ADVERTISEMENT

ಚುನಾವಣಾಧಿಕಾರಿಗೆ ಜೀವ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 10 ಮೇ 2018, 20:05 IST
Last Updated 10 ಮೇ 2018, 20:05 IST

ಬೆಂಗಳೂರು: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿ ರಾಜೇಶ್‌ ಅವರಿಗೆ ಜೆಡಿಎಸ್‌ ಕಾರ್ಯಕರ್ತರು ಜೀವ ಬೆದರಿಕೆ ಹಾಕಿದ್ದು, ಈ ಸಂಬಂಧ ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‍ಪೈಪ್‌ಲೈನ್ ರಸ್ತೆಯಲ್ಲಿ ಮೇ 8ರಂದು ಸಂಜೆ ಸಾರ್ವಜನಿಕರನ್ನು ಸೇರಿಸಿದ್ದ ಕಾರ್ಯಕರ್ತರು, ಅವರನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದರು.
ಅದೇ ಮಾರ್ಗವಾಗಿ ಹೊರಟಿದ್ದ ರಾಜೇಶ್, ‘ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಸಾರ್ವಜನಿಕವಾಗಿ ಭಾಷಣ ಮಾಡುವಂತಿಲ್ಲ. ನಿಮಗೆ ಅನುಮತಿ ಕೊಟ್ಟವರು ಯಾರು’ ಎಂದು ಪ್ರಶ್ನಿಸಿದ್ದರು.

ಆಗ ಕಾರ್ಯಕರ್ತರು, ‘ಅದನ್ನು ಕೇಳಲು ನೀನು ಯಾರು. ಸುಮ್ಮನೆ ಇಲ್ಲಿಂದ ಹೋಗು. ಇಲ್ಲದಿದ್ದರೆ ಪರಿಣಾಮ ನೆಟ್ಟಗಿರಲ್ಲ’ ಎಂದಿದ್ದರು. ನಿಂದಿಸಿ ಜೀವ ಬೆದರಿಕೆವೊಡ್ಡಿದ್ದರು ಎಂದು ಪೊಲೀಸರು ಹೇಳಿದರು.

ADVERTISEMENT

ರಾಜೇಶ್ ನೀಡಿದ್ದ ದೂರಿನನ್ವಯ ಗಂಭೀರವಲ್ಲದ ಪ್ರಕರಣ (ಎನ್‌ಸಿಆರ್‌) ದಾಖಲಿಸಿಕೊಂಡಿದ್ದೆವು. ಪ್ರಕರಣವು ಗಂಭೀರವಾಗಿದ್ದರಿಂದ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸುವಂತೆ ನ್ಯಾಯಾಲಯ ಸೂಚಿಸಿತ್ತು ಎಂದರು.

‘ಕೆಎ 04 ಎಂಕೆ 4404 ಕಾರಿನಲ್ಲಿ ಕಾರ್ಯಕರ್ತರು ಪರಾರಿಯಾಗಿದ್ದಾರೆ. ಅವರನ್ನು ಪತ್ತೆ ಹಚ್ಚುತ್ತೇವೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.