‘ಡೆಡ್ಲಿ ಸೋಮ’ ಸಿನಿಮಾ ಖ್ಯಾತಿಯ ನಟ ಆದಿತ್ಯ ಹಾಗೂ ಅದಿತಿ ಪ್ರಭುದೇವ ‘ಡಿ’ ಸಿನಿಮಾದ ಮೂಲಕ ತೆರೆ ಮೇಲೆ ಒಂದಾಗಲಿದ್ದಾರೆ. ಈ ಥ್ರಿಲ್ಲರ್ ಸಿನಿಮಾಕ್ಕೆ ಎಸ್. ನಾರಾಯಣ್ ನಿರ್ದೇಶನವಿದೆ. ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಹೊಸ ವರ್ಷದ ದಿನದಂದು ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿದ್ದಾರೆ.
‘ನನ್ನ ಈ ಹೊಸ ವರ್ಷ ಈ ರೀತಿ ಆರಂಭವಾಗುತ್ತದೆ ಎಂಬುದನ್ನು ನಾನು ಕಲ್ಪನೆಯೂ ಮಾಡಿರಲಿಲ್ಲ. ಚಿತ್ರದ ಶೀರ್ಷಿಕೆ ಬಿಡುಗಡೆ ಆಗಿದೆ. ಸದ್ಯದಲ್ಲೇ ಶೂಟಿಂಗ್ ಕೂಡ ಆರಂಭವಾಗಲಿದೆ. ಮೊದಲ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ’ ಎಂದು ಚಿತ್ರದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ ಆದಿತ್ಯ.
‘ಇದೊಂದು ಸೇಡಿನ ಅಂಶ ಇರುವ ಥ್ರಿಲ್ಲರ್ ಚಿತ್ರ. ಎಸ್. ನಾರಾಯಣ್ ಅವರ ಪ್ರತೀ ಚಿತ್ರದಂತೆ ಇದರಲ್ಲೂ ಕೌಟುಂಬಿಕ ಮನರಂಜನೆ ಇದೆ. ನಮ್ಮೆಲ್ಲರ ವೃತ್ತಿ ಬದುಕಿಗೆ ಇದೊಂದು ಭಿನ್ನ ಚಿತ್ರ ಹಾಗೂ ಪಾತ್ರವಾಗಲಿದೆ. ನಮ್ಮೆಲ್ಲರಿಗೂ ಚಿತ್ರದ ಬಗ್ಗೆ ಕೌತುಕ ಹೆಚ್ಚಿದೆ. ಇದರಲ್ಲಿ ಅನೇಕ ಆ್ಯಕ್ಷನ್ ದೃಶ್ಯಗಳೂ ಇವೆ. ನಾನು ಈಗಾಗಲೇ ಅದಿತಿ ಜೊತೆ ಶೂಟಿಂಗ್ನಲ್ಲಿ ಭಾಗವಹಿಸಿದ್ದೇನೆ, ಅವರು ಉತ್ತಮ ನಟಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರೊಂದಿಗೆ ಕೆಲಸ ಮಾಡುವುದು ಖುಷಿ ಇದೆ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.