ಡಾ. ಬಿ.ಆರ್. ಅಂಬೇಡ್ಕರ್
ಹುಬ್ಬಳ್ಳಿ: ಇಲ್ಲಿನ ಅರವಿಂದ ನಗರದ ಬಿಜೆಪಿ ಕಚೇರಿಯ ಪತ್ರಿಕಾಗೋಷ್ಠಿ ಸಭಾಂಗಣದಲ್ಲಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಮಹರ್ಷಿ ವಾಲ್ಮೀಕಿ ಭಾವಚಿತ್ರಗಳನ್ನು ಶುಕ್ರವಾರ ಪಕ್ಷದ ಕಾರ್ಯಕರ್ತರೊಬ್ಬರು ಹೊರಗಡೆ ಒಯ್ದ ದೃಶ್ಯ ವೈರಲ್ ಆದ ಕಾರಣ ಚರ್ಚೆಗೆ ಗ್ರಾಸವಾಯಿತು.
ಪಕ್ಷದ ರಾಜ್ಯ ಮಹಿಳಾ ಮೋರ್ಚಾದ ಅಧ್ಯಕ್ಷೆ ಮಂಜುಳಾ ಅವರ ಪತ್ರಿಕಾಗೋಷ್ಠಿ ನಿಗದಿಯಾಗಿತ್ತು. ವೇದಿಕೆಯ ಬದಿ ಮೇಜಿನ ಮೇಲೆ ಬಿಜೆಪಿ ಸಂಸ್ಥಾಪಕರಾದ ಶ್ಯಾಮ ಪ್ರಸಾದ ಮುಖರ್ಜಿ, ದೀನದಯಾಳ ಉಪಾಧ್ಯಾಯ, ಭಾರತಮಾತೆ, ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಮಹರ್ಷಿ ವಾಲ್ಮೀಕಿ ಭಾವಚಿತ್ರಗಳಿದ್ದವು. ‘ಇವರೆಲ್ಲರ ಜೊತೆಗೆ ಬಸವಣ್ಣನವರ ಭಾವಚಿತ್ರ ಏಕಿಲ್ಲ’ ಎಂದು ಕೆಲವರು ಆಕ್ಷೇಪಿಸಿದಾಗ, ಕಾರ್ಯಕರ್ತರೊಬ್ಬರು ಅಂಬೇಡ್ಕರ್ ಮತ್ತು ವಾಲ್ಮೀಕಿ ಭಾವಚಿತ್ರಗಳನ್ನು ಹೊರಒಯ್ದರು.
ಇದರ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಿಜೆಪಿ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ‘ಹುಬ್ಬಳ್ಳಿಯ ಗೋಕುಲ ಗಾರ್ಡನ್ನಲ್ಲಿ ಶನಿವಾರ ಬಿಜೆಪಿ ಎಸ್ಟಿ ಸಮಾವೇಶ ಇದೆ. ಈ ಕಾರಣ ಪಕ್ಷದ ಕಚೇರಿಯಲ್ಲಿ ಪೂರ್ವಭಾವಿ ಸಭೆ ಇತ್ತು. ಹೀಗಾಗಿ ಅವರಿಬ್ಬರು ಮಹನೀಯರ ಚಿತ್ರಗಳನ್ನು ಇಲ್ಲಿ ಇಡಲಾಗಿತ್ತೆ ಹೊರತು ಬೇರೆ ದುರುದ್ದೇಶವಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.