ಟಾಕ್ಸಿಕ್ ಚಿತ್ರದ ಪೋಸ್ಟರ್
ಕಳೆದ ವರ್ಷದ(2024) ಮೊದಲಾರ್ಧ ಸ್ಟಾರ್ ನಟರ ಸಿನಿಮಾಗಳಿಲ್ಲದೆ ಚಂದನವನ ಸೊರಗಿತ್ತು. ಈ ವರ್ಷವೂ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ. ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪೈಕಿ ಹಲವು ಇನ್ನೂ ಚಿತ್ರೀಕರಣದ ಹಂತದಲ್ಲೇ ಇವೆ. ವರ್ಷದ ಮೊದಲಾರ್ಧದಲ್ಲಿ ಸ್ಟಾರ್ ನಟರ ಒಂದೆರಡು ಸಿನಿಮಾಗಳಷ್ಟೇ ತೆರೆಕಾಣುವ ಸಾಧ್ಯತೆ ಇದೆ. 2025ರ ಬಹುನಿರೀಕ್ಷಿತ ಸಿನಿಮಾಗಳ ಮುನ್ನೋಟವನ್ನು ಅಭಿಲಾಷ್ ಪಿ.ಎಸ್. ನೀಡಿದ್ದಾರೆ
‘ಕಾಂತಾರ’ ಪ್ರೀಕ್ವೆಲ್
ನಟ ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ‘ಕಾಂತಾರ’ ಸಿನಿಮಾ ಪ್ರೀಕ್ವೆಲ್ನ ಶೂಟಿಂಗ್ ಶೇ 60 ಪೂರ್ಣಗೊಂಡಿದೆ. ಕುಂದಾಪುರ, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ಮಾರ್ಚ್–ಏಪ್ರಿಲ್ ವೇಳೆಗೆ ಚಿತ್ರೀಕರಣ ಪೂರ್ಣಗೊಂಡು ಪೋಸ್ಟ್ ಪ್ರೊಡಕ್ಷನ್ಗೆ ಧುಮುಕಲಿದೆ ಚಿತ್ರತಂಡ. ಅಕ್ಟೋಬರ್ 2ರಂದು ಸಿನಿಮಾ ಬಿಡುಗಡೆಯಾಗಲಿದೆ. ಚಿತ್ರದ ಸಾಹಸ ನಿರ್ದೇಶನಕ್ಕಾಗಿ ಟೊಡರ್ ಲ್ಯಾಜರೋವ್ ತಂಡ ಸೇರಿಕೊಂಡಿದ್ದು, ಕನ್ನಡ, ಇಂಗ್ಲಿಷ್ ಸೇರಿದಂತೆ ಏಳು ಭಾಷೆಗಳಲ್ಲಿ ಏಕಕಾಲದಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಅರವಿಂದ್ ಎಸ್.ಕಶ್ಯಪ್ ಅವರ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ.
‘ಟಾಕ್ಸಿಕ್’
ಯಶ್ ನಟನೆಯ ಈ ಸಿನಿಮಾ ಚಿತ್ರೀಕರಣದ ಹಂತದಲ್ಲಿದೆ. ಗೀತು ಮೋಹನ್ದಾಸ್ ನಿರ್ದೇಶನ ಮಾಡುತ್ತಿರುವ ಈ ಚಿತ್ರದ //ಹೀರೊ ಟೀಸರ್// ಯಶ್ ಜನ್ಮದಿನದಂದು(ಜ.8)ಬಿಡುಗಡೆಯಾಗಿದೆ. ರೆಟ್ರೋ ಶೈಲಿಯಲ್ಲಿ ಚಿತ್ರದ ದೃಶ್ಯಗಳಿವೆ. ಬೆಂಗಳೂರಿನ ಎಚ್ಎಂಟಿ ಮೈದಾನದಲ್ಲಿ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಿದ್ದ ಚಿತ್ರತಂಡ ಮುಂಬೈನಲ್ಲಿ ಚಿತ್ರೀಕರಣ ನಡೆಸುತ್ತಿದೆ. ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಾಣ ಮಾಡುತ್ತಿದೆ. ಏಪ್ರಿಲ್ 10ರಂದು ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿತ್ತಾದರೂ, ಸಿನಿಮಾ ಮುಂದೂಡಲ್ಪಡುವ ಲಕ್ಷಣಗಳೇ ಹೆಚ್ಚಾಗಿ ಕಾಣಿಸುತ್ತಿದೆ.
