ಮೈಸೂರು: ‘ಚುನಾವಣೆ ಫಲಿತಾಂಶ ಈಗಲೇ ಕಾಣುತ್ತಿದೆ. ನಾವು ಗೆದ್ದಿದ್ದೇವೆ; ಬಿಜೆಪಿಯವರು ಸೋತಿದ್ದಾರೆ. ಸೋಲಿನ ಹತಾಶೆಯಿಂದಲೇ ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಮಂಗಳವಾರ ಹೇಳಿದರು.
‘ಯಡಿಯೂರಪ್ಪ ಈವರೆಗೂ ಒಂದೇಒಂದು ನಿಜ ಹೇಳಿಲ್ಲ. ನನ್ನ ಮೇಲೆ 67 ಪ್ರಕರಣಗಳಿವೆ, ಎಸಿಬಿ ಬಳಸಿಕೊಂಡು ಅವುಗಳನ್ನೆಲ್ಲ ಮುಚ್ಚಿಹಾಕುತ್ತಿದ್ದೇನೆ ಎಂದೆಲ್ಲ ಹೇಳಿಕೊಂಡು ತಿರುಗುತ್ತಿದ್ದಾರೆ. ಇದು ಕೂಡು ಶುದ್ಧ ಸುಳ್ಳು. ಅವರ ಬಳಿ ಹಾವೇ ಇಲ್ಲ; ಸುಮ್ಮನೇ ಪುಂಗಿ ಊದುತ್ತಿದ್ದಾರೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.
‘ಏಪ್ರಿಲ್ನಲ್ಲಿ ಬಜೆಟ್ ಮಂಡಿಸಲಾಗುವುದು. ಇದಕ್ಕೂ ಚುನಾವಣೆಗೂ ಸಂಬಂಧವಿಲ್ಲ. ಆಗ ನೀತಿ ಸಂಹಿತೆ ಕೂಡ ಜಾರಿಯಲ್ಲಿ ಇರುವುದಿಲ್ಲ. ಇದ್ದರೂ ಮಂಡಿಸಬಹುದು. ಈ ಬಗ್ಗೆ ಮಾತನಾಡುವ ಮುನ್ನ ಯಡಿಯೂರಪ್ಪ ಅವರು ಸಂವಿಧಾನ ಓದಿಕೊಳ್ಳಬೇಕು. ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿ ಆಗಿದ್ದಾಗ ಇಂಥದ್ದೇ ಸಂದರ್ಭದಲ್ಲಿ ಬಜೆಟ್ ಮಂಡಿಸಿದ್ದರು. ಆಗ ಏಕೆ ಬಾಯಿಮುಚ್ಚಿಕೊಂಡಿದ್ದರು’ ಎಂದು ತಿರುಗೇಟು ನೀಡಿದರು.
‘ಮಹದಾಯಿ ವಿಚಾರವಾಗಿ ಬಾಯಿ ಬಿಡಬೇಕಾದವರು ಪ್ರಧಾನಿಯೇ ಹೊರತು; ರಾಹುಲ್ ಗಾಂಧಿಯಲ್ಲ. ಅಂತರರಾಜ್ಯ ಸಮಸ್ಯೆಗಳಿಗೆ ಯಾರು ಮಧ್ಯಸ್ಥಿಕೆ ವಹಿಸಬೇಕು ಎಂಬ ಜ್ಞಾನವೂ ಇವರಿಗಿಲ್ಲವಲ್ಲ’ ಎಂದು ಗೇಲಿ ಮಾಡಿದರು.
‘ಬಂದ್ ರಾಜಕೀಯ ನಮ್ಮದಲ್ಲ’
ಜ. 25ರಂದು ರಾಜ್ಯ ಬಂದ್, ಫೆ. 4ರಂದು ಬೆಂಗಳೂರು ಬಂದ್ಗೆ ಮಹದಾಯಿ ಹೋರಾಟಗಾರರು ಮುಂದಾಗಿದ್ದಾರೆ. ಇಂಥ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಜವಾಬ್ದಾರಿ ಎಂದು ಸಿದ್ದರಾಮಯ್ಯ ಹೇಳಿದರು.
‘ಜನರು ಬಸ್ಗಳಿಗೆ ಕಲ್ಲು ತೂರುವ ಸಾಧ್ಯತೆ ಇರುವುದರಿಂದ ಬಸ್ ಸಂಚಾರ ಬಂದ್ ಮಾಡಿದ್ದಾರೆ. ಯಡಿಯೂರಪ್ಪ ಹೇಳುವಷ್ಟು ಸಣ್ಣ ರಾಜಕಾರಣ ನಾವು ಮಾಡುವುದಿಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.