ಶಿರಸಿ: ‘ಲೋಕಸಭಾ ಚುನಾವಣೆಗೆ ನಿಂತವರು ಅವರ ಕೆಲಸ ಮಾಡುತ್ತಾರೆ. ಅವರೊಟ್ಟಿಗೆ ನಾವು ಪ್ರಚಾರಕ್ಕೆ ಹೋಗಬೇಕೆ ಅಥವಾ ಬೇಡವೇ ಎಂಬುದು ಇನ್ನೂ ನಿರ್ಣಯವಾಗಿಲ್ಲ’ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.
‘ಲೋಕಸಭಾ ಚುನಾವಣಾ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಸಮಾಧಾನ, ಅಸಮಾಧಾನಕ್ಕೆ ಪಕ್ಷದಲ್ಲಿ ಅವಕಾಶವಿಲ್ಲ. ಪಕ್ಷದ ಹೈಕಮಾಂಡ್ಗೆ ಸಮಾಧಾನವಾದರೆ ಆಯಿತು. ಈ ಹಿಂದೆ ಬಿಜೆಪಿ ಅಭ್ಯರ್ಥಿ ಆಯ್ಕೆ ಕುರಿತು ಶಿರಸಿಯಲ್ಲಿ ಎರಡು ಸಭೆ ನಡೆದಿದ್ದವು. ಆಗ ನನಗೆ ಭಾಗಿಯಾಗಲು ಆಗಿರಲಿಲ್ಲ. ನಂತರ ಸಭೆಯ ಮಾಹಿತಿ ನೀಡಿಲ್ಲ, ಅಭಿಪ್ರಾಯ ಸಹ ಕೇಳಿಲ್ಲ’ ಎಂದು ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
ಯಾವ ಕಾಲದಲ್ಲಿ ಯಾರೆಲ್ಲ ಪಕ್ಷದ ಚೌಕಟ್ಟಿನಿಂದ ಅಂತರ ಕಾಯ್ದುಕೊಂಡರು ಎಂಬುದು ಗೊತ್ತಿದೆ. ನನ್ನ ವಿರುದ್ಧ ಪೋಸ್ಟರ್ ಹಚ್ಚಿದವರು ಯಾರು ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಅವರಿಗೆ ಆತ್ಮತೃಪ್ತಿಯಾದರೆ ಸಾಕು.ಶಿವರಾಮ ಹೆಬ್ಬಾರ್, ಶಾಸಕ
‘ಯಾವ ರಾಜಕೀಯ ಪಕ್ಷವೂ ತನ್ನತ್ತ ಬಂದವರನ್ನು ಬಿಟ್ಟುಕೊಟ್ಟಿಲ್ಲ. ಎಲ್ಲ ಪಕ್ಷಗಳಲ್ಲೂ ಪಕ್ಷಾಂತರಗಳಾಗಿವೆ. ಯಾರೂ ಯಾವುದೇ ಪಕ್ಷಕ್ಕೆ ಗುತ್ತಿಗೆಯಲ್ಲ. ರಾಜಕೀಯದಲ್ಲಿ ಎಲ್ಲರಿಗೂ ಒಂದೇ ಕಾನೂನಿರಬೇಕು’ ಎಂದ ಅವರು ತಿಳಿಸಿದರು.
‘ನಾನು ಕಾಂಗ್ರೆಸ್ ಸೇರುತ್ತೇನೆ ಎಂದು ಹೇಳಿಲ್ಲ. ಹೋಗುವುದಿದ್ದರೆ ಎಲ್ಲ ಹೇಳಿಯೇ ಹೋಗುವೆ. ನಾಲ್ಕು ದಶಕದಿಂದ ರಾಜಕಾರಣದಲ್ಲಿ ಇರುವ ನನಗೆ ಯಾವುದು ಕಲ್ಪಿತ, ಕಪೋಲ ಕಲ್ಪಿತ ಹೇಳುವಷ್ಟು ಶಕ್ತಿಯಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.