ADVERTISEMENT

ಮಹಿಳಾ ಮೀಸಲಾತಿ ಕಾನೂನು ಜಾರಿಗೆ ಬರಲೇಬೇಕು: ಪುಷ್ಪಾ ಅಮರನಾಥ್‌

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2023, 6:48 IST
Last Updated 7 ಏಪ್ರಿಲ್ 2023, 6:48 IST
ಪುಷ್ಪಾ ಅಮರನಾಥ್‌
ಪುಷ್ಪಾ ಅಮರನಾಥ್‌   

ಮಹಿಳೆಯರು ರಾಜಕೀಯವಾಗಿ ಸಬಲರಾಗಲು, ‌ರಾಜಕೀಯ ಕ್ಷೇತ್ರದಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗುವಂತಾಗಲು ಮಹಿಳಾ ಮೀಸಲಾತಿ ಕಾನೂನು ಜಾರಿಗೆ ಬರಲೇಬೇಕು. ಇಲ್ಲದೇ ಇದ್ದರೆ, ಲೋಕಸಭೆ, ವಿಧಾನಸಭೆ, ವಿಧಾನ ಪರಿಷತ್‌ನಲ್ಲಿ ಮಹಿಳೆಯರಿಗೆ ಸ್ಥಾನಮಾನ, ರಾಜಕೀಯ ಶಕ್ತಿ ಸಿಗಲು ಸಾಧ್ಯವೇ ಇಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ ಶೇ 50ರಷ್ಟು ಮಹಿಳಾ ಮೀಸಲಾತಿ ಇರುವುದರಿಂದಲೇ ನನ್ನಂಥವರು ಕೆಳಹಂತದಿಂದ ಈಗಿನ ಹಂತದವರೆಗೆ ಬೆಳೆದು ಬರಲು ಸಾಧ್ಯವಾಗಿದೆ. ಮೀಸಲಾತಿ ಮೂಲಕ ಅವಕಾಶ ಕಲ್ಪಿಸಿದರೆ ಪುರುಷರಿಗೆ ಸಮಾನವಾಗಿ ಮುಂದೆ ಬರಬಹುದು.

ಎಲ್ಲರಿಗೂ ಸಮಾನ ಅವಕಾಶವನ್ನು ಸಂವಿಧಾನ ನೀಡಿದೆ. ಅಂಬೇಡ್ಕರ್‌ ಕೂಡಾ ಅದನ್ನು ಪ್ರತಿಪಾದಿಸಿದ್ದಾರೆ. ಆದರೆ, ಸ್ವಾತಂತ್ರ್ಯ ಸಿಕ್ಕಿದ 75 ವರ್ಷಗಳ ಬಳಿಕವೂ ರಾಜಕೀಯವೂ ಸೇರಿದಂತೆ ಕೆಲವು ವಿಚಾರಗಳಲ್ಲಿ ಈ ಸಮಾನತೆ ಕಾಣಲು ಸಾಧ್ಯ ಆಗಿಲ್ಲ. ಕೇವಲ ಬಾಯಿ ಮಾತಿನಿಂದ ಸಮಾನತೆ ಸಿಗಲು ಸಾಧ್ಯವೂ ಇಲ್ಲ. ಹೀಗಾಗಿ, ಕಾನೂನು ಜಾರಿ ಆಗಲೇ ಬೇಕು. 2008ರಲ್ಲಿಯೇ ನಮ್ಮ ಪಕ್ಷದ ನಾಯಕಿ ಸೋನಿಯಾ ಗಾಂಧಿಯವರು ಮಹಿಳಾ ಮೀಸಲಾತಿ ಕಾನೂನು ರೂಪಿಸಲು ಮುಂದಾಗಿದ್ದರು. 2019ರಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಿ ಮಹಿಳಾ ಮೀಸಲಾತಿ ಕಾನೂನು ತರುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಆದರೆ, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸಾಕಷ್ಟು ಬಹಮತ ಇದ್ದರೂ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ಮಸೂದೆ ಅಂಗೀಕಾರಕ್ಕೆ ಮುಂದಾಗಿಲ್ಲ. ಹೀಗಾಗಿ, ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಶೇ 50ರಷ್ಟು ಪ್ರಮಾಣದಲ್ಲಿ ಮಹಿಳಾ ಮೀಸಲಾತಿ‌ ಬೇಡಿಕೆ ಇನ್ನೂ ಈಡೇರಿಲ್ಲ.

