ADVERTISEMENT

ಹಾಸನ ಟಿಕೆಟ್‌: ದೇವೇಗೌಡರ ನಿರ್ಧಾರದತ್ತ ಚಿತ್ತ

‘ಪಕ್ಷದ ನಿಷ್ಠಾವಂತರಿಗೆ ಟಿಕೆಟ್‌‘: ಕುತೂಹಲ ಮೂಡಿಸಿದ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2023, 18:40 IST
Last Updated 1 ಏಪ್ರಿಲ್ 2023, 18:40 IST
ಎಚ್‌.ಡಿ.ದೇವೇಗೌಡ
ಎಚ್‌.ಡಿ.ದೇವೇಗೌಡ   

ಬೆಂಗಳೂರು/ಹಾಸನ: ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್‌ ನೀಡಲಾಗುವುದು ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದರು.

ಬೆಂಗಳೂರಿನ ಪದ್ಮನಾಭನಗರದ ತಮ್ಮ ಮನೆಗೆ ಶನಿವಾರ ಭೇಟಿ ನೀಡಿದ್ದ ಟಿಕೆಟ್‌ ಆಕಾಂಕ್ಷಿ ಭವಾನಿ ರೇವಣ್ಣ ಬೆಂಬಲಿಗರು ಹಾಗೂ ಹಾಸನ ನಗರಸಭೆಯ ಕೆಲ ಸದಸ್ಯರ ಜತೆ ನಡೆಸಿದ ಮಾತುಕತೆಯಲ್ಲಿ ಅವರು ಅಭಿಪ್ರಾಯ ಹಂಚಿಕೊಂಡರು.

‘ಹಾಸನ ಜಿಲ್ಲೆಯ ಸಂಪೂರ್ಣ ಅರಿವಿದೆ. ಪಕ್ಷದ ಬಲ ಕುಗ್ಗಿಸಲು ಅವಕಾಶ ನೀಡಲ್ಲ. ಪಕ್ಷದ ನಿಷ್ಠಾವಂತರಿಗೆ ಈ ಬಾರಿ ಆದ್ಯತೆ ನೀಡಲಾಗುವುದು’ ಎಂದರು. ಹಾಸನ ಟಿಕೆಟ್‌ಗಾಗಿ ಭಾರಿ ಪೈಪೋಟಿ ನಡೆದಿರುವ ನಡುವೆಯೇ ಕ್ಷೇತ್ರದ ಪ್ರಮುಖರ ಸಭೆ ಕುತೂಹಲ ಮೂಡಿಸಿತ್ತು. ಪ್ರತೀ ಬಾರಿಯಂತೆ ಈ ಬಾರಿಯೂ ದಾಸ ಒಕ್ಕಲಿಗರಿಗೆ ಟಿಕೆಟ್ ನೀಡಲು ದೇವೇಗೌಡರು ಒಲವು ತೋರಿದ್ದು, ಭವಾನಿ ಅವರಿಗೆ ನಿರಾಸೆ ಆಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಒಂದೆಡೆ, ಎಚ್‌.ಡಿ.ಕುಮಾರಸ್ವಾಮಿ ಮಾಜಿ ಶಾಸಕ ಎಚ್.ಎಸ್. ಪ್ರಕಾಶ್ ಮಗ ಎಚ್‌.ಪಿ. ಸ್ವರೂಪ್‌ಗೆ ಟಿಕೆಟ್‌ ಕೊಡಲು ಮುಂದಾಗಿದ್ದು, ಎಚ್‌.ಡಿ.ರೇವಣ್ಣ ಕುಟುಂಬ ಭವಾನಿ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ.

