ADVERTISEMENT

ಷರತ್ತು ಒಪ್ಪಿಕೊಳ್ಳುವ ಯಾವುದೇ ಪಕ್ಷದೊಂದಿಗೆ ಮೈತ್ರಿಗೆ ಸಿದ್ಧ: ಎಚ್‌.ಡಿ ಕುಮಾರಸ್ವಾಮಿ

ರಶ್ಮಿ ಬೇಲೂರು
Published 12 ಮೇ 2023, 4:24 IST
Last Updated 12 ಮೇ 2023, 4:24 IST
ಎಚ್‌.ಡಿ ಕುಮಾರಸ್ವಾಮಿ
ಎಚ್‌.ಡಿ ಕುಮಾರಸ್ವಾಮಿ    

ಬೆಂಗಳೂರು: ಕೆಲವು ಮತಗಟ್ಟೆ ಸಮೀಕ್ಷೆಗಳು ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಬಹುದು ಎಂದು ಅಂದಾಜಿಸಿದ ಬೆನ್ನಲ್ಲೇ, ತಮ್ಮ ಷರತ್ತನ್ನು ಒಪ್ಪಿಕೊಳ್ಳುವ ಯಾವುದೇ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಜೆಡಿಎಸ್‌ ನಾಯಕ ಎಚ್‌.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಈ ಬಾರಿ ಯಾವುದೇ ಪಕ್ಷಕ್ಕೂ ಬಹುಮತ ಬರುವುದಿಲ್ಲ ಎಂದು 10 ಸಂಸ್ಥೆಗಳು ಪ್ರಕಟಿಸಿರುವ ಮತದಾನೋತ್ತರ ಸಮೀಕ್ಷೆಯಲ್ಲಿ ಹೇಳಿವೆ.

ಸಿಂಗಾಪುರಕ್ಕೆ ತೆರಳುವುದಕ್ಕೂ ಮುನ್ನ ಮಾತನಾಡಿದ ಅವರು, ‘50 ಸೀಟುಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸ ಇದೆ. ಈ ಬಾರಿ ನಮ್ಮ ಷರತ್ತುಗಳನ್ನು ಒಪ್ಪಿಕೊಳ್ಳುವ ಪಕ್ಷದ ಜತೆ ಹೋಗುತ್ತೇವೆ‘ ಎಂದು ಹೇಳಿದರು.

ADVERTISEMENT

ಕುಮಾರಸ್ವಾಮಿ ಈಗಾಗಲೇ 2006ರಲ್ಲಿ ಬಿಜೆಪಿ ಹಾಗೂ 2018ರಲ್ಲಿ ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿಯಾಗಿದ್ದರು. ಹೀಗಾಗಿ ಷರತ್ತುಗಳನ್ನು ಒಪ್ಪಿಕೊಂಡರೆ ಮಾತ್ರ ಮೈತ್ರಿ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.

50 ಸೀಟುಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸ ಇದೆ. ಈ ಬಾರಿ ನಮ್ಮ ಷರತ್ತುಗಳನ್ನು ಒಪ್ಪಿಕೊಳ್ಳುವ ಪಕ್ಷದ ಜತೆ ಹೋಗುತ್ತೇವೆ
– ಎಚ್‌.ಡಿ ಕುಮಾರಸ್ವಾಮಿ

2018ರಲ್ಲಿ ಕಾಂಗ್ರೆಸ್‌ ಜತೆ ಮೈತ್ರಿ ಸರ್ಕಾರ ರಚನೆ ಮಾಡಿದಾಗ ಇದ್ದ ಹಾಗೆ ಸಮನ್ವಯ ಸಮಿತಿ ಈ ಬಾರಿ ಇರಬಾರದು. ಜೆಡಿಎಸ್‌ನ ಗಟ್ಟಿ ನೆಲೆಗಳಾದ ಮಂಡ್ಯ ಹಾಗೂ ಹಾಸನ ಜಿಲ್ಲೆಗಳಿಂದ ದೂರ ಸರಿಯಬೇಕು. ಚರ್ಚೆ ಮಾಡದೆ ಯಾವುದೇ ವೈಚಾರಿಕ ನಿರ್ಧಾರಗಳನ್ನು ತೆಗೆದುಕೊಳ್ಳುವಂತಿಲ್ಲ ಎಂದು ತಮ್ಮ ಷರತ್ತುಗಳ ಪಟ್ಟಿಯನ್ನು ಕುಮಾರಸ್ವಾಮಿ ಮುಂದಿಟ್ಟಿದ್ದಾರೆ.

ಸರ್ಕಾರ ನಡೆಸಲು ಮುಖ್ಯಮಂತ್ರಿಗೆ ಮುಕ್ತ ಅವಕಾಶ ನೀಡಬೇಕು. ನೀರಾವರಿ, ಇಂಧನ ಹಾಗೂ ಲೋಕೋಪಯೋಗಿ ಖಾತೆಗಳು ತಮಗೆ ನೀಡಬೇಕು ಎನ್ನುವುದು ಕುಮಾರಸ್ವಾಮಿಯವರ ಷರತ್ತು.

ಜೆಡಿಎಸ್‌ ಮೂಲಗಳ ಪ್ರಕಾರ, ವರಿಷ್ಠರಾದ ದೇವೇಗೌಡ ಅವರಿಗೆ ಬಿಜೆಪಿ ಹಾಗೂ ಕಾಂಗ್ರೆಸ್‌, ಎರಡೂ ಪಕ್ಷದ ನಾಯಕರೊಂದಿಗೆ ಉತ್ತಮ ಸಂಬಂಧ ಇದ್ದು, ಮೈತ್ರಿ ಸಂಬಂಧ ಅವರೇ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.