ಇಸ್ಲಾಮಾಬಾದ್: ಭಾರತದ ಲೋಕಸಭಾ ಚುನಾವಣೆ ಫಲಿತಾಂಶದ ಬಗ್ಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನೀಡಿದ ಹೇಳಿಕೆ ಸಾಂದರ್ಭಿಕ. ಅದನ್ನು ಆ ಸಂದರ್ಭದಿಂದ ಬೇರ್ಪಡಿಸಿ ಅರ್ಥೈಸಲಾಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಇಮ್ರಾನ್ ಅವರು ಹೊಂದಿರುವ ಆಕ್ಷೇಪಗಳು ಎಲ್ಲರಿಗೂ ತಿಳಿದಿರುವುದೇ ಆಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಮಹಮೂದ್ ಖುರೇಷಿ ಹೇಳಿದ್ದಾರೆ.
ಮೋದಿ ಅವರು ಮತ್ತೆ ಪ್ರಧಾನಿಯಾದರೆ, ಭಾರತದ ಜತೆಗೆ ಶಾಂತಿ ಮಾತುಕತೆ ಮತ್ತು ಕಾಶ್ಮೀರ ವಿವಾದ ಪರಿಹಾರದ ಸಾಧ್ಯತೆ ಹೆಚ್ಚು ಎಂದು ವಿದೇಶಿ ಪತ್ರಕರ್ತರ ಜತೆಗಿನ ಸಂವಾದದಲ್ಲಿ ಇಮ್ರಾನ್ ಇತ್ತೀಚೆಗೆ ಹೇಳಿದ್ದರು.
ಇಮ್ರಾನ್ ಅವರ ಹೇಳಿಕೆಗೆ ಭಾರತ ಮತ್ತು ಪಾಕಿಸ್ತಾನದ ವಿರೋಧ ಪಕ್ಷಗಳಿಂದ ಭಾರಿ ಟೀಕೆ ವ್ಯಕ್ತವಾಗಿತ್ತು.
ಭಾರತದ ಮಾಧ್ಯಮಗಳು ಎಲ್ಲವನ್ನೂ ಭಾವೋದ್ವೇಗಕರವಾಗಿಯೇ ವರದಿ ಮಾಡುತ್ತಿವೆ ಎಂದೂ ಖುರೇಷಿ ಅವರು ಆರೋಪಿಸಿದ್ದಾರೆ. ಭಾರತದ ಚುನಾವಣೆಯಲ್ಲಿ ಯಾರು ಗೆಲ್ಲಬೇಕು ಎಂಬುದನ್ನು ಜನರು ಮಾತ್ರ ನಿರ್ಧರಿಸಲು ಸಾಧ್ಯ. ಒಂದು ದೇಶವು ಇನ್ನೊಂದು ದೇಶದ ಜತೆಗೆ ಸಂಬಂಧ ಹೊಂದಿರುತ್ತದೆಯೇ ಹೊರತು ವ್ಯಕ್ತಿಯ ಜತೆಗೆ ಅಲ್ಲ ಎಂದೂ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.