ADVERTISEMENT

ಜೆಡಿಎಸ್‌ನಿಂದ ಪ್ರಜ್ವಲ್‌, ಕುಮಾರಸ್ವಾಮಿ, ಮಲ್ಲೇಶಬಾಬು ಸ್ಪರ್ಧೆ: ದೇವೇಗೌಡ

ಹಾಸನ, ಮಂಡ್ಯ, ಕೋಲಾರ ಸ್ಪರ್ಧಿಗಳ ಆಯ್ಕೆ: ದೇವೇಗೌಡ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2024, 14:20 IST
Last Updated 26 ಮಾರ್ಚ್ 2024, 14:20 IST
ದೇವೇಗೌಡ
ದೇವೇಗೌಡ   

ಹಾಸನ: ‘ಲೋಕಸಭೆ ಚುನಾವಣೆಯಲ್ಲಿ ಹಾಸನದಿಂದ ಪ್ರಜ್ವಲ್ ರೇವಣ್ಣ, ಮಂಡ್ಯದಿಂದ ಎಚ್.ಡಿ.ಕುಮಾರಸ್ವಾಮಿ ಹಾಗೂ ಕೋಲಾರದಿಂದ ಮಲ್ಲೇಶ ಬಾಬು ಜೆಡಿಎಸ್‌ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲಿದ್ದಾರೆ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ತಿಳಿಸಿದರು.

ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಜೆಡಿಎಸ್‌ ಎಸ್‌ಸಿ, ಎಸ್‌ಟಿ ಘಟಕದ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ‘ನನ್ನ ಕೊನೆಗಾಲದಲ್ಲಿ ಬಂದು ಪ್ರಚಾರ ಮಾಡುತ್ತಿದ್ದೇನೆ. ಅಪಪ್ರಚಾರಕ್ಕೆ ಮಣಿಯದೇ ಪ್ರಜ್ವಲ್ ಅವರನ್ನು ಗೆಲ್ಲಿಸಿ ಕೊಡಬೇಕು ಎಂದು ಕೈಮುಗಿದು ಮನವಿ ಮಾಡುತ್ತೇನೆ’ ಎಂದರು.

‘ಬೆಂಗಳೂರಿನಲ್ಲಿ ಶೋಭಾ ಕರಂದ್ಲಾಜೆ, ತುಮಕೂರಿನಲ್ಲಿ ವಿ.ಸೋಮಣ್ಣ, ಚಿಕ್ಕಮಗಳೂರಿನಲ್ಲಿ ಕೋಟ ಶ್ರೀನಿವಾಸ್ ಪೂಜಾರಿ, ಶಿವಮೊಗ್ಗದಲ್ಲಿ ಬಿ.ಎಸ್‌.ಯಡಿಯೂರಪ್ಪ ಮಗ ಬಿ.ವೈ.ರಾಘವೇಂದ್ರ ಹೀಗೆ... ಎಲ್ಲೆಲ್ಲಿ ನಾನು ಹೋಗಬೇಕು ಎನ್ನುತ್ತಾರೋ ಅಲ್ಲಿಗೆ ಹೋಗುತ್ತೇನೆ. 28 ಕ್ಷೇತ್ರಗಳಲ್ಲೂ ಹೋರಾಟ ಮಾಡುತ್ತೇನೆ’ ಎಂದರು.

ADVERTISEMENT

‘ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಬೇಕು. ಅವರು ಬಿಟ್ಟರೆ ಬೇರೆ ನಾಯಕರು ಯಾರಿದ್ದಾರೆ? ಭಾರತದ ಆರ್ಥಿಕ ಶಕ್ತಿ ಐದರಿಂದ ಮೂರನೇ ಸ್ಥಾನಕ್ಕೆ ಬಂದಿದೆ. ಮಲ್ಲಿಕಾರ್ಜುನ ಖರ್ಗೆ ಹೆಸರು ಹೇಳಿದರೆ, ಸಿದ್ದರಾಮಯ್ಯ ವಿರೋಧಿಸುತ್ತಾರೆ. ಮಮತಾ ಬ್ಯಾನರ್ಜಿಯವರನ್ನೂ ವಿರೋಧಿಸುತ್ತಾರೆ’ ಎಂದು ಟೀಕಿಸಿದರು.

‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹೋಗಿ, ಬಿಜೆಪಿ–ಜೆಡಿಎಸ್ ಸರ್ಕಾರ ಬರಬೇಕು. ಮುಖ್ಯಮಂತ್ರಿ ಯಾರಾದರೂ ಆಗಲಿ, ಅದು ಆಮೇಲೆ. ಅವರಿಂದ ನಿಮ್ಮ ಕೆಲಸ ಮಾಡಿಸುತ್ತೇನೆ. ಅದು ನನ್ನ ಬದ್ಧತೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.