‘ಸೈರಾ ನರಸಿಂಹ ರೆಡ್ಡಿ’ ಚಿತ್ರ ನಟ ಚಿರಂಜೀವಿ ಅವರ ಹನ್ನೆರಡು ವರ್ಷದ ಕನಸು. ಅಪ್ಪನ ಆ ಕನಸಿಗೆ ಕಸುವು ತುಂಬಿದ್ದು ಪುತ್ರ ರಾಮ್ ಚರಣ್ ತೇಜ. ಚಿತ್ರ ಪ್ರೀರಿಲೀಸ್ ಕಾರ್ಯಕ್ರಮದಲ್ಲಿ ಕನಸನ್ನು ಈಡೇರಿಸಿದ ಮಗನನ್ನು ಬಿಗಿದಪ್ಪಿ ಭಾವುಕರಾಗಿದ್ದರು ಮೆಗಾಸ್ಟಾರ್.
‘ಸೈರಾ’ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಎಬ್ಬಿಸಿದ ಅಬ್ಬರಕ್ಕೆ ಚಿರಂಜೀವಿ ಅವರೇ ಚಕಿತರಾಗಿದ್ದು ಉಂಟು. ಈಗ ಅಂತಹದ್ದೇ ಅಚ್ಚರಿಯ ಸಂಗತಿಯೊಂದು ಟಾಲಿವುಡ್ ಅಂಗಳದಿಂದ ಹೊರಬಿದ್ದಿದೆ. ಚಿರಂಜೀವಿ ಮತ್ತು ರಾಮ್ ಚರಣ್ ಇಬ್ಬರೂ ಒಟ್ಟಾಗಿ ಸಿನಿಮಾದಲ್ಲಿ ನಟಿಸುತ್ತಿರುವ ಕುರಿತು ಚಿರಂಜೀವಿ ಅವರೇ ಸುಳಿವು ನೀಡಿದ್ದಾರೆ.
ಹನ್ನೆರಡು ವರ್ಷದ ಹಿಂದೆ ಎಸ್.ಎಸ್. ರಾಜಮೌಳಿ ನಿರ್ದೇಶಿಸಿದ್ದ ‘ಮಗಧೀರ’ ಚಿತ್ರ ರಾಮ್ ಚರಣ್ಗೆ ಟಾಲಿವುಡ್ನಲ್ಲಿ ಭದ್ರನೆಲೆಗೆ ಬದಗಿಸಿತ್ತು. ಆ ಚಿತ್ರದಲ್ಲಿ ಚಿರಂಜೀವಿಯೂ ನಟಿಸಿದ್ದರು. ಈಗ ಇಬ್ಬರೂ ಪರದೆ ಮೇಲೆ ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಅಂದಹಾಗೆ ಅಪ್ಪ ಮತ್ತು ಪುತ್ರನ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ಕೊರಟಾಲ ಶಿವ. ನಟ ಜೂನಿಯರ್ ಎನ್ಟಿಆರ್ ನಾಯಕರಾಗಿ ನಟಿಸಿದ್ದ ‘ಜನತಾ ಗ್ಯಾರೇಜ್’ ಹಾಗೂ ನಟ ಮಹೇಶ್ ಬಾಬು ನಟನೆಯ ‘ಭರತ ಆನೆ ನೇನು’ ಚಿತ್ರವನ್ನು ಶಿವ ಅವರೇ ನಿರ್ದೇಶನ ಮಾಡಿದ್ದರು. ‘ಜನತಾ ಗ್ಯಾರೇಜ್’ ಚಿತ್ರ ಸೂಪರ್ ಹಿಟ್ ಆಗಿತ್ತು.ಸೋಲಿನ ಸುಳಿಯಲ್ಲಿ ಸಿಲುಕಿದ್ದ ಜೂನಿಯರ್ ಎನ್ಟಿಆರ್ಗೆ ಹೊಸ ಹುರುಪು ನೀಡಿತ್ತು.
ಪ್ರಸ್ತುತ ಚಿರಂಜೀವಿ ಮತ್ತು ರಾಮ್ ಚರಣ್ಗೆ ಅವರು ಕಥೆ ಹೊಸೆಯುತ್ತಿದ್ದಾರಂತೆ. ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆಯಂತೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.