ಕೋಲಾರ: ಕೊತ್ತೂರು ಮಂಜುನಾಥ್ ಒತ್ತಡಕ್ಕೆ ಮಣಿದು 12 ಗಂಟೆಯಲ್ಲಿ ಹೈಕಮಾಂಡ್ ಮುಳಬಾಗಿಲು ಮೀಸಲು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಬದಲಾಯಿಸಿದೆ.
ಬುಧವಾರ ರಾತ್ರಿ 8.30ರ ಸುಮಾರಿಗೆ ಡಾ.ಮುದ್ದು ಗಂಗಾಧರ್ ಎಂಬುವರಿಗೆ ಕಾಂಗ್ರೆಸ್ ಟಿಕೆಟ್ ಘೋಷಿಸಲಾಗಿತ್ತು.
ಇದರಿಂದ ಕೋಪಗೊಂಡ ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಕೊತ್ತೂರು ಮಂಜುನಾಥ್, 'ಮುದ್ದು ಗಂಗಾಧರ್ ಯಾರೆಂಬುದೇ ಕ್ಷೇತ್ರದ ಜನರಿಗೆ ಗೊತ್ತಿಲ್ಲ. ಅಭ್ಯರ್ಥಿ ಬದಲಾಯಿಸದಿದ್ದರೆ ಕೋಲಾರದಲ್ಲಿ ನಾಮಪತ್ರ ಸಲ್ಲಿಸುವುದಿಲ್ಲ' ಎಂದು ಪಟ್ಟು ಹಿಡಿದರು ಎಂಬುದು ಗೊತ್ತಾಗಿದೆ.
ಹೀಗಾಗಿ, ಬೆಳಿಗ್ಗೆ ಡಾ.ಮುದ್ದುಗಂಗಾಧರ್ ಬದಲಿಗೆ ಆದಿನಾರಾಯಣ ಎಂಬುವರಿಗೆ ಟಿಕೆಟ್ ಘೋಷಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿ ಫಾರಂ ನೀಡಿದ್ದಾರೆ.
ಆದಿನಾರಾಯಣ ಅವರು ಕೊತ್ತೂರು ಬೆಂಬಲಿಗ. ಈ ಕಾರಣಕ್ಕೆ ಗುರುವಾರ ಕೋಲಾರದಲ್ಲಿ ನಾಮಪತ್ರ ಸಲ್ಲಿಸಿದ ಕೊತ್ತೂರು, ಮುಳಬಾಗಿಲಿಗೆ ತೆರಳಿ ಆದಿನಾರಾಯಣ ನಾಮಪತ್ರ ಸಲ್ಲಿಕೆಗೆ ಸಹಕರಿಸಿದರು.
ಇದಕ್ಕೂ ಮುನ್ನ ಮುಳಬಾಗಿಲು ಅಭ್ಯರ್ಥಿ ಬದಲಾವಣೆ ಬಗ್ಗೆ 'ಪ್ರಜಾವಾಣಿ'' ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೊತ್ತೂರು, 'ಈ ಹಿಂದೆ ಟಿಕೆಟ್ ಪಡೆದಿರುವ ಮನುಷ್ಯ ಯಾರೆಂಬುದೇ ನನಗೆ ಗೊತ್ತಿಲ್ಲ. ಈಗ ಬದಲಾವಣೆ ಮಾಡಿದ್ದಾರೆ' ಎಂದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.