ಬೆಂಗಳೂರು: 'ಅಭಿವೃದ್ಧಿಯನ್ನು ನೋಡಿ ಜನ ನನಗೆ ಆಶೀರ್ವಾದ ಮಾಡಿದ್ದಾರೆ' ಎಂದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಪಡೆದಿರುವ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಹೇಳಿದರು.
'ಕ್ಷೇತ್ರದ ಜನರಿಗೆ ನಾನು ಆಭಾರಿಯಾಗಿದ್ದೇನೆ. ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕೆಲಸ ನನ್ನ ಗೆಲುವಿಗೆ ಕಾರಣ' ಎಂದರು.
'ನನ್ನ ಕ್ಷೇತ್ರದ ಮತದಾರರು ಯಾವುದೇ ಜಾತಿ ಧರ್ಮ ನೋಡಿ ಮತ ಹಾಕಿಲ್ಲ. ನಾನು ಹಣಬಲದಿಂದ ಗೆದ್ದಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆರೋಪ ಮಾಡಿದ್ದಾರೆ. ಬಿಜೆಪಿ ಅಧಿಕಾರದ ಅವಧಿಯಲ್ಲಿ ಆರ್.ಆರ್.ನಗರ ಕ್ಷೇತ್ರದ ಅಭಿವೃದ್ಧಿ ಹೇಗಿತ್ತು, ಈಗ ಹೇಗಿದೆ ಅಂತ ಅವಲೋಕನ ಮಾಡಿ ಮಾತನಾಡಲಿ’ ಎಂದು ತಿರುಗೇಟು ನೀಡಿದರು.
ನನ್ನ ಮೇಲೆ ಎಷ್ಟೇ ಆರೋಪ, ಕುತಂತ್ರಗಳು ನಡೆದರು ಮತದಾರ ನನ್ನ ಕೈಬಿಡಲಿಲ್ಲ. ಇದು ರಾಜ್ಯಕ್ಕೆ ಮಾದರಿಯಾದ ಗೆಲುವು. ಮುಂದಿನ ದಿನಗಳಲ್ಲಿ ಮತ್ತಷ್ಟು ಕೆಲಸ ಮಾಡುತ್ತೇನೆ ಎಂದರು.
‘ಚುನಾವಣೆ ಮುಂದೂಡಿದ್ದು ನನಗೆ ಸಹಕಾರಿ ಆಯ್ತು. ತಪ್ಪು ತಿಳುವಳಿಕೆಯಿಂದ ಬಿಜೆಪಿ ಕಡೆ ಹೋಗುತ್ತಿದ್ದ ಮತಗಳು ಮತ್ತೆ ನಮ್ಮ ಕಡೆ ಬರುವಂತಾಯ್ತು’ ಎಂದರು.
* ಮೈತ್ರಿ ಸರ್ಕಾರದ ನಂತರ ಕಾಂಗ್ರೆಸ್ ಪರಿಸ್ಥಿತಿಯನ್ನು ಎಲ್ಲರೂ ಗಮನಿಸಿದ್ದಾರೆ. ಪಕ್ಷಕ್ಕೆ ಕೆಟ್ಟ ಹೆಸರು ತರಲು ಸಾಕಷ್ಟು ಕೆಲಸ ಮಾಡಲಾಯಿತು. ಆದರೆ, ರಾಜರಾಜೇಶ್ವರಿ ನಗರದ ಮತದಾರರು ಸರಿಯಾದ ಫಲಿತಾಂಶ ನೀಡಿದ್ದಾರೆ.
–ಡಿ.ಕೆ.ಶಿವಕುಮಾರ್, ಶಾಸಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.