‘45’
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಆ್ಯಕ್ಷನ್ ಕಟ್ ಹೇಳುತ್ತಿರುವ, ಶಿವರಾಜ್ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ.ಶೆಟ್ಟಿ ಜೊತೆಯಾಗಿ ಕಾಣಿಸಿಕೊಳ್ಳಲಿರುವ ಈ ಸಿನಿಮಾ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಜ.14ಕ್ಕೆ ಎಂದರೆ ಸಂಕ್ರಾಂತಿಗೆ ಸಿನಿಮಾ ರಿಲೀಸ್ ದಿನಾಂಕ ಘೋಷಣೆಯಾಗಲಿದೆ. ಬಿಗ್ಬಜೆಟ್ನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾದ ಗ್ರಾಫಿಕ್ಸ್ ಕೆಲಸಗಳನ್ನು ‘MARZ’ ವಿಎಫ್ಎಕ್ಸ್ ಕಂಪನಿ ಮಾಡುತ್ತಿದೆ. ಹಾಲಿವುಡ್ನ ನೂರೈವತ್ತಕ್ಕೂ ಅಧಿಕ ಸಿನಿಮಾಗಳಿಗೆ ವಿಎಫ್ಎಕ್ಸ್ ಮಾಡಿರುವ ಈ ಕಂಪನಿ, ಮೊದಲ ಬಾರಿಗೆ ಕನ್ನಡ ಸಿನಿಮಾವೊಂದಕ್ಕೆ ಕೆಲಸ ಮಾಡುತ್ತಿದೆ. ಅರ್ಜುನ್ ಜನ್ಯ ನಿರ್ದೇಶನದ ಚೊಚ್ಚಲ ಚಿತ್ರವನ್ನು ಎಂ. ರಮೇಶ್ ರೆಡ್ಡಿ ಅವರು ತಮ್ಮ ‘ಸೂರಜ್ ಪ್ರೊಡಕ್ಷನ್’ ಬ್ಯಾನರ್ನಲ್ಲಿ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳದಲ್ಲಿ ತೆರೆಕಾಣಲಿದೆ.
‘ಡೆವಿಲ್’
ದರ್ಶನ್ ನಟನೆಯ ಈ ಸಿನಿಮಾದ ಚಿತ್ರೀಕರಣ ಶೇ 50ರಷ್ಟು ಪೂರ್ಣಗೊಂಡಿದ್ದು, ಸದ್ಯಕ್ಕೆ ಚಿತ್ರೀಕರಣ ಸ್ಥಗಿತಗೊಂಡಿದೆ. ದರ್ಶನ್ ಇತ್ತೀಚೆಗೆ ಚಿತ್ರದ ಡಬ್ಬಿಂಗ್ ಆರಂಭಿಸಿದ್ದಾರೆ ಎನ್ನಲಾಗಿದ್ದು, ಚಿತ್ರತಂಡ ಅಧಿಕೃತವಾಗಿ ಈ ಬಗ್ಗೆ ಮಾಹಿತಿ ನೀಡಿಲ್ಲ. ಫೆಬ್ರುವರಿ ನಂತರ ಚಿತ್ರೀಕರಣ ಪುನರಾರಂಭವಾಗಲಿದೆ ಎನ್ನುವ ಮಾಹಿತಿಯಿದ್ದು, ವರ್ಷಾಂತ್ಯಕ್ಕೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ. ಜೆ.ಜಯಮ್ಮ ನಿರ್ಮಾಣದ ಈ ಚಿತ್ರವನ್ನು ಪ್ರಕಾಶ್ ವೀರ್ ನಿರ್ದೇಶಿಸುತ್ತಿದ್ದಾರೆ. ಈ ಹಿಂದಿನ ಯೋಜನೆಯಂತೆ 2024ರ ಡಿಸೆಂಬರ್ 25ರಂದು ಸಿನಿಮಾ ಬಿಡುಗಡೆಯಾಗಬೇಕಿತ್ತು. ಕೊಲೆ ಆರೋಪದಲ್ಲಿ ನಟ ದರ್ಶನ್ ಬಂಧನದ ಬಳಿಕ ಚಿತ್ರೀಕರಣ ಸ್ಥಗಿತಗೊಂಡಿತ್ತು.
‘ಕೆಡಿ’
ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಟನೆಯ ‘ಕೆಡಿ’ ಯುಗಾದಿ ವೇಳೆಗೆ ತೆರೆಗೆ ಬರುವ ಸಾಧ್ಯತೆ ಇದೆ. ‘ಕೆಡಿ’ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದ್ದು ಎರಡು ಹಾಡುಗಳ ಶೂಟಿಂಗ್ ಬಾಕಿ ಇದೆ. 1970ರ ಕಾಲಘಟ್ಟದಲ್ಲಿ ನಡೆಯುವ ಕಥೆಯನ್ನು ಈ ಸಿನಿಮಾ ಹೊಂದಿದ್ದು, ಆಗಿನ ಬೆಂಗಳೂರನ್ನು ಮೋಹನ್ ಬಿ.ಕೆರೆ ಸೆಟ್ ಮೂಲಕ ಮರುಸೃಷ್ಟಿಸಿದ್ದಾರೆ. ‘ಏಕ್ ಲವ್ ಯಾ’ ಸಿನಿಮಾ ನಂತರ ಪ್ರೇಮ್ ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರ ಇದಾಗಿದ್ದು, ಚಿತ್ರವನ್ನು ಕೆ.ವಿ.ಎನ್. ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ. ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಬಾಲಿವುಡ್ನ ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್ ತಾರಾಬಳಗದಲ್ಲಿದ್ದಾರೆ.
