ADVERTISEMENT

ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ: ವರಿಷ್ಠರು ಹೇಳಿದ್ದನ್ನಷ್ಟೇ ಹೇಳಿರುವೆ– ಎಂ.ಬಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 23 ಮೇ 2023, 4:58 IST
Last Updated 23 ಮೇ 2023, 4:58 IST
   

ಬೆಂಗಳೂರು: 'ಸಿದ್ದರಾಮಯ್ಯ ಪೂರ್ಣಾವಧಿ ಸಿ.ಎಂ ಆಗಿ ಇರುತ್ತಾರೆ' ಎಂಬ ತಮ್ಮ ಹೇಳಿಕೆಗೆ ಮಂಗಳವಾರ ಬೆಳಿಗ್ಗೆ ಸ್ಪಷ್ಟನೆ ನೀಡಿರುವ ಸಚಿವ ಎಂ.ಬಿ. ಪಾಟೀಲ 'ಪಕ್ಷದ ವರಿಷ್ಠರು ಹೇಳಿದ್ದನ್ನಷ್ಟೇ ನಾನು ಹೇಳಿದ್ದೇನೆ' ಎಂದಿದ್ದಾರೆ.

ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ನಾನು ಪದೇ ಪದೇ ಮಾತನಾಡಲ್ಲ. ನಿನ್ನೆ ಮಾಧ್ಯಮದವರು ಸಿದ್ದರಾಮಯ್ಯ ಬದಲಾಗುತ್ತಾರಾ ಅಂತ ಕೇಳಿದ್ರು. ಅದಕ್ಕೆ ಉತ್ತರ‌ನೀಡಿದ್ದೆ' ಎಂದರು.

'ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಅಂತ ನಮ್ಮ ನಾಯಕರು ಹೇಳಿದ್ದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸುದ್ದಿಗೋಷ್ಠಿಯಲ್ಲಿ ಏನು ಹೇಳಿದ್ದರೋ ಅದನ್ನೆ ನಾನು ಹೇಳಿದ್ದೇನೆ. ಪವರ್ ಶೇರಿಂಗ್ ಇಲ್ಲ. ಇದ್ದರೆ ಅದು ಜನರ ಜೊತೆ ಮಾತ್ರ ಎಂದೂ ವೇಣುಗೋಪಾಲ್ ಹೇಳಿದ್ದರು. ಅಧಿಕಾರ ಹಂಚಿಕೆಯ ಸಂಧಾನ ಸೂತ್ರ ನನಗೆ ಗೊತ್ತಿಲ್ಲ. ನನ್ನದು ಯಾವುದೇ ಹೇಳಿಕೆ ಇಲ್ಲ.‌ ನಾನು ವೈಯಕ್ತಿಕವಾಗಿ ಮಾತನಾಡಿಲ್ಲ' ಎಂದೂ ಸಮರ್ಥಿಸಿದರು.

ADVERTISEMENT

'ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಮುಂದುವರೆಯುತ್ತಾರೆ ಅಂತ ಹೇಳಿದ್ದರು‌.‌ ನಾನು ಅದನ್ನೆ ಹೇಳಿದ್ದೇನೆ' ಎಂದೂ ಹೇಳಿದರು.

ಜಲಸಂಪನ್ಮೂಲ ಖಾತೆ‌ ಕಣ್ಣು: 'ಈ ಹಿಂದೆ ಜಲಸಂಪನ್ಮೂಲ ಖಾತೆ ನಿಭಾಯಿಸಿದ್ದೆ. ನನ್ನ ಅಭಿಪ್ರಾಯವನ್ನು ಸಿ.ಎಂ ಮುಂದೆ ತಿಳಿಸಿದ್ದೇನೆ.‌ ಅಂತಿಮವಾಗಿ ಖಾತೆ ಹಂಚಿಕೆ ಬಗ್ಗೆ ಸಿ.ಎಂ ತೀರ್ಮಾನ ಮಾಡಲಿದ್ದಾರೆ' ಎಂದೂ ಎಂ.ಬಿ. ಪಾಟೀಲ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.