‘ಸ್ವರೂಪ್‌ಗೆ ಟಿಕೆಟ್‌ ನೀಡಿದರೆ ಕ್ಷೇತ್ರದಲ್ಲಿ ಪಕ್ಷದ ಮೇಲಿನ ಹಿಡಿತ ತಪ್ಪುತ್ತದೆ’ ಎಂಬ ಆತಂಕ ರೇವಣ್ಣ ಅವರದ್ದು. ಎಚ್‌.ಡಿ.ಕುಮಾರಸ್ವಾಮಿ, ‘ಬ್ಲ್ಯಾಕ್‌ಮೇಲ್‌ಗೆ ಮಣಿಯುವುದಿಲ್ಲ. ನಿರ್ಧಾರದಲ್ಲಿ ಬದಲಾವಣೆ ಇಲ್ಲ’ ಎಂದಿದ್ದಾರೆ.

ಈ ಮಧ್ಯೆ, ದೇವೇಗೌಡರನ್ನು ಭೇಟಿ ಮಾಡಿರುವ ಸಂಸದ ಪ್ರಜ್ವಲ್‌ ರೇವಣ್ಣ, ‘ಅಮ್ಮನಿಗೆ ಟಿಕೆಟ್‌ ನೀಡಬೇಕು. ಇಲ್ಲದಿದ್ದರೆ, ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದೂ ಹೇಳಿದ್ದಾಗಿ ಗೊತ್ತಾಗಿದೆ.

ಗೊಂದಲಕ್ಕೆ ಒಳಗಾಗಿರುವ ಕಾರ್ಯಕರ್ತರು, ‘ಇನ್ನೂ ಅಭ್ಯರ್ಥಿ ಅಂತಿಮಗೊಳಿಸಿಲ್ಲ. ಯಾರ ಪರ ಕೆಲಸ ಮಾಡಬೇಕೆಂದು ಗೊತ್ತಾಗುತ್ತಿಲ್ಲ’ ಎನ್ನುತ್ತಿದ್ದಾರೆ.

‘ದೇವೇಗೌಡರು ಸೋಮವಾರ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ’ ಎಂದು ಮೂಲಗಳು ತಿಳಿಸಿವೆ.

‘ಪೊಲೀಸ್‌ ಕಿರುಕುಳ’

ಬೆಂಗಳೂರು: ಜೆಡಿಎಸ್ ಕಾರ್ಯಕರ್ತರಿಗೆ, ಪಕ್ಷ ಸೇರುತ್ತಿರುವ ಇತರೆ ಪಕ್ಷಗಳ ಮುಖಂಡರಿಗೆ ಪೊಲೀಸರನ್ನು ಬಳಸಿ ಕಿರುಕುಳ ನೀಡಲಾಗುತ್ತಿದೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ ಕುಮಾರಸ್ವಾಮಿ ಆರೋಪಿಸಿದರು.

ಯಶವಂತಪುರ ಕ್ಷೇತ್ರದಲ್ಲಿ ನಡೆದ ಪಂಚರತ್ನ ಯಾತ್ರೆಯಲ್ಲಿ ಅವರು ಮಾತನಾಡಿದ ಅವರು, ಚುನಾವಣೆ ಆರಂಭವಾದಾಗಿನಿಂದ ಕಿರುಕುಳ ಜಾಸ್ತಿಯಾಗಿದೆ ಎಂದು ದೂರಿದರು.

‘ಅಧಿಕಾರಿಗಳು ಶಾಸಕರಿಗೆ ಅಡಿಯಾಳಾಗಿ ಕೆಲಸ ಮಾಡಿದರೆ ಜೂನ್ ತಿಂಗಳ ಬಳಿಕ
ಪ್ರಾಯಶ್ಚಿತ ಅನುಭವಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಸಚಿವರ ವಿರುದ್ಧ ಕಿಡಿ: ‘ನಾರಾಯಣಗೌಡರನ್ನು ಬೆಳೆಸಲು ನಮ್ಮ ಪಕ್ಷ ಹಾಳು ಮಾಡಿ ಕೊಳ್ಳಬೇಕಾ? ಅಂಥವರ ಎದುರಿಗೆ ಅಭ್ಯರ್ಥಿ ಹಾಕದೇ ಸಮ್ಮನಿರಲು ಸಾಧ್ಯವೇ?‘ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.