ಯಾದಗಿರಿ: ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಯುವ ಮುಖಂಡ ಶರಣಗೌಡ ಕಂದಕೂರ ಅವರ ಅಭಿಮಾನಿ ಬಳಗದ 39 ಯುವಕರು ನೇತ್ರದಾನಕ್ಕೆ ವಾಗ್ದಾನ ಮಾಡುವ ಮೂಲಕ ಅವರ 39ನೇ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ.
ತಾಲ್ಲೂಕಿನ ಗೊಂದಡಗಿ ಗ್ರಾಮದಲ್ಲಿ ಕಲಬುರಗಿಯ ಎಚ್ಕೆಇ ಸೊಸೈಟಿಯ ನೇತ್ರ ಬ್ಯಾಂಕ್ನ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದ ಶರಣಗೌಡ ಕಂದಕೂರ ಅಭಿಮಾನಿಗಳ ಟೀಂ ಎಸ್ಎನ್ಕೆ ಕಾರ್ಯಕರ್ತರು ನೇತ್ರದಾನಕ್ಕೆ ಕೈಜೋಡಿಸಿದ್ದಾರೆ.
ನಟ ಪುನೀತ್ ರಾಜ್ಕುಮಾರ್ ಅವರ ನಿಧನದ ನಂತರ ಅವರಿಂದ ಸ್ಫೂರ್ತಿ ಪಡೆದ ಬಹುತೇಕರು ನೇತ್ರದಾನಕ್ಕೆ ವಾಗ್ದಾನ ಮಾಡಲು ಮುಂದಡಿ ಇಡುತ್ತಿದ್ದಾರೆ. ಶರಣಗೌಡ ಕಂದಕೂರ ಅವರು ಅಪ್ಪು ಅವರ ಅಪ್ಪಟ ಅಭಿಮಾನಿಯಾಗಿದ್ದು, ಹಲವು ಕಾರ್ಯಕ್ರಮಗಳಲ್ಲಿ ಅವರ ಸಾಮಾಜಿಕ ಸೇವಾ ಕಾರ್ಯವನ್ನು ಗುಣಗಾನ ಮಾಡಿದ್ದಲ್ಲದೆ ಪುನೀತ್ ಅವರ ಆದರ್ಶಗಳನ್ನು ಪಾಲಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದ್ದರು.
ಇದರಿಂದ ಪ್ರೇರಣೆಗೊಂಡ ಟೀಂ ಎಸ್ಎನ್ಕೆ ಕಾರ್ಯಕರ್ತರು ಸ್ವಯಂ ಪ್ರೇರಣೆಯಿಂದ ನೇತ್ರದಾನ ಪತ್ರಕ್ಕೆ ಸಹಿ ಹಾಕಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಗುರುಮಠಕಲ್ ಕ್ಷೇತ್ರದ ಗೊಂದೆಡಗಿ ಗ್ರಾಮದಲ್ಲಿ ಟೀಂ ಎಸ್ಎನ್ಕೆ ವತಿಯಿಂದ ಸೂರು ಇಲ್ಲದ ಭೀಮಣ್ಣ ಎಂಬುವವರಿಗೆ ಹೊಸ ಮನೆ ಕಟ್ಟಿಸಿಕೊಡಲಾಗಿದೆ. ಈ ಮನೆಯ ಗೃಹ ಪ್ರವೇಶ ಕಾರ್ಯವನ್ನು ಯುವ ನಾಯಕ ಶರಣಗೌಡ ಕಂದಕೂರ ಜನ್ಮದಿನದಂದು ಆಯೋಜಿಸಲಾಗಿತ್ತು.
***
ನನ್ನ ಜನ್ಮದಿನಕ್ಕೆ ಅಭಿಮಾನಿಗಳು ನೇತ್ರದಾನ ಮಾಡಿದ್ದು, ಶ್ರೇಷ್ಠ ಕಾರ್ಯವಾಗಿದೆ. ಮುಂದೆಯೂ ಇಂಥ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಾಗುವುದು.
-ಶರಣಗೌಡ ಕಂದಕೂರ, ಜೆಡಿಎಸ್ ರಾಜ್ಯ ಯುವ ಮುಖಂಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.