
ಲಖನೌ : ಲೋಕಸಭಾ ಚುನಾವಣೆಯಲ್ಲಿ ಒಂದೂ ಸ್ಥಾನ ಗೆಲ್ಲಲಾಗದ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಅಧ್ಯಕ್ಷೆ ಮಾಯಾವತಿ ಅವರು, ಮುಸ್ಲಿಂ ಸಮುದಾಯದವರಿಗೆ ತಮ್ಮ ಪಕ್ಷವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಆಗಿಲ್ಲ ಎಂದು ಹೇಳಿದರು.
ಫಲಿತಾಂಶದ ಕುರಿತು ಬುಧವಾರ ಮಾತನಾಡಿದ ಅವರು, ‘ಇನ್ನು ಮುಂದೆ ಮುಸ್ಲಿಮರನ್ನು ಅಭ್ಯರ್ಥಿಗಳಾಗಿ ಕಣಕ್ಕೆ ಇಳಿಸುವ ಮುನ್ನ ಸಾಕಷ್ಟು ಆಲೋಚಿಸಬೇಕಾಗುತ್ತದೆ’ ಎಂದೂ ಎಚ್ಚರಿಸಿದರು.
ಲೋಕಸಭಾ ಚುನಾವಣೆಯಲ್ಲಿ ಬಿಎಸ್ಪಿ ಉಳಿದ ಪಕ್ಷಗಳಿಗಿಂತ ಅತ್ಯಧಿಕವಾದ 35 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ‘ಮುಸ್ಲಿಮರಿಗೆ ಉತ್ತಮ ಪ್ರಾತಿನಿಧ್ಯ ನೀಡಿದ ಹೊರತಾಗಿಯೂ ಆ ಸಮುದಾಯದ ಮತದಾರರು ಬಿಎಸ್ಪಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ದಲಿತರು, ಅದರಲ್ಲೂ ಜಾಟವ ಸಮುದಾಯದವರು ಉತ್ತಮ ರೀತಿಯಲ್ಲಿ ಸ್ಪಂದಿಸಿದರು. ಅವರಿಗೆ ಕೃತಜ್ಞಳಾಗಿದ್ದೇನೆ’ ಎಂದರು.
ಬಿಸಿಲು ಹೆಚ್ಚಾಗಿರುವ ಸಂದರ್ಭದಲ್ಲಿ ಹಾಗೂ ಏಳು ಹಂತಗಳಲ್ಲಿ ಮತದಾನ ನಡೆಸುವ ಕ್ರಮ ಸರಿಯಲ್ಲ ಎಂದು ಅಭಿಪ್ರಾಯಪಟ್ಟ ಅವರು, ಮೂರ್ನಾಲ್ಕು ಹಂತಗಳಲ್ಲೇ ಮತದಾನ ನಡೆಯಲು ಅವಕಾಶ ನೀಡಬೇಕು ಎಂದೂ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.