ADVERTISEMENT

ಜನರ ಮಾತು ಕೇಳಿಸಿಕೊಳ್ಳದ ಪ್ರಧಾನಿ: ಪ್ರಿಯಾಂಕಾ ಗಾಂಧಿ

​ಪ್ರಜಾವಾಣಿ ವಾರ್ತೆ
Published 4 ಮೇ 2023, 9:40 IST
Last Updated 4 ಮೇ 2023, 9:40 IST
ಕೊಪ್ಪಳ ‌ಜಿಲ್ಲೆ ಕನಕಗಿರಿಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮಾತನಾಡಿದರು
ಕೊಪ್ಪಳ ‌ಜಿಲ್ಲೆ ಕನಕಗಿರಿಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮಾತನಾಡಿದರು   

ಕನಕಗಿರಿ (ಕೊಪ್ಪಳ): ಪ್ರಧಾನಿ ನರೇಂದ್ರ ಮೋದಿ ಆಡುವ ಮಾತುಗಳನ್ನು ಜನ ಕೇಳಬೇಕಾಗಿದೆ ವಿನಃ ಜನರ ಮಾತುಗಳನ್ನು ಮೋದಿ ಸೇರಿದಂತೆ ಬಿಜೆಪಿಯ ಯಾವ ನಾಯಕರೂ ಕೇಳಿಸಿಕೊಳ್ಳುತ್ತಿಲ್ಲ. ಅಂಥವರು ಜನನಾಯಕರಾಗಲು ಅಸಮರ್ಥರು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದರು.

ಕನಕಗಿರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಿವರಾಜ ತಂಗಡಗಿ ಪರ ಇಲ್ಲಿ ಗುರುವಾರ ಸೇರಿದ್ದ ಸಾವಿರಾರು ಜನರ ಎದುರು ಪ್ರಚಾರ ಭಾಷಣ ಮಾಡಿದರು.

ಎಲ್ಲರಿಗೂ ನಮಸ್ಕಾರ, ಕನಕಗಿರಿ ಕ್ಷೇತ್ರದ ಅಧಿಪತಿ ಕನಕಾಚಲಪತಿ ಪಾದಕ್ಕೆ ನಮಸ್ಕಾರಗಳು ಎಂದು ಕನ್ನಡದಲ್ಲಿ ಹೇಳಿ ಭಾಷಣ ಆರಂಭಿಸಿ ಮಾತಿನುದ್ದಕ್ಕೂ ಬಿಜೆಪಿ ಜನ ವಿರೋಧಿಯಾಗಿ ನಡೆದುಕೊಂಡಿದೆ ಎಂದು ಆರೋಪಿಸಿದರು.

ADVERTISEMENT

ಜನರಿಗೆ ಉದ್ಯೋಗ, ಸೌಲಭ್ಯ, ಅಭಿವೃದ್ಧಿ ಕಲ್ಪಿಸದ ಬಿಜೆಪಿ ಧರ್ಮ ಹಾಗೂ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟು ರಾಜಕೀಯ ಮಾಡುತ್ತಿದೆ. ನನಗೆ ವಿರೋಧ ಪಕ್ಷದವರು ಬಯ್ಯುತ್ತಾರೆ, ನನಗೆ ಹಲವು ಬಾರಿ ಅಪಮಾನ ಆಯಿತು ಎಂದು ಬಿಜೆಪಿ ನಾಯಕರು ಲೆಕ್ಕ ಹಾಕುತ್ತಾರೆ ಎಂದು ಹರಿಹಾಯ್ದರು.

ನಿಮ್ಮೆಲ್ಲರ ಗುರಿ ನಿಮ್ಮ ಭವಿಷ್ಯ ಭದ್ರಗೊಳಿಸುವ, ಬದುಕು ಸುಂದರ ಮಾಡುವ, ವಿಕಸನಕ್ಕೆ ಕೈ ಜೋಡಿಸುವ ಕೆಲಸ ಯಾರು ಮಾಡುತ್ತಾರೊ ಅವರತ್ತ ಇರಲಿ. ಮೇ 10ರಂದು ಮತದಾನ ಮಾಡಲು ಹೋಗುವ ‌ಮೊದಲು ನಿಮ್ಮ ಮನೆಯಲ್ಲಿರುವ ಸಿಲಿಂಡರ್ ಒಮ್ಮೆ ನೋಡಿ. ಅದರ ಬೆಲೆ ಎಷ್ಟೊಂದು ಹೆಚ್ಚಾಗಿದೆ ಎನ್ನುವುದನ್ನು ಲೆಕ್ಕ ಹಾಕಿ ಯಾರಿಗೆ ಮತ ಕೊಡಬೇಕು ಎಂದು ನಿರ್ಧರಿಸಿ ಎಂದರು.

ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಿ, ಅತಂತ್ರವಾದರೆ ಬೇರೆ ಪಕ್ಷದವರು ಸರ್ಕಾರ ರಚನೆ ಮಾಡುತ್ತಾರೆ ಎಂದರು.

ಬಿಜೆಪಿ ಸರ್ಕಾರ ₹1.50 ಲಕ್ಷ ಕೋಟಿ ಲೂಟಿ ಹೊಡೆದಿದೆ ಎಂದು ವಾಗ್ದಾಳಿ ನಡೆಸಿದ ಪ್ರಿಯಾಂಕಾ ಇಷ್ಟೊಂದು ಹಣದಲ್ಲಿ 100 ಏಮ್ಸ್, 187 ಇಎಸ್ಐ ಆಸ್ಪತ್ರೆಗಳು, 30 ಸಾವಿರ ಸ್ಮಾರ್ಟ್ ಕ್ಲಾಸ್, 30 ಲಕ್ಷ ಬಡವರಿಗೆ ಮನೆ ಕಟ್ಟಿಕೊಡಬಹುದಿತ್ತು ಎಂದರು.

ದರ್ಶನ: ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಪ್ರಿಯಾಂಕಾ ಗಾಂಧಿ ಕನಕಾಚಲಪತಿ ದೇವಸ್ಥಾನಕ್ಕೆ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.