪ್ರಥಮ ಬಾರಿಗೆ ಉತ್ಸವದ ಆತಿಥ್ಯ ವಹಿಸಿಕೊಂಡ ಯಾದಗಿರಿಯು ಇತಿಹಾಸ ಪುಟಗಳಲ್ಲಿ ಅಚ್ಚಳಿಯದೇ ಉಳಿದರೂ ಜನಪದ ನೃತ್ಯದ ತೀರ್ಪಿನಲ್ಲಿ ಅನ್ಯ ಜಿಲ್ಲೆಗಳ ಸ್ಪರ್ಧಿಗಳಿಂದ ‘ಪಕ್ಷಪಾತದ’ ಕಪ್ಪು ಚುಕ್ಕೆ ಅಂಟಿಸಿಕೊಂಡಿತು.
ಜಿಲ್ಲಾ ಕ್ರೀಡಾಂಗಣದ ಪ್ರಧಾನ ವೇದಿಕೆ, ಕನ್ನಡ ಭವನ, ಕನ್ನಡ ಸಾಹಿತ್ಯ ಪರಿಷತ್ ಭವನ, ಸರ್ಕಾರಿ ಪದವಿ ಮಹಾವಿದ್ಯಾಲಯ ಹಾಗೂ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಏಳು ವಿಭಾಗಗಳಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಿದ ಜಿಲ್ಲಾಡಳಿತವು ಗೆಲುವಿನ ನಗೆ ಬೀರಿತು.
ವೈಯಕ್ತಿಯ ಸ್ಪರ್ಧೆಗಳಲ್ಲಿ ಪ್ರಥಮ ₹ 15 ಸಾವಿರ ಹಾಗೂ ಗುಂಪು ಸ್ಪರ್ಧೆಗಳಲ್ಲಿ ಪ್ರಥಮ ₹ 25 ಸಾವಿರ ನಗದು ಬಹುಮಾನ ಪಡೆದ ವಿಜೇತರು ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಯುವಜನೋತ್ಸವಕ್ಕೆ ಆಯ್ಕೆಯಾದರು. ದ್ವಿತೀಯ ಹಾಗೂ ತೃತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡವರು ಕ್ರಮವಾಗಿ ₹ 10 ಸಾವಿರ ಮತ್ತು ₹ 5 ಸಾವಿರ (ವೈಯಕ್ತಿಕ) ಹಾಗೂ ₹ 15 ಸಾವಿರ ಮತ್ತು ₹ 10 ಸಾವಿರ (ಗುಂಪು) ಪಡೆದರು.
ಬುಧವಾರದಿಂದ ಆರಂಭವಾದ ಯುವಜನೋತ್ಸವದಲ್ಲಿ ರಾಜ್ಯದ ನಾನಾ ಜಿಲ್ಲೆಗಳ 690ಕ್ಕೂ ಹೆಚ್ಚು ಸ್ಪರ್ಧಾರ್ಥಿಗಳು ಪಾಲ್ಗೊಂಡಿದ್ದರು. ತಮ್ಮಲ್ಲಿನ ಕಲೆಯನ್ನು ಪ್ರದರ್ಶಿಸಿದರು. ಪ್ರಧಾನ ವೇದಿಕೆಯಲ್ಲಿ 21 ಜಿಲ್ಲೆಗಳ ಜನಪದ ನೃತ್ಯ ಅನಾವರಣಗೊಂಡಿತು. ಡೊಳ್ಳು ಕುಣಿತ, ಮಹಿಷಾಸುರ ಮರ್ದಿನಿ ನೃತ್ಯ ರೂಪಕ, ರೈತರ ಸುಗ್ಗಿ ಹಾಡಿನಂತಹ ಹಲವು ನೃತ್ಯಗಳಿಗೆ ನೋಡುಗರು ಮೆಚ್ಚುಗೆಯ ಚಪ್ಪಾಳೆ ತಟ್ಟಿದರು.
ಬಾಗಲಕೋಟೆಯ ದೇವಿಯ ಮೆರವಣಿಗೆಯ ಕೀಲು ಕುದುರೆ, ಮರಗಾಲು ಕುಣಿತ, ಕರಗ ಕುಣಿತ, ಪಟ ಕುಣಿತ ಪ್ರದರ್ಶನ ಕಳೆಗಟ್ಟಿತು. ಕಲಬುರಗಿ ತಂಡದ ಮಹಿಷಾಸುರ ಮರ್ದಿನಿ ನೃತ್ಯದ ಅಂತ್ಯದಲ್ಲಿ ನೆರೆದಿದ್ದವರು ಎದ್ದುನಿಂತು ಚಪ್ಪಾಳೆ ತಟ್ಟಿದರು. ಮಹಿಷಾಸುರದ ಸಂಹಾರದ ವೇಳೆಯಲ್ಲಿ ತಮಟೆಯ ನಾದಕ್ಕೆ ಪ್ರೇಕ್ಷರ ಸಾಲಿನಲ್ಲಿ ಕುಳಿತ್ತಿದ್ದ ಮಹಿಳೆಯೊಬ್ಬರು ದೇವರು ಬಂದಂತೆ ವರ್ತನೆ ಮಾಡಿದರು. ವಾದನ ನಿಲ್ಲಿಸಿ ಕೆಲ ಹೊತ್ತಿನ ಬಳಿಕ ಮತ್ತೆ ಮುಂದುವರಿಸಲಾಯಿತು.
ರಾಕ್ ಕ್ಲೈಂಬಿಂಗ್, ಹಗ್ಗದ ಮಲ್ಲಕಂಬದ ಯೋಗಾಸನ, ಮಲ್ಲಕಂಬ ಪ್ರದರ್ಶನ ಹಾಗೂ ಸ್ಕೂಬಾ ಡೈವಿಂಗ್ ಸಾಹಸ ಜಲಕ್ರೀಡೆಯು ಯುವಕರನ್ನು ಪುಳಕಗೊಳಿಸಿದವು. ಕೃಷಿ, ತೋಟಗಾರಿಕೆ, ಯುವಜನ, ಜಿಲ್ಲಾ ಪಂಚಾಯಿತಿ, ಪಶುವೈದ್ಯಕೀಯ ಇಲಾಖೆಗಳ ಮಳಿಗೆಗಳು ತಮ್ಮ ಯೋಜನೆಗಳ ಬಗ್ಗೆ ಬಂದವರಲ್ಲಿ ಅರಿವು ಮೂಡಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.