ADVERTISEMENT

Lok Sabha Elections: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಪುತ್ರ ಕಣಕ್ಕೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2024, 13:21 IST
Last Updated 6 ಏಪ್ರಿಲ್ 2024, 13:21 IST
ಶ್ರೀಕಾಂತ್‌ ಶಿಂದೆ
ಶ್ರೀಕಾಂತ್‌ ಶಿಂದೆ   

ನಾಗಪುರ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರ ಮಗ, ಹಾಲಿ ಸಂಸದರೂ ಆಗಿರುವ ಶ್ರೀಕಾಂತ್‌ ಶಿಂದೆ ಅವರು ಕಲ್ಯಾಣ್‌ ಲೋಕಸಭಾ ಕ್ಷೇತ್ರದಲ್ಲಿ ‘ಮಹಾಯುತಿ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಯಲಿದ್ದಾರೆ.

ಕಲ್ಯಾಣ್‌ ಮತ್ತು ಠಾಣೆ ಕ್ಷೇತ್ರಗಳನ್ನು ತನಗೆ ಬಿಟ್ಟುಕೊಡಬೇಕು ಎಂದು ಬಿಜೆಪಿ ಪಟ್ಟುಹಿಡಿದಿತ್ತು. ಇದು ‘ಮಹಾಯುತಿ’ ಮೈತ್ರಿಯಲ್ಲಿ ಬಿಕ್ಕಟ್ಟಿಗೆ ಕಾರಣವಾಗಿತ್ತು. ಆದರೆ, ಈ ಕ್ಷೇತ್ರವನ್ನು ತನ್ನಲ್ಲೇ ಉಳಿಸಿಕೊಳ್ಳಲು ಶಿವಸೇನಾ ಯಶಸ್ವಿಯಾಗಿದೆ.

ವೃತ್ತಿಯಲ್ಲಿ ವೈದ್ಯರಾಗಿರುವ ಶ್ರೀಕಾಂತ್‌ ಅವರು ಶಿವಸೇನಾದ (ಯುಬಿಟಿ) ವೈಶಾಲಿ ದರೇಕರ್‌ ರಾಣೆ ಅವರನ್ನು ಎದುರಿಸಲಿದ್ದಾರೆ. ಶ್ರೀಕಾಂತ್‌, 2014 ಮತ್ತು 2019 ರಲ್ಲಿ ಇದೇ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು.

ADVERTISEMENT

ಶ್ರೀಕಾಂತ್‌ ಅವರನ್ನು ಕಣಕ್ಕಿಳಿಸುವುದಕ್ಕೆ ಕಲ್ಯಾಣ್‌ ಕ್ಷೇತ್ರದ ಬಿಜೆಪಿಯ ಕೆಲವು ನಾಯಕರು ಈಚೆಗೆ ವಿರೋಧ ವ್ಯಕ್ತಪಡಿಸಿದ್ದರು. ಮಹಾರಾಷ್ಟ್ರ ಉಪಮುಖ್ಯಮಂತ್ರಿ, ಬಿಜೆಪಿಯ ದೇವೇಂದ್ರ ಫಡಣವೀಸ್‌ ಅವರೇ ಶ್ರೀಕಾಂತ್‌ ಹೆಸರು ಘೋಷಿಸಿದರು. 

 ‘ಶ್ರೀಕಾಂತ್‌ ಶಿಂದೆ ಅವರು ಕಲ್ಯಾಣ್‌ ಕ್ಷೇತ್ರದ ಮಹಾಯುತಿ ಅಭ್ಯರ್ಥಿಯಾಗಿದ್ದಾರೆ. ನಾವೆಲ್ಲರೂ ಅವರ ಜತೆಗಿದ್ದೇವೆ. ಅವರನ್ನು ಕಣಕ್ಕಿಳಿಸುವುದಕ್ಕೆ ಯಾವುದೇ ವಿರೋಧ ಇಲ್ಲ. ಕಳೆದ ಬಾರಿಗಿಂತ ಹೆಚ್ಚಿನ ಅಂತರದಲ್ಲಿ ಗೆಲ್ಲಿಸುವುದು ನಮ್ಮ ಗುರಿ’ ಎಂದು ಫಡಣವೀಸ್‌ ಅವರು ನಾಗಪುರದಲ್ಲಿ ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.