ಶಿರಸಿ: ನಗರದಾದ್ಯಂತ ಡೊಳ್ಳು, ತಮಟೆ ಸದ್ದಿನ ಅಬ್ಬರದ ನಡುವೆ ಅಭಿಮಾನಿಗಳ ನೃತ್ಯ, ಮೆರವಣಿಗೆ ಮಧ್ಯೆ ಹೂ ಮಳೆಯ ಸ್ವಾಗತದ ನಡುವೆ 7 ನೇ ಬಾರಿ ವಿಧಾನಸಭೆ ಚುನಾವಣೆಗೆ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ನಾಮಪತ್ರ ಸಲ್ಲಿಸಿದರು.
ಮಂಗಳವಾರ ಶಕ್ತಿ ದೇವತೆ ಮಾರಿಕಾಂಬಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ ಸಾವಿರಾರು ಅಭಿಮಾನಿಗಳ ಜೊತೆಗೂಡಿ ನಗರದಲ್ಲಿ ಅದ್ಧೂರಿ ಮೆರವಣಿಗೆ ನಡೆಸಿದರು. ಡೊಳ್ಳು, ತಮಟೆಗಳನ್ನು ಬಡಿಯುತ್ತ ಬಿಜೆಪಿ ಕಾರ್ಯಕರ್ತರು ಮೆರವಣಿಗೆಯುದ್ದಕ್ಕೂ ಸಾಗಿದರು. ರಾಘವೇಂದ್ರ ಸರ್ಕಲ್ ಬಳಿ ಅಭಿಮಾನಿಗಳು ಕಾಗೇರಿ ಅವರಿಗೆ ಹೂವಿನ ಮಳೆ ಸುರಿಸಿದರು.
ಈ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕಾಗೇರಿ, ಈ ಬಾರಿ ಬಿಜೆಪಿ ಗೆಲ್ಲುವುದು ಸೂರ್ಯ, ಚಂದ್ರರಿರುವಷ್ಟೇ ನಿಶ್ಚಿತ ಎಂದರು. ಕ್ಷೇತ್ರ ಹಿಂದೆಂದಿಗಿಂತ ಅಭಿವೃದ್ಧಿ ಕಾಣುತ್ತಿರುವಾಗ ಕೆಲವರು ಅಭಿವೃದ್ಧಿ ಆಗಿಲ್ಲ ಎನ್ನುತ್ತ ಜನರ ದಿಕ್ಕುತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ. ಅಂಥ ವ್ಯಕ್ತಿಗಳನ್ನು ಮಾನಸಿಕ ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡುತ್ತೇನೆ ಎಂದ ಅವರು, ಈ ಬಾರಿ ಜಿಲ್ಲೆಯಲ್ಲಿ ಬಿಜೆಪಿಯವರು ದಾಖಲೆ ಮತಗಳಿಂದ ಗೆಲ್ಲುತ್ತೇವೆ. ಚುನಾವಣೆಯನ್ನು ಬಿಜೆಪಿಗರು ಹಬ್ಬದಂತೆ ಆಚರಿಸುತ್ತಾರೆ ಎಂದರು.
ಕಾರ್ಯಕರ್ತರು ಎರಡನೇ ಹಂತದಲ್ಲಿ ಮನೆಮನೆ ಸಂಪರ್ಕಿಸುವ ಮೂಲಕ ಮತದಾರರ ಮನ ಗೆಲ್ಲಬೇಕು. ಬೂತ್ ಗೆಲ್ಲಿಸುವ ಮೂಲಕ ಬಿಜೆಪಿ ಗೆಲ್ಲಿಸಬೇಕು ಎಂದರು.
ಇಷ್ಟು ದಿನ ಜೆಡಿಎಸ್ ದಲ್ಲಿದ್ದ ಶಶಿಭೂಷಣ ಹೆಗಡೆ ಈಗ ಜೊತೆಯಾಗಿದ್ದಾರೆ. ಯಾರು ಎಷ್ಟೇ ವಿರೋಧ ಕಾರ್ಯ ಮಾಡಿದರೂ ಬಿಜೆಪಿ ನಾಗಾಲೋಟ ಮುಂದುವರಿಯಲಿದೆ ಎಂದರು.
ನಂತರ ಚುನಾವಣಾಧಿಕಾರಿ ದೇವರಾಜ್ ಆರ್. ಅವರಿಗೆ ನಾಮಪತ್ರ ಸಲ್ಲಿಸಿದರು. ಮೆರವಣಿಗೆಯುದ್ದಕ್ಕೂ ಉದ್ಯಮಿ ಶ್ರೀನಿವಾಸ ಹೆಬ್ಬಾರ್, ಶಶಿಭೂಷಣ ಹೆಗಡೆ, ಗಣಪತಿ ನಾಯ್ಕ, ಮಾರುತಿ ನಾಯ್ಕ ಇನ್ನಿತರರು ಸಾಥ್ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.