-ಪುಷ್ಪಾ ಅಮರನಾಥ್‌, ಅಧ್ಯಕ್ಷೆ, ಕೆಪಿಸಿಸಿ ಮಹಿಳಾ ಘಟಕ

ADVERTISEMENT

**

ಮಹಿಳಾ ಮೀಸಲಾತಿಯಿಂದ ನ್ಯಾಯ ಸಾಧ್ಯ
ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಶೇ 33 ರಷ್ಟು ಮಹಿಳಾ ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಲೋಕಸಭೆ ಅಂಗೀಕರಿಸಬೇಕು. ಆಗ ಮಾತ್ರ ಮಹಿಳೆಯರಿಗೆ ನ್ಯಾಯ ಸಿಗಲು ಸಾಧ್ಯ. ಇಲ್ಲವಾದರೆ ವಿಧಾನಸಭೆ ಅಥವಾ ಲೋಕಸಭಾ ಚುನಾವಣೆಗಳಲ್ಲಿ ಸುಲಭವಾಗಿ ಅವಕಾಶಗಳು ಸಿಗುವುದು ದೂರದ ಮಾತು. ಟಿಕೆಟ್‌ಗಾಗಿ ಎಷ್ಟೇ ಹೋರಾಟ ಮಾಡಿದರೂ, ಯಾವುದೇ ಪಕ್ಷವಿರಲಿ ಗೆಲುವಿನ ಮಾನದಂಡವನ್ನು ಮಾತ್ರ ಪರಿಗಣಿಸಲಾಗುತ್ತದೆ. ಇದರಿಂದ ಮಹಿಳೆಯರಿಗೆ ನ್ಯಾಯ ಸಿಗುವುದಿಲ್ಲ.

ಎದುರಾಳಿ ಪಕ್ಷದಲ್ಲಿ ಪ್ರಬಲ ಅಭ್ಯರ್ಥಿ ಸ್ಪರ್ಧಿಸಿದರೆ, ಮಹಿಳೆಯರಿಗೆ ಅವಕಾಶ ಸಿಗುವುದೇ ಕಷ್ಟ. ಮಹಿಳೆಯರು ಎದುರಿಸುವುದು ಕಷ್ಟ ಎಂಬ ಮನೋಭಾವವಿರುತ್ತದೆ. ಮಹಿಳಾ ಮೀಸಲಾತಿ ಜಾರಿ ಆದರೆ, ಅವಕಾಶ ಹೆಚ್ಚಾಗುತ್ತದೆ. ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರ ಸಬಲೀಕರಣಕ್ಕೆ ನಮ್ಮ ಪಕ್ಷ ಆದ್ಯತೆ ನೀಡಿದೆ. ಇದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ಇದರ ಜತೆಗೆ ಸಮಾಜವೂ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ಕಲ್ಪಿಸುವ ಬಗ್ಗೆ ಯೋಚಿಸಬೇಕು. ಹಿಂದಿಗಿಂತಲೂ ಈಗ ಸಾಕಷ್ಟು ಸುಧಾರಣೆಯಾಗಿದೆ.
-
ಗೀತಾ ವಿವೇಕಾನಂದ, ಅಧ್ಯಕ್ಷೆ, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ

**

ಪುರುಷರ ಮನಸ್ಥಿತಿಯೂ ಬದಲಾಗಬೇಕು
ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮಿಸಲಾತಿ ಇರುವುದರಿಂದ ಹೆಚ್ಚಿನ ಆದ್ಯತೆ ಸಿಗುತ್ತಿದೆ. ಆದರೆ, ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ. ಲೋಕಸಭೆ ಮತ್ತು ವಿಧಾನಸಭೆಗೆ ಶೇ 33 ರಷ್ಟು ಮಹಿಳಾ ಮೀಸಲಾತಿ ಜಾರಿ ಮಾಡಿದರೆ ಶೇ 100 ರಷ್ಟು ನ್ಯಾಯ ಸಿಗುತ್ತದೆ. ಇದರ ಜತೆಗೆ ಪುರುಷರ ಮನಸ್ಥಿತಿಯೂ ಬದಲಾಗಬೇಕು. ಸಮಾನತೆ ಮತ್ತು ಗೌರವದ ಬಗ್ಗೆ ವೇದಿಕೆಗಳಲ್ಲಿ ಭಾಷಣ ಮಾಡುತ್ತಾರೆ. ಚುನಾವಣಾ ಟಿಕೆಟ್‌ ಮತ್ತು ಅಧಿಕಾರದ ಪ್ರಶ್ನೆ ಬಂದಾಗ ಮಹಿಳೆಯರನ್ನು ಪರಿಗಣಿಸುವುದಿಲ್ಲ. ಈ ಮನಸ್ಥಿತಿ ಬದಲಿಸಿಕೊಂಡರೆ ಮಹಿಳೆಯರಿಗೆ ಅವಕಾಶಗಳು ಸಿಗುತ್ತವೆ. ಮೀಸಲಾತಿ ಜೊತೆಗೆ ಪ್ರತಿಭಾವಂತ ಮಹಿಳೆಯರಿಗೆ ಅವಕಾಶ ಕೊಡುವ ಮನಸ್ಥಿತಿ ನಾಯಕರುಗಳಿಗೂ ಇರಬೇಕು.
-ಕುಶಲಸ್ವಾಮಿ, ಅಧ್ಯಕ್ಷೆ, ಎಎಪಿ, ರಾಜ್ಯ ಮಹಿಳಾ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.