‘ಅಣ್ಣ ಫ್ರಂ ಮೆಕ್ಸಿಕೊ’ ಮತ್ತು ‘ಜಿಂಗೋ’
‘ಬಡವ ರಾಸ್ಕಲ್’ ಸಿನಿಮಾ ಖ್ಯಾತಿಯ ಶಂಕರ್ ಗುರು ನಿರ್ದೇಶನದ, ಧನಂಜಯ ನಟನೆಯ ‘ಅಣ್ಣ ಫ್ರಂ ಮೆಕ್ಸಿಕೊ’ ಸಿನಿಮಾದ ಚಿತ್ರೀಕರಣ ಅಂತಿಮ ಹಂತದಲ್ಲಿದ್ದು, ಹಾಡುಗಳ ಚಿತ್ರೀಕರಣ ಬಾಕಿ ಇದೆ. ಮೈಸೂರು, ಬೆಂಗಳೂರಿನಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದ್ದು, ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸಿದ್ದಾರೆ. ಧನಂಜಯ ನಟನೆಯ ಮತ್ತೊಂದು ಸಿನಿಮಾ, ಶಶಾಂಕ್ ಸೋಗಾಲ್ ನಿರ್ದೇಶನದ ‘ಜಿಂಗೋ’ ಮಾರ್ಚ್ನಲ್ಲಿ ಸೆಟ್ಟೇರಲಿದ್ದು, ಮೂರು ತಿಂಗಳು ಚಿತ್ರೀಕರಣ ನಡೆಯಲಿದೆ. ದೀಪಾವಳಿಗೆ ಈ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ.
‘Yours's sincerely ರಾಮ್’
ರಮೇಶ್ ಅರವಿಂದ್ ಹಾಗೂ ಗಣೇಶ್ ನಟನೆಯ ಚಿತ್ರವಿದು. ಈ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ನಾಯಕಿಯ ಹುಡುಕಾಟದಲ್ಲಿ ಚಿತ್ರತಂಡವಿದೆ. ಕಳೆದ ಸೆಪ್ಟೆಂಬರ್ನಲ್ಲಿ ಈ ಚಿತ್ರ ಸೆಟ್ಟೇರಿತ್ತು. ‘ಪುಷ್ಪಕ ವಿಮಾನ’, ‘ಇನ್ಸ್ಪೆಕ್ಟರ್ ವಿಕ್ರಮ್’ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ವಿಖ್ಯಾತ್ ಎ.ಆರ್. ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ದಿ ರಾಯಲ್ ಸ್ಟುಡಿಯೋಸ್ ಬ್ಯಾನರ್ನಡಿ ಸತ್ಯ ರಾಯಲ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಟೀಸರ್ ಮೂಲಕ ಕುತೂಹಲ ಹುಟ್ಟಿಸಿರುವ ಈ ಸಿನಿಮಾ ಈ ವರ್ಷದ ದ್ವಿತೀಯಾರ್ಧದಲ್ಲಿ ಬಿಡುಗಡೆಯಾಗಲಿದೆ.
‘ಕರಾವಳಿ’
ಗುರುದತ್ ಗಾಣಿಗ ನಿರ್ದೇಶನದ ಈ ಸಿನಿಮಾ ಕರಾವಳಿಯ ಮತ್ತೊಂದು ಕಥೆ ಹೊತ್ತುಬಂದಿದೆ. ಈಗಾಗಲೇ ಚಿತ್ರದ ಶೇ 80ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಏಪ್ರಿಲ್ ವೇಳೆಗೆ ಸಿನಿಮಾ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ನಾಯಕನಾಗಿ ಪ್ರಜ್ವಲ್ ದೇವರಾಜ್ ನಟಿಸಿದ್ದು, ಸಂಪದ ನಾಯಕಿಯಾಗಿದ್ದಾರೆ. ಕರಾವಳಿ ಸುತ್ತಮುತ್ತ ಚಿತ್ರೀಕರಣ ನಡೆದಿದ್ದು, ಕಂಬಳ, ಯಕ್ಷಗಾನ ಈ ಸಿನಿಮಾದ ಹೈಲೈಟ್ಸ್. ಮನುಷ್ಯ ಮತ್ತು ಪ್ರಾಣಿ ಮಧ್ಯೆ ನಡೆಯುವ ಸಂಘರ್ಷದ ಕಥೆ ಇದಾಗಿದ್ದು, ಇತ್ತೀಚೆಗೆ ಚಿತ್ರದ ‘ಪ್ರತಿಷ್ಠೆಯ ಪಿಶಾಚಿ’ ಎಂಬ ಟೀಸರ್ ಬಿಡುಗಡೆಯಾಗಿದೆ. ನಟರಾದ ರಮೇಶ್ ಇಂದಿರಾ, ಮಿತ್ರ ತಾರಾಬಳಗದಲ್ಲಿದ್ದಾರೆ.
