ಪಾವಗಡ: ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ಬಗೆಹರಿದಿಲ್ಲ. ಆದ ಕಾರಣ ‘ನೋಟಾ’ ಮತ ಚಲಾಯಿಸುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಕದಿರೇಹಳ್ಳಿಯ ಧನು ಸಿಂಹಾದ್ರಿ ಹಾಗೂ ಜೆ.ಅಚ್ಚಮ್ಮನಹಳ್ಳಿಯ ನಾಗಣ್ಣ ಎಂಬುವವರಿಗೆ ಸಹಾಯಕ ಚುನಾವಣಾಧಿಕಾರಿ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.
ಏ.12ರಂದು ಪತ್ರಿಕೆಯಲ್ಲಿ ‘ಗರಿಗೆದರಿದ ರಾಜಕೀಯ ಚಟುವಟಿಕೆ’ ಎಂಬ ವರದಿ ಪ್ರಕಟವಾಗಿತ್ತು. ಇಲ್ಲಿ ‘ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸಿಲ್ಲ. ಕೇವಲ ಭರವಸೆಗಳನ್ನು ಕೇಳಿ ಸಾಕಾಗಿದೆ. ಗ್ರಾಮದಲ್ಲಿ ನೋಟಾ ಅಭಿಯಾನ ನಡೆಸಲಾಗುತ್ತಿದೆ’ ಎಂದು ನಾಗಣ್ಣ ಹೇಳಿಕೆ ನೀಡಿದ್ದರು. ಧನು ಸಿಂಹಾದ್ರಿ ಸಹ ‘ನೋಟಾಗೆ ಮತ ನೀಡಿ ಬುದ್ಧಿ ಕಲಿಸಬೇಕು’ ಎಂದಿದ್ದರು.
ಈ ನೋಟಿಸ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಯುವ ಸಮುದಾಯ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದೆ. ‘ಚುನಾವಣಾ ಆಯೋಗವು ಮತಚಲಾವಣೆ ಯಂತ್ರದಲ್ಲಿ ನೋಟಾ ಬಟನ್ ಇಟ್ಟಿದೆ. ಆಯೋಗವೇ ನೋಟಾಗೆ ಮತ ನೀಡಲು ಅವಕಾಶ ನೀಡಿದೆ. ನೀರಿನ ಸಮಸ್ಯೆ ಬಗೆಹರಿಸದ ಕಾರಣ ನೋಟಾಗೆ ಮತ ನೀಡುವಂತೆ ಹೇಳಿಕೆ ನೀಡಿದ್ದಾರೆ. ಇದರಲ್ಲಿ ತಪ್ಪೇನಿದೆ. ಪ್ರಜಾಪ್ರಭುತ್ವದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಇಲ್ಲವೆ’ ಎಂದು ಯುವ ಸಮುದಾಯ ಅಧಿಕಾರಿಗಳ ನಡೆಯನ್ನು ಪ್ರಶ್ನಿಸುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.