ADVERTISEMENT

ಇಯುನಿಧಿ ವಿದ್ಯಾರ್ಥಿವೇತನ: ಯುರೋಪ್‌ನಲ್ಲಿ ಅಧ್ಯಯನಕ್ಕೆ 400ವಿದ್ಯಾರ್ಥಿಗಳು ಆಯ್ಕೆ

ಪಿಟಿಐ
Published 1 ಸೆಪ್ಟೆಂಬರ್ 2018, 2:23 IST
Last Updated 1 ಸೆಪ್ಟೆಂಬರ್ 2018, 2:23 IST
   

ನವದೆಹಲಿ:ಇಯು–ನಿಧಿಯ ವಿದ್ಯಾರ್ಥಿವೇತನದ ಅಡಿ ಪ್ರಸಕ್ತ ವರ್ಷ ಯುರೋಪ್‌ನಲ್ಲಿ ಉನ್ನತ ಶಿಕ್ಷಣ ಅಧ್ಯಯನಕ್ಕೆ 400 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಮತ್ತು 73 ವಿದ್ಯಾರ್ಥಿಗಳು ಈ ಸೆಮಿಸ್ಟರ್‌ಗೆ ಸೇರ್ಪಡೆಯಾಗಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಈ ವಿದ್ಯಾರ್ಥಿಗಳಲ್ಲಿ ಕೆಲವರು ಆ.29ರಂದು ಭಾರತದಲ್ಲಿನ ಐರೋಪ್ಯ ಒಕ್ಕೂಟದ ರಾಯಭಾರಿ ಟೊಮಾಸ್ಝ್‌ ಕೊಜ್ಲೋಸ್ಕಿ ಅವರನ್ನು ಭೇಟಿಯಾಗಿದ್ದರು. ಈ ವೇಳೆ ವಿದ್ಯಾರ್ಥಿಗಳ ಅತ್ಯುತ್ತಮ ಫಲಿತಾಂಶಗಳಿಗಾಗಿ ಅವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದರು ಮತ್ತು ಯುರೋಪ್‌ನಲ್ಲಿನ ಅಧ್ಯಾಯನಕ್ಕೆ ಶುಭಕೋರಿದ್ದಾರೆ.

30 ವರ್ಷಗಳ ಹಿಂದೆ ಯುರೋಪಿಯನ್‌ ಒಕ್ಕೂಟದ ಹೊರಗಿನ ದೇಶಗಳಿಗೆ ‘ಇರಾಸ್ಮಸ್‌’ ಒಂದು ಸೇತುವೆಯಾಗಿ ನಿರ್ಮಾಣವಾಗಿದೆ. ಈ ಒಂದು ಕಾರ್ಯವು ಉತ್ಸಾಹ ಪೂರ್ವಕವಾಗಿ ಜನರ ಬಾಯಿಂದ ಬಾಯಿಗೆ ಹೆಚ್ಚು ಪ್ರಚಾರ ಪಡೆಯುವ ಮೂಲಕ, ಭಾರತೀಯ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನದ ಪ್ರಯೋಜನವನ್ನು ಹೆಚ್ಚಾಗಿ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ADVERTISEMENT

ಯುರೋಪ್‌ ಭಾರತೀಯ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ಅತ್ಯುತ್ತಮ ತಾಣವಾಗಿದೆ. ಯುರೋಪಿನ ವಿಶ್ವವಿದ್ಯಾಲಯಗಳು ಸುರಕ್ಷಿತ ಮತ್ತು ಸಾಂಸ್ಕೃತಿಕವಾಗಿ ಉತ್ತೇಜನ ನೀಡುವ ಪರಿಸರದಲ್ಲಿ ಸಂಶೋಧನೆ ಮತ್ತು ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಎರಾಸ್ಮಸ್‌ ವಿದ್ಯಾರ್ಥಿಗಳಿಗೆ ಎಂದೂ ಮರೆಯಲಾಗದ ಸುಸಂಸ್ಕೃತ ಅನುಭವ ಮತ್ತು ವೃತ್ತಿ ಜೀವನಕ್ಕೆ ಸಾಕಷ್ಟು ಅವಕಾಶಗಳನ್ನು ಒದಗಿಸಿಕೊಡುತ್ತದೆ ಎಂದು ಅವರು ಹೇಳಿದ್ದಾರೆ.

2014ರಿಂದ ಇಲ್ಲಿಯವರೆಗೆ 330 ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳು ಎರಾಸ್ಮಸ್‌ ಕಾರ್ಯಕ್ರಮದ ಭಾಗವಾಗಿವೆ ಮತ್ತು ಶಿಕ್ಷಣದ ಸಹಯೋಗವನ್ನು ಮತ್ತಷ್ಟು ವಿಸ್ತರಿಸಲು ಆಸಕ್ತಿ ಹೊಂದಿವೆ.

ಇಯು ನಿಧಿಯ ಎರಾಸ್ಮಸ್‌ ಕಾರ್ಯಕ್ರಮವು ಭಾರತೀಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಮಾತ್ರ ನೀಡುತ್ತಿಲ್ಲ, ಭಾರತೀಯ ವಿಶ್ವವಿದ್ಯಾಲಯಗಳ ಜತೆಗೆ ಸಹಭಾಗಿ ಮತ್ತು ವಿವಿಧ ಸಕ್ರಿಯ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಬೆಂಬಲಿಸುತ್ತದೆ.

11 ಹೊಸ ಭಾರತದ ವಿಶ್ವವಿದ್ಯಾಲಯಗಳು ಈಗ ಅಂತರರಾಷ್ಟ್ರೀಯ ಒಕ್ಕೂಟದಲ್ಲಿ ಭಾಗವಹಿಸುತ್ತಿವೆ. ‘ಎರಾಸ್ಮಸ್‌ ಮುಂಡ್ಸ್ ಜಾಯಿಂಟ್‌ ಮಾಸ್ಟರ್ಸ್‌ ಪ್ರೋಗ್ರಾಂ’ಗಳ ಅಡಿ ವಿಶ್ವದಾದ್ಯಂತ ವಿದ್ಯಾರ್ಥಿಗಳಿಗೆ ಸಮಗ್ರ ಶಿಕ್ಷಣ ಮತ್ತು ಹಲವು ಪದವಿಗಳ ಶಿಕ್ಷಣವನ್ನು ಒದಗಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.