ADVERTISEMENT

ಪ್ರಜಾಪ್ರಭುತ್ವದ ಯಶಸ್ಸಿಗೆ ಕೈಜೋಡಿಸಿ: ಪ್ರೊ.ಸ.ಚಿ.ರಮೇಶ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2019, 9:20 IST
Last Updated 26 ಮಾರ್ಚ್ 2019, 9:20 IST
ಸ.ಚಿ. ರಮೇಶ, ನೂತನ ಕುಲಪತಿ, ಹಂಪಿ ಕನ್ನಡ ವಿಶ್ವವಿದ್ಯಾಲಯ
ಸ.ಚಿ. ರಮೇಶ, ನೂತನ ಕುಲಪತಿ, ಹಂಪಿ ಕನ್ನಡ ವಿಶ್ವವಿದ್ಯಾಲಯ   

ಹೊಸಪೇಟೆ:ಭಾರತವು ಒಂದು ಪ್ರಜಾಸತ್ತಾತ್ಮಕ ದೇಶವಾಗಿದೆ. ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ರಚಿತವಾದ ನಮ್ಮ ಸಂವಿಧಾನದ ಪ್ರಕಾರ ಹದಿನೆಂಟು ವರ್ಷ ಮೇಲಿನ ಪ್ರತಿಯೊಬ್ಬ ಭಾರತೀಯನೂ ಮತ ಚಲಾಯಿಸುವುದು ಅತ್ಯವಶ್ಯವಾಗಿದೆ.

ಪ್ರಜೆಗಳು ನೀಡಿದ ಮತವನ್ನು ಸ್ವೀಕರಿಸಿ, ಅದಕ್ಕೆ ಪೂರಕವಾಗಿ ಸರ್ಕಾರ ನಡೆಸಬೇಕೆಂಬುದೇ ಪ್ರಜಾತಂತ್ರದ ಆಶಯವಾಗಿದೆ. ಸರ್ಕಾರವು ಜನಾದೇಶದಂತೆ ನಡೆಯುತ್ತಿರಬೇಕು. ನಮ್ಮ ದೇಶದ ಜನತೆಗೆ ಅಗತ್ಯವಾಗಿ ಮತ್ತು ಸಕಾಲಕ್ಕೆ ಬೇಕಾದ ಆಹಾರ, ವಸತಿ, ಶಿಕ್ಷಣ, ನೀರು, ಬೆಳಕು, ಔಷಧಿ ಇತ್ಯಾದಿ ಸೌಲಭ್ಯಗಳನ್ನು ನೀಡುವುದು ಮತ್ತು ಅದರ ಬಗ್ಗೆ ಸಮರ್ಪಕ ಅರಿವು, ಹಂಚಿಕೆ ಎಲ್ಲವನ್ನೂ ಸರ್ಕಾರ ಒದಗಿಸಬೇಕಾಗುತ್ತದೆ. ಈ ಕಾರಣಕ್ಕಾಗಿ ಆಯಾ ಪ್ರದೇಶದ ಪರವಾಗಿ ಮತದಾನದ ಮೂಲಕ ಯೋಗ್ಯ ಪ್ರತಿನಿಧಿಗಳನ್ನು ಆರಿಸಿ, ಸರ್ಕಾರ ನಡೆಸಲು ಕಳಿಸುವ ಗುರುತರ ಹೊಣೆಗಾರಿಕೆ ಎಲ್ಲರ ಮೇಲಿದೆ.

ಸಂವಿಧಾನ ನಮಗೆ ನೀಡಿದ ಪರಮಾಧಿಕಾರ ಮತದಾನದ ಹಕ್ಕು. ಅದನ್ನು ಮತದಾರನು ಪವಿತ್ರ ಕರ್ತವ್ಯವೆಂದು ಅರಿತು ಚುನಾವಣೆಯಲ್ಲಿ ಹಕ್ಕನ್ನು ಚಲಾಯಿಸಿ, ರಾಜ್ಯ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಸಹಕರಿಸಿದಾಗ ದೇಶದ ನಾಗರಿಕತೆ ಪಡೆದಿದ್ದಕ್ಕೆ ಸಾರ್ಥಕತೆ ಬರುತ್ತದೆ.

ADVERTISEMENT

ನಮ್ಮ ದೇಶದಲ್ಲಿ ಸಾಮಾಜಿಕ ಅಂತಸ್ತು ಮತ್ತು ಜಾತಿಬೇಧವಿಲ್ಲದೇ ಎಲ್ಲರಿಗೂ ಮತದಾನದ ಹಕ್ಕು ನೀಡಲಾಗಿದೆ. ಈ ಪವಿತ್ರ ಹಕ್ಕನ್ನು ಸರಿಯಾಗಿ ಚಲಾಯಿಸುವ ಮೂಲಕ ದೇಶದ ಅಭಿವೃದ್ಧಿಗೆ ಹಾಗೂ ಪ್ರಜಾಪ್ರಭುತ್ವದ ಯಶಸ್ಸಿಗೆ ಕೈಜೊಡಿಸಬೇಕು. ಇಂದಿನ ಯುವಕರು ಜಾಗೃತಗೊಂಡು ದೇಶದ ಏಳಿಗೆಗಾಗಿ ಮತ್ತು ಸರ್ವತೋಮುಖ ಅಭಿವೃದ್ಧಿಗಾಗಿ ದುಡಿಯುವಂತಹ ನೇತಾರರನ್ನು ಚುನಾಯಿಸಲು ತಪ್ಪದೇ ಮತದಾನ ಮಾಡಬೇಕು.

–ಪ್ರೊ. ಸ.ಚಿ. ರಮೇಶ, ಕುಲಪತಿ,ಹಂಪಿ ಕನ್ನಡ ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.