ADVERTISEMENT

ಡಿ.ಕೆ. ಸುರೇಶ್‌ ರಾವಣ: ಶಾಸಕ ಮುನಿರತ್ನ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2024, 19:16 IST
Last Updated 25 ಮಾರ್ಚ್ 2024, 19:16 IST
ಶಾಸಕ ಮುನಿರತ್ನ
ಶಾಸಕ ಮುನಿರತ್ನ   

ಕನಕಪುರ (ರಾಮನಗರ): ಪಟ್ಟಣದಲ್ಲಿ ಸೋಮವಾರ ನಡೆದ ಬಿಜೆಪಿ–ಜೆಡಿಎಸ್ ಕಾರ್ಯಕರ್ತರ ಸಮ್ಮಿಲನ ಸಭೆ ಸಂದರ್ಭದಲ್ಲಿ ಬಿಜೆಪಿ ಶಾಸಕ ಮುನಿರತ್ನ ಅವರು ಸಂಸದ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರನ್ನು ರಾವಣನಿಗೆ ಹೋಲಿಸಿದರು. ಇದೇ ವೇಳೆ ಅವರ ಎದುರಾಳಿ, ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಅವರನ್ನು ರಾಮನಿಗೆ ಹೋಲಿಸಿದರು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸುರೇಶ್ ಪರವಾಗಿ ಯಾರೇ ಬಂದರೂ ಪರವಾಗಿಲ್ಲ. ರಾವಣ ರಾವಣನೇ, ರಾಮ ರಾಮನೇ. ರಾಮನಿಗೆ ಹೆಚ್ಚು ಮತ ಬರುತ್ತದೊ, ರಾಮನಿಗೆ ಬರುತ್ತದೊ ಕಾದು ನೋಡೋಣ. ಯಾರು ಏನು ಎಂಬುದರ ತೀರ್ಮಾನವನ್ನು ಜನರಿಗೆ ಬಿಟ್ಟಿದ್ದೇವೆ’ ಎಂದರು.

‘ಕನಕಪುರದಲ್ಲಿ ಬಿಜೆಪಿ–ಜೆಡಿಎಸ್‌ ಬೂತ್ ಏಜೆಂಟ್‌ರ ಮೇಲೆ ಡಿ.ಕೆ. ಸಹೋದರರು ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕುತ್ತಾರೆ. ಅವರ ದೌರ್ಜನ್ಯ ತಡೆಯಲು ಕ್ಷೇತ್ರದಲ್ಲಿ ಅರೆ ಸೇನಾಪಡೆ ನಿಯೋಜಿಸಬೇಕು. ಅವರು ಬಂದರೆ ಎಲ್ಲವೂ ಸರಿ ಹೋಗಲಿದೆ. ಈ ಕುರಿತು ಎರಡೂ ಪಕ್ಷಗಳ ವರಿಷ್ಠರು ಆಯೋಗಕ್ಕೆ ಮನವಿ ಮಾಡಿದ್ದಾರೆ’ ಎಂದು ಹೇಳಿದರು.

ADVERTISEMENT

ಸಹೋದರರ ರಕ್ತ ಚರಿತ್ರೆ: ‘ರಾಜಕಾರಣದಲ್ಲಿ ಡಿ.ಕೆ ಸಹೋದರರದ್ದು ರಕ್ತ ಚರಿತ್ರೆ. ದಮನಕಾರಿ ನೀತಿ ಮತ್ತು ದಬ್ಬಾಳಿಕೆ ಮಾಡಿಕೊಂಡೇ ಬಂದಿದ್ದಾರೆ. ಜನರನ್ನು ಪ್ರೀತಿಯಿಂದ ಗೆಲ್ಲುವ ಬದಲು ಪೊಲೀಸ್ ದೌರ್ಜನ್ಯದ ಮೂಲಕ ನಿಯಂತ್ರಿಸುತ್ತಿದ್ದಾರೆ. ಹಾಗಾಗಿ, ಜನರೇ ಈ ಚುನಾವಣೆಯು ರಾಮ–ರಾವಣ ಮತ್ತು ಧರ್ಮ–ಅಧರ್ಮದ ನಡುವಣ ಹೋರಾಟ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ರಾಮನ ಪಕ್ಷದ ಅಭ್ಯರ್ಥಿಯೇ ಇಲ್ಲಿ ಗೆಲ್ಲುತ್ತಾರೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರು ಮುನಿರತ್ನ ಹೇಳಿಕೆಗೆ ದನಿಗೂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.