ಮುಸ್ಸಂಜೆ ಮಾತು ಸಿನಿಮಾ ಬಿಡುಗಡೆಯಾಗಿ 17 ವರ್ಷ: ವಿಶೇಷ ವಿಡಿಯೊ ಹಂಚಿಕೊಂಡ ಸುದೀಪ್
ಬೆಂಗಳೂರು: ಚಿತ್ರರಸಿಕರ ಮನ ಗೆದ್ದಿದ್ದ ಮುಸ್ಸಂಜೆ ಮಾತು ಸಿನಿಮಾ ಬಿಡುಗಡೆಯಾಗಿ ಇಂದಿಗೆ 17 ವರ್ಷ ಗತಿಸಿದೆ. ಈ ಹಿನ್ನೆಲೆಯಲ್ಲಿ ನಟ ಸುದೀಪ್ ಮುಸ್ಸಂಜೆ ಮಾತು ಸಿನಿಮಾ ಬಗ್ಗೆ ವಿಶೇಷ ವಿಡಿಯೊ ಹಂಚಿಕೊಂಡಿದ್ದಾರೆ.
ಮುಸ್ಸಂಜೆ ಮಾತು ಸಿನಿಮಾ ನನ್ನ ವೃತ್ತಿ ಜೀವನದಲ್ಲಿ ದೊಡ್ಡ ಸ್ಥಾನದಲ್ಲಿ ನಿಲ್ಲುವಂತದ್ದು. ವೃತ್ತಿ ಬದುಕಿಗೆ ಹೊಳಪು ನೀಡಿದೆ. ಅಂತಹ ಅದ್ಭುತ ಸಿನಿಮಾ ಬಿಡುಗಡೆಯಾಗಿ 17 ವರ್ಷ ಗತಿಸಿದರೂ ಇಂದಿಗೂ ಏನಾಗಲಿ ಮುಂದೆ ಸಾಗು ನೀ ಹಾಡು ಎಲ್ಲರ ಎದೆಯಾಳದಲ್ಲಿದೆ ಎಂದಿದ್ದಾರೆ.
ವಿಶೇಷ ಎಂದರೆ ಏನಾಗಲಿ ಮುಂದೆ ಸಾಗು ನೀ ಹಾಡು ನನ್ನ ಅಮ್ಮ ಸಾಯುವವರೆಗೂ ಅವರ ಕಾಲರ್ ಟ್ಯೂನ್ ಆಗಿತ್ತು. ತಂದೆಯದ್ದೂ ಇಂದಿಗೂ ಅದೇ ಕಾಲರ್ ಟ್ಯೂನ್. ಲಕ್ಷಾಂತರ ಮನಸ್ಸುಗಳಿಗೆ ಸ್ಫೂರ್ತಿ ತುಂಬಿದ ಹಾಡಿನಲ್ಲಿ ನಾನು ಅಭಿನಯಿಸಿರುವುದು ನನಗೆ ಹೆಮ್ಮೆ ಮೂಡಿಸುತ್ತದೆ ಎಂದಿದ್ದಾರೆ.
ಮುಸ್ಸಂಜೆ ಮಾತು ಸಿನಿಮಾ ಶೂಟಿಂಗ್ ಸಮಯದಲ್ಲಿ ನಾನು ದಪ್ಪಗಾಗಿದ್ದೆ. ಆದರೆ, ರೇಡಿಯೊ ಜಾಕಿ ಪಾತ್ರ ಮಾಡುವಾಗ ಬೆಂಗಳೂರಿನಲ್ಲಿರುವ ಎಲ್ಲ ರೇಡಿಯೊ ಜಾಕಿಗಳನ್ನು ಭೇಟಿಯಾಗಿದ್ದೆ. ಅವರ ಉಡುಗೆ ತೊಡುಗೆಗಳು ನನ್ನ ಆಕರ್ಷಿಸಿದ್ದವು. ಸಡಿಲವಾದ ಶರ್ಟ್, ಪ್ಯಾಂಟ್ ತೊಡುತ್ತಿದ್ದರು. ಆದರೆ, ದಪ್ಪಗಿದ್ದ ನನಗೆ ಆ ಉಡುಗೆಗಳು ಹೊಂದುತ್ತಿರಲಿಲ್ಲ. ನಂತರ ಸಾಕಷ್ಟು ವರ್ಕೌಟ್ ಮಾಡಿ ತುಂಬಾ ತೆಳ್ಳಗಾಗಿದ್ದೆ. ಆ ಪಾತ್ರದಲ್ಲಿ ನನ್ನನ್ನು ಜನ ಸ್ವೀಕರಿಸಿದ್ದು ಅದ್ಭುತವಾಗಿದ್ದು ಎಂದಿದ್ದಾರೆ.
ಇಂದಿಗೂ ಕನ್ನಡ ಸಿನಿಪ್ರಿಯರು ಗುನುಗುವಂತ ಅದ್ಭುತ ಹಾಡನ್ನು ನೀಡಿದ್ದ ಸಂಗೀತ ನಿರ್ದೇಶಕ ವಿ ಶ್ರೀಧರ್ ಅವರಿಗೆ, ಹಾಗೂ ನಿರ್ದೇಶಕ ಮುಸ್ಸಂಜೆ ಮಹೇಶ್, ನಟಿ ರಮ್ಯ, ಅನು ಪ್ರಭಾಕರ್ ಸೇರಿದಂತೆ ಚಿತ್ರತಂಡದವನ್ನು, ರೇಡಿಯೊ ಜಾಕಿಗಳನ್ನು ಸುದೀಪ್ ಸ್ಮರಿಸಿಕೊಂಡು ಧನ್ಯವಾದ ಸಲ್ಲಿಸಿದ್ದಾರೆ.
2008 ಮೇ 16 ರಂದು ಬಿಡುಗಡೆಯಾಗಿದ್ದ ಮುಸ್ಸಂಜೆ ಮಾತು ಸಿನಿಮಾ ಚಿತ್ರರಸಿಕರ ಮನ ಗೆದ್ದಿದ್ದಲ್ಲದೇ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆ ಕಂಡಿತ್ತು. ನಟ ಸುದೀಪ್ ವೃತ್ತಿ ಜೀವನಕ್ಕೂ ತಿರುವು ಕೊಟ್ಟಿತ್ತು. ಮುಸ್ಸಂಜೆ ಮಹೇಶ್ ನಿರ್ದೇಶಿಸಿದ್ದ ಈ ಸಿನಿಮಾವನ್ನು ಸುರೇಶ್ ಜೈನ್ ನಿರ್ಮಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.