ADVERTISEMENT

ಕ್ಷೇತ್ರ ಮಹಾತ್ಮೆ: ಮಥುರಾ (ಉತ್ತರ ಪ್ರದೇಶ)

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2024, 23:30 IST
Last Updated 8 ಏಪ್ರಿಲ್ 2024, 23:30 IST
<div class="paragraphs"><p>ಮಥುರಾ ಲೋಕಸಭಾ ಕ್ಷೇತ್ರ</p></div>

ಮಥುರಾ ಲೋಕಸಭಾ ಕ್ಷೇತ್ರ

   

ಶ್ರೀಕೃಷ್ಣನ ಜನ್ಮಭೂಮಿ ಎಂದೇ ಪ್ರಸಿದ್ಧವಾಗಿರುವ ಉತ್ತರ ಪ್ರದೇಶದ ಮಥುರಾದ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯು ಮೂರನೇ ಬಾರಿಯೂ ನಟಿ ಹೇಮಾ ಮಾಲಿನಿ ಅವರನ್ನು ಕಣಕ್ಕಿಳಿಸಿದೆ. 2019ರ ಚುನಾವಣೆಯಲ್ಲಿ ಹೇಮಾ ಅವರು 2,90,023 ಮತಗಳ ಅಂತರದಿಂದ ರಾಷ್ಟ್ರೀಯ ಲೋಕದಳದ (ಆರ್‌ಎಲ್‌ಡಿ) ಅಭ್ಯರ್ಥಿ ಕುನ್ವರ್‌ ನರೇಂದ್ರ ಸಿಂಗ್‌ ಅವರನ್ನು ಪರಾಭವಗೊಳಿಸಿದ್ದರು. ಕ್ಷೇತ್ರಕ್ಕೆ ಹೊರಗಿನವರು ಎಂಬ ಹಣೆಪಟ್ಟಿ ಇದ್ದರೂ ಇಲ್ಲಿನ ಜನರು ಹೇಮಾ ಅವರ ಕೈಬಿಟ್ಟಿಲ್ಲ. ಇದೇ ವಿಶ್ವಾಸದಿಂದ ಅವರು ಮೂರನೇ ಬಾರಿಯೂ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಹೇಮಾ ಅವರ ವಿರುದ್ಧ ಸೆಣಸಲು ಕಾಂಗ್ರೆಸ್‌, ಈ ಬಾರಿ ಮುಕೇಶ್‌ ಧನ್‌ಗರ್‌ ಅವರನ್ನು ಅಖಾಡಕ್ಕಿಳಿಸಿದೆ. ಉತ್ತರ ಪ್ರದೇಶದಲ್ಲಿ ಸಮಾಜವಾದ ಪಕ್ಷವು ‘ಇಂಡಿಯಾ’ ಮೈತ್ರಿಕೂಟದ ಜೊತೆಗಿರುವುದರಿಂದ ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿಗೆ ಅನುಕೂಲಕರ ವಾತಾವರಣ ಇದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. 2009ರಲ್ಲಿ ಈ ಕ್ಷೇತ್ರದಲ್ಲಿ ಆರ್‌ಎಲ್‌ಡಿಯ ಜಯಂತ್‌ ಚೌಧರಿ ಗೆದ್ದಿದ್ದರು. ಅನಂತರ ಆ ಪಕ್ಷವು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಬಿಎಸ್‌ಪಿಯು ಈ ಬಾರಿ ಸುರೇಶ್‌ ಸಿಂಗ್‌ ಅವರನ್ನು ಅಭ್ಯರ್ಥಿಯಾಗಿಸಿದೆ. ಬಿಎಸ್‌ಪಿಯು ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರಿಂದ ಕಾಂಗ್ರೆಸ್‌ನ ಮತಗಳು ವಿಭಜನೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಬಾರಿ ಬಾಕ್ಸರ್‌ ವಿಜೇಂದರ್‌ ಸಿಂಗ್‌ ಅವರನ್ನು ಕಾಂಗ್ರೆಸ್‌ ಇಲ್ಲಿಂದ ಸ್ಪರ್ಧೆಗಿಳಿಸಲಿದೆ ಎನ್ನುವ ವದಂತಿ ದಟ್ಟವಾಗಿತ್ತು. ಆದರೆ ವಿಜೇಂದರ್‌ ಅವರು ಈಚೆಗೆ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT