ADVERTISEMENT

ಬೆಂಬಲಿಗರ ಜಯಘೋಷದ ನಡುವೆ ಪಕ್ಷೇತರ ಅಭ್ಯರ್ಥಿಯಾಗಿ ಈಶ್ವರಪ್ಪ ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2024, 8:22 IST
Last Updated 12 ಏಪ್ರಿಲ್ 2024, 8:22 IST
<div class="paragraphs"><p>ಜಿಲ್ಲಾಧಿಕಾರಿ ಕಚೇರಿಯಲ್ಲಿ&nbsp;ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ&nbsp;ಕೆ.ಎಸ್.ಈಶ್ವರಪ್ಪ</p></div>

ಜಿಲ್ಲಾಧಿಕಾರಿ ಕಚೇರಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಕೆ.ಎಸ್.ಈಶ್ವರಪ್ಪ

   

ಶಿವಮೊಗ್ಗ: ಬಿರು ಬಿಸಿಲನ್ನು ಲೆಕ್ಕಿಸದೇ ಭಾರೀ ಸಂಖ್ಯೆಯಲ್ಲಿ ಹೆಜ್ಜೆ ಹಾಕಿದ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ಬಂದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ಇಲ್ಲಿನ ರಾಮಣ್ಣ ಶೆಟ್ಟಿ ಪಾರ್ಕ್ ನಿಂದ ಮೆರವಣಿಗೆ ಆರಂಭವಾಯಿತು. ರಾಷ್ಟ್ರ ಭಕ್ತರ ಬಳಗದ ಹೆಸರಿನಲ್ಲಿ ಮೆರವಣಿಗೆಯಲ್ಲಿ ಸಾಗಿಬಂದ ಈಶ್ವರಪ್ಪ ಬೆಂಬಲಿಗರು ಕೇಸರಿ ಧ್ವಜಗಳನ್ನು ಪ್ರದರ್ಶಿಸಿದರು. ಜೈ ಶ್ರೀರಾಮ್, ಭಾರತ ಮಾತಾಕಿ ಜೈ, ರಾಷ್ಟಭಕ್ತರ ಬಳಗದ ಅಭ್ಯರ್ಥಿ ಈಶ್ವರಪ್ಪನವರಿಗೆ ಜೈ ಎಂಬ ಘೋಷಣೆಗಳನ್ನು ಕೂಗಿದರು.

ADVERTISEMENT

ಉರಿ ಬಿಸಿಲಿನಲ್ಲಿ ನಾಮಪತ್ರ ಸಲ್ಲಿಕೆಗೆ ತೆರೆದ ವಾಹನದಲ್ಲಿ ಹೊರಟ ಈಶ್ವರಪ್ಪನವರ ಮೆರವಣಿಗೆಗೆ ವಾದ್ಯ ಮೇಳ ರಂಗು ತುಂಬಿತು. ಈ ವೇಳೆ ಬೆಂಬಲಿಗರು ಹೂವಿನ ಮಳೆ ಸುರಿಸಿದರು.

ಮೆರವಣಿಗೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದವರಿಗೆ ಮಜ್ಜಿಗೆ, ನಿಂಬೆ ಹುಳಿ ಪೆಪ್ಪರ್ ಮೆಂಟ್, ನೀರಿನ ಪ್ಯಾಕೆಟ್ ಹಂಚಲಾಯಿತು.

ಮೆರವಣಿಗೆ ಗಾಂಧಿ ಬಜಾರ್‌ಗೆ ಬರುತ್ತಿದ್ದಂತೆಯೇ ವಿವಿಧ ಸಮುದಾಯಗಳ ಮುಖಂಡರು ಈಶ್ವರಪ್ಪ ಅವರಿಗೆ ಹೂವಿನ ಹಾರ ಹಾಕಿ ಬೆಂಬಲ ಸೂಚಿಸಿದರು.

ಗಮನ ಸೆಳೆದ ಮೋದಿ ವೇಷಧಾರಿ:

ಮೆರವಣಿಗೆಯಲ್ಲಿ ತೆರೆದ ವಾಹನದಲ್ಲಿ ಜನರತ್ತ ಕೈ ಬೀಸುತ್ತಾ ಬಂದ ಪ್ರಧಾನಿ ನರೇಂದ್ರ ಮೋದಿ ವೇಷಧಾರಿಯೊಬ್ಬರು ಜನರ ಮನಗೆದ್ದರು.

ಕೆ‌.ಎಸ್. ಈಶ್ವರಪ್ಪ ಅವರ ಉಮೇದುವಾರಿಕೆಗೆ ಬೆಂಬಲಿಗ ವಿಶ್ವಾಸ್ ಸೂಚಕರಾಗಿದ್ದರು. ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನಾಮಪತ್ರ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.