‘ಎಕ್ಕ’
‘ರತ್ನನ್ ಪ್ರಪಂಚ’ ಖ್ಯಾತಿಯ ರೋಹಿತ್ ಪದಕಿ ನಿರ್ದೇಶನದ, ಯುವ ರಾಜ್ಕುಮಾರ್ ನಟನೆಯ ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಸಿನಿಮಾ ಜೂನ್ 6ರಂದು ತೆರೆಕಾಣಲಿದೆ. ಇದು ಯುವ ರಾಜ್ಕುಮಾರ್ ಎರಡನೇ ಸಿನಿಮಾವಾಗಿದ್ದು, ಭೂಗತ ಜಗತ್ತಿನ ಕಥೆಯನ್ನು ಸಿನಿಮಾ ಹೊಂದಿದೆ. ಯುವಗೆ ಜೋಡಿಯಾಗಿ ಸಂಪದ ನಟಿಸಿದ್ದಾರೆ. ಕಾಶ್ಮೀರ, ಬೆಂಗಳೂರು, ಮೈಸೂರು, ಮುಂಬೈ, ಕೋಲ್ಕತ್ತ ಹಾಗೂ ದೆಹಲಿಯಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ. ಚಿತ್ರವನ್ನು ಪಿ.ಆರ್.ಕೆ.ಪ್ರೊಡಕ್ಷನ್ಸ್, ಜಯಣ್ಣ ಕಂಬೈನ್ಸ್ ಹಾಗೂ ಕೆ.ಆರ್.ಜಿ.ಸ್ಟೂಡಿಯೊಸ್ ಬ್ಯಾನರ್ ಅಡಿಯಲ್ಲಿ ಜಂಟಿಯಾಗಿ ನಿರ್ಮಿಸಲಾಗುತ್ತಿದೆ.
ದುನಿಯಾ ವಿಜಯ್ ‘29’
ದುನಿಯಾ ವಿಜಯ್ ನಟನೆಯ 29ನೇ ಸಿನಿಮಾವನ್ನು ‘ಕಾಟೇರ’ ಕಥೆಗಾರ ಜಡೇಶ್ ಕೆ.ಹಂಪಿ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಶೇ 60 ಪೂರ್ಣಗೊಂಡಿದ್ದು, //ಆ್ಯಕ್ಷನ್ ಬ್ಲಾಕ್ಸ್// ಬಾಕಿ ಇದೆ. ಮೇ ಅಥವಾ ಜೂನ್ನಲ್ಲಿ ಈ ಸಿನಿಮಾ ತೆರೆ ಕಾಣುವ ಸಾಧ್ಯತೆ ಇದೆ. ಜ.20ಕ್ಕೆ ದುನಿಯಾ ವಿಜಯ್ ಜನ್ಮದಿನವಿದ್ದು, ಆ ಸಂದರ್ಭದಲ್ಲಿ ಚಿತ್ರತಂಡ ಸಿನಿಮಾ ಕುರಿತು ಅಪ್ಡೇಟ್ ನೀಡುವ ಸಾಧ್ಯತೆ ಇದೆ. ಶರಣ್ ನಟನೆಯ ‘ಗುರುಶಿಷ್ಯರು’ ಸಿನಿಮಾ ಮೂಲಕ ತಮ್ಮ ನಿರ್ದೇಶನದ ಸಾಮರ್ಥ್ಯವನ್ನು ಜಡೇಶ್ ಸಾಬೀತುಪಡಿಸಿದ್ದರು. ‘ಇದು ಆಳಿದವರ ಕಥೆಯಲ್ಲ, ಅಳಿದು ಉಳಿದವರ ಕಥೆ..!’ ಎನ್ನುವ ಅಡಿಬರಹ ಈ ಸಿನಿಮಾಗಿದ್ದು, ವಿಜಯ್ ಅವರ ಹಿರಿಯ ಮಗಳು ಮೋನಿಕಾ ತಂದೆಯ ಜೊತೆಗೆ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಭೀಮ’ ಸಿನಿಮಾಗೆ ಬಂಡವಾಳ ಹೂಡಿರುವ ಜಗದೀಶ್ ಗೌಡ ಈ ಸಿನಿಮಾ ನಿರ್ಮಾಣ ಮಾಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.