ಮಂಡ್ಯ: ನಾಗಮಂಗಲ ತಾಲ್ಲೂಕು ದೇವಲಾಪುರದಲ್ಲಿ ಪ್ರಚಾರ ಮಾಡಿದ ನಟ ಯಶ್, ಸಂಸದ ಶಿವರಾಮೇಗೌಡರ ವಿರುದ್ಧ ವಾಗ್ದಾಳಿ ನಡೆಸಿದರು.
‘ಅವರಿಗೆ ಬುದ್ಧಿಭ್ರಮಣೆಯಾಗಿರಬಹುದು. ಮಹಿಳೆಯರ ಮೇಲೆ ಸ್ವಲ್ಪವೂ ಗೌರವ ಇಲ್ಲ. ಬಸ್ ಸೀಟಿಗೆ ಕರ್ಚಿಫ್ ಇಟ್ಟು ಸೀಟು ಕಾಯ್ದಿರಿಸುವಂತೆ ಅವರನ್ನು ಜೆಡಿಎಸ್ನಲ್ಲಿ ಬಳಸಿಕೊಳ್ಳಲಾಗಿದೆ. ಸುಮಲತಾ ಅವರನ್ನು ಮಾಯಾಂಗನೆ ಎಂದು ಹೇಳಿರುವುದು ಖಂಡನೀಯ. ಇದಕ್ಕೆ ಜನರು ತಕ್ಕ ಉತ್ತರ ನೀಡಬೇಕು’ ಎಂದು ಹೇಳಿದರು.
ನಟ ದರ್ಶನ್ ಶ್ರೀರಂಗಪಟ್ಟಣದ ಇಂಡುವಾಳು ಗ್ರಾಮದಲ್ಲಿ ಜೋಡೆತ್ತಿನ ಗಾಡಿ ಹೊಡೆದು ಪ್ರಚಾರ ಮಾಡಿದರು.
ಕಾಂಗ್ರೆಸ್– ಬಿಜೆಪಿ– ಜೆಡಿಎಸ್ ಧ್ವಜ ಸಂಗಮ
ಮಳವಳ್ಳಿ ತಾಲ್ಲೂಕು ಕೊನ್ನಾಪುರ ಗ್ರಾಮದಲ್ಲಿ ಸುಮಲತಾ ಪ್ರಚಾರದ ವೇಳೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರು ಪಕ್ಷಗಳ ಧ್ವಜಗಳು ರಾರಾಜಿಸಿದವು. ಮೂರು ಪಕ್ಷಗಳ ಧ್ವಜ ಹಿಡಿದ ಜನರು ಒಗ್ಗಟ್ಟಿನಿಂದ ಸ್ವಾಗತ ಕೋರಿದರು. ಆ ದೃಶ್ಯವನ್ನು ಕಂಡ ಸುಮಲತಾ ‘ಮಂಡ್ಯದಲ್ಲಿ ಇತಿಹಾಸ ಅಂದರೆ ಇದೇನೇ. ಇಡೀ ದೇಶದಲ್ಲಿ ಮೂರು ಪಕ್ಷದ ಬಾವುಟ ಒಂದೇ ಕಡೆ ಇರುವುದನ್ನು ನೋಡಿದ್ದೀರಾ. ಅಂಬರೀಷ್ಗೆ ಎಲ್ಲಾ ಪಕ್ಷಗಳಲ್ಲೂ ಸ್ನೇಹಿತರು ಇದ್ದರು ಎನ್ನುವುದಕ್ಕೆ ಇದೇ ಸಾಕ್ಷಿ’ ಎಂದರು.
ನಂತರ ಜೆಡಿಎಸ್ ಯುವನಾಯಕಿ ಡಾ.ಲಕ್ಷ್ಮಿ ಅಶ್ವಿನ್ಗೌಡ ತವರು ನಿಟ್ಟೂರು ಕೋಡಿಹಳ್ಳಿಯಲ್ಲಿ ಪ್ರಚಾರ ಮಾಡಿದರು. ‘ನಿಮ್ಮೂರಿನ ಹೆಣ್ಣು ಮಗಳಿಗೆ ಅನ್ಯಾಯವಾಗಿದೆ. ಐಆರ್ಎಸ್ ಅಧಿಕಾರಿಗೆ ಜೆಡಿಎಸ್ ಮೋಸ ಮಾಡಿದೆ. ಕೆಲಸ ಬಿಡಿಸಿ ಕರೆತಂದು ಮೋಸ ಮಾಡಿದ್ದಾರೆ’ ಎಂದು ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.