ಪರಿಶಿಷ್ಟ ಜಾತಿಯ ಎಡಗೈ ಸಮುದಾಯದವರ ಆಧಿಪತ್ಯವನ್ನು ತಮ್ಮ ಬಳಿಯೇ ಇಟ್ಟುಕೊಳ್ಳಬೇಕೆಂಬ ಹಪಾಹಪಿಗೆ ಬಿದ್ದಿರುವ ಆಹಾರ ಸಚಿವ ಕೆ.ಎಚ್. ಮುನಿಯಪ್ಪ, ಹೊಸಪಟ್ಟು ಹಾಕಲಾರಂಭಿಸಿದ್ದಾರೆ.
ಈಗಿನ ಅಂತೆಕಂತೆ ಏನೆಂದರೆ, ಚಿತ್ರದುರ್ಗ, ಕೋಲಾರದ ಟಿಕೆಟ್ನ್ನು ತಮ್ಮವರಿಗೆ, ಅದರಲ್ಲೂ ತಾವು ಹೇಳಿದವರಿಗೇ ನೀಡಬೇಕು ಎಂದು ಮುನಿಯಪ್ಪ ಪಟ್ಟು ಹಿಡಿದಿದ್ದಾರಂತೆ. ತಾವು ಸೂಚಿಸಿದವರಿಗೆ ಕೊಡದೇ ಇದ್ದರೆ ಟಿಕೆಟ್ ಹಂಚಿಕೆಯ ಉಸ್ತುವಾರಿ’ ಹೊಂದಿರುವವರ ‘ವ್ಯವಹಾರ’ವನ್ನು ಬಟಾಬಯಲು ಮಾಡುತ್ತೇನೆ,ಪಕ್ಷದ ವರಿಷ್ಠರಾದ ಸೋನಿಯಾಜಿಗೂ ದೂರು ಸಲ್ಲಿಸುತ್ತೇನೆ ಎಂದು ಬೆದರಿಕೆಯನ್ನೂ ಹಾಕಿದ್ದಾರಂತೆ!!
28 ಲೋಕಸಭೆ ಕ್ಷೇತ್ರಗಳ ಪೈಕಿ ಪರಿಶಿಷ್ಟರಿಗೆ ಮೀಸಲಾದ ಕಲಬುರಗಿ, ವಿಜಯಪುರ, ಚಾಮರಾಜನಗರ ಕ್ಷೇತ್ರಗಳನ್ನು ಬಲಗೈ ಸಮುದಾಯಕ್ಕೆ ಕಾಂಗ್ರೆಸ್ ನೀಡಲಿದೆ. ಚಿತ್ರದುರ್ಗ ಮತ್ತು ಕೋಲಾರವನ್ನು ಎಡಗೈ ಸಮುದಾಯಕ್ಕೆ ನೀಡಬೇಕೆಂಬ ಬೇಡಿಕೆಯೂ ಇದೆ. ಈ ಮಧ್ಯೆ, ಚಿತ್ರದುರ್ಗದ ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಎಡಗೈ ಸಮುದಾಯಕ್ಕೆ ಸೇರಿದವರಲ್ಲ ಎಂದು ಕೆಲವು ಸಚಿವರು, ಶಾಸಕರು ಮುಖ್ಯಮಂತ್ರಿ ದೂರಿತ್ತಿದ್ದಾರೆ. ಅಲ್ಲಿ, ಚಂದ್ರಪ್ಪ ಅವರಿಗೆ ಕೊಡಬೇಕು ಎಂದು ಮುನಿಯಪ್ಪ ಸೆಣಸುತ್ತಿದ್ದಾರಂತೆ. ಕೋಲಾರಕ್ಕೆ ರಾಜ್ಯಸಭೆಯ ಮಾಜಿ ಸದಸ್ಯ ಎಲ್. ಹನುಮಂತಯ್ಯ ಹೆಸರು ಮುಂಚೂಣಿಯಲ್ಲಿದೆ. ತಮ್ಮ ಹಿಡಿತದಲ್ಲಿರುವ ಕ್ಷೇತ್ರದಲ್ಲಿ ಹೊಸಬರನ್ನು ಬಿಟ್ಟುಕೊಳ್ಳಲು ಮುನಿಯಪ್ಪ ತಯಾರಿಲ್ಲವಂತೆ. ಅದಕ್ಕಾಗಿ, ತಮ್ಮ ಅಳಿಯ ಚಿಕ್ಕಪೆದ್ದಣ್ಣ, ಪುತ್ರ ನರಸಿಂಹರಾಜ್ ಅವರನ್ನು ಮುಂದೆ ತಂದಿದ್ದಾರಂತೆ.. ಹೀಗಿದೆ ನೋಡಿ ಮುನಿಯಪ್ಪನವರ ಮಹಾತ್ಮೆ ಎನ್ನುತ್ತಾರೆ ಸಂತ್ರಸ್ತರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.