ADVERTISEMENT

ಮೋದಿ ಸರ್ಕಾರ ಮುಳುಗುತ್ತಿರುವ ಹಡಗು: ಮಾಯಾವತಿ ಟೀಕೆ

ಏಜೆನ್ಸೀಸ್
Published 14 ಮೇ 2019, 11:30 IST
Last Updated 14 ಮೇ 2019, 11:30 IST
   

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಮುಳುಗುತ್ತಿರುವ ಹಡಗು ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೋದಿ ಸರ್ಕಾರ ಮುಳುಗುತ್ತಿದೆ, ಎಲ್ಲರಿಗೂ ಇದು ಗೊತ್ತಿದೆ’ ಎಂದು ಹೇಳಿದರು.

‘ಮೋದಿ ಸರ್ಕಾರ ಈ ಬಾರಿ ಚುನಾವಣೆಯಲ್ಲಿ ಸೋಲಲಿದೆ. ಈ ಸರ್ಕಾರಕ್ಕೆ ಬೆಂಬಲ ನೀಡುವುದನ್ನು ಆರ್‌ಎಸ್‌ಎಸ್ ಕೂಡ ನಿಲ್ಲಿಸಿದೆ. ಚುನಾವಣಾ ಭರವಸೆಗಳನ್ನು ಈಡೇರಿಸದಿರುವುದು, ಸಾರ್ವಜನಿಕರ ವಿರೋಧದಿಂದಾಗಿ ಸ್ವಯಂಸೇವಕರೂ ಕೆಲಸ ಮಾಡದಿರುವುದು ಕಂಡುಬಂದಿದೆ. ಇದು ಮೋದಿಯವರು ಆತಂಕಕ್ಕೊಳಗಾಗುವಂತೆ ಮಾಡಿದೆ’ ಎಂದು ಅವರು ಹೇಳಿದರು.

ADVERTISEMENT

‘ದ್ವಿಪಾತ್ರ’ಗಳಿಂದ ವಂಚನೆಗೆ ಒಳಗಾಗುವುದು ದೇಶದ ಜನತೆಗೆ ಬೇಕಿಲ್ಲ. ದೇಶಕ್ಕೆ ‘ಚಾಯ್‌ವಾಲ’ ಅಥವಾ ‘ಚೌಕೀದಾರ’ ಬೇಡ. ಬದಲಿಗೆ ಪ್ರಧಾನಿ ಬೇಕು ಎಂದು ಮಾಯಾವತಿ ಪ್ರತಿಪಾದಿಸಿದರು.

‘ಸೇವಕ, ಮುಖ್ಯ ಸೇವಕ, ಚಾಯ್‌ವಾಲ, ಚೌಕೀದಾರ ಎಂಬ ಹೆಸರುಗಳಿಂದ ಜನರನ್ನು ಹಾದಿತಪ್ಪಿಸುವ ನಾಯಕರನ್ನು ದೇಶ ಈಗಾಗಲೇ ಕಂಡಿದೆ. ಆದರೆ ದೇಶಕ್ಕೆ ಈಗ ಬೇಕಾಗಿರುವುದು ಸಂವಿಧಾನದ ಆಶಯಕ್ಕೆ ತಕ್ಕಂತೆ ದೇಶವನ್ನು ಮುನ್ನಡೆಸಬಲ್ಲ ಶುದ್ಧ ಪ್ರಧಾನ ಮಂತ್ರಿ. ಜನರನ್ನು ಈಗಾಗಲೇ ಮೂರ್ಖರನ್ನಾಗಿ ಮಾಡಲಾಗಿದೆ. ಇನ್ನು ಹೀಗಾಗಬಾರದು’ ಎಂದುಮಾಯಾವತಿ ಹೇಳಿದರು.

ಸೋಮವಾರವೂ ಮೋದಿ ವಿರುದ್ಧ ತೀಕ್ಷ್ಣವಾಗಿ ಟೀಕೆ ಮಾಡಿದ್ದ ಮಾಯಾವತಿ,‘ರಾಜಕೀಯಕ್ಕಾಗಿ ಪತ್ನಿಯನ್ನೇ ತ್ಯಜಿಸಿದ ವ್ಯಕ್ತಿಗೆ ಮಹಿಳೆಯ ಘನತೆ– ಗೌರವದ ಬಗ್ಗೆ ಏನು ಗೊತ್ತು’ ಎಂದು ಪ್ರಶ